ಪ್ರತಿನಿಧಿ ವರದಿ ಮೈಸೂರು
ಸಾಧಿಸುವ ಛಲವೊಂದಿದ್ದರೆ ಬದುಕಿನಲ್ಲಿ ಏನು ಬೇಕಾದರು ಸಾಧಿಸಬಹುದು ಎಂಬುದಕ್ಕೆ ನಗರದ ವಿಶೇಷಚೇತನರಾದ ಎಂ. ಸ್ಫಟಿಕ ಸಾಕ್ಷಿಯಾಗಿದ್ದಾರೆ. ನವದೆಹಲಿಯ ಮಾಡ್ರನ್ ಸ್ಕೂಲ್ ಬರಖಾಂಬ ವತಿಯಿಂದ ಮಾ. 27ರಿಂದ 31ರವರೆಗೆ ನಡೆಸಿದ ವಿಶೇಷ ಚೇತನರ ರಾಷ್ಟ್ರೀಯ ಚಾಂಪಿಯನ್ಶಿಪ್ ಲಾಂಗ್ ಟೆನ್ನಿಸ್ -2024ರ ಸ್ಪರ್ಧೆಯಲ್ಲಿ ಕರ್ನಾಟಕ ರಾಜ್ಯದಿಂದ ಪ್ರತಿನಿಧಿಸಿದ್ದ ಎಂ. ಸ್ಫಟಿಕ ಅವರು ತೃತೀಯ ಬಹುಮಾನ ಪಡೆದು ಸಾಧನೆ ಮಾಡಿದ್ದಾರೆ. ನಗರ ಪಾಲಿಕೆ ಮಾಜಿ ಸದಸ್ಯ ಎಸ್ಬಿಎಂ ಮಂಜು ಹಾಗೂ ವೈಶಾಲಿ ದಂಪತಿಯ ಪುತ್ರಿಯಾದ ಸ್ಫಟಿಕ ಅವರು ಪ್ರಸ್ತುತ ಮೈಸೂರಿನ ಮೈತ್ರಿ ಚಾರಿಟಬಲ್ ಟ್ರಸ್ಟ್ನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಸ್ಫಟಿಕ ಅವರಿಗೆ ಜಯಪ್ರಕಾಶ್ ಅವರು ತರಬೇತುದಾರರಾಗಿದ್ದಾರೆ. ಸ್ಫಟಿಕ ಅವರ ಈ ಸಾಧನೆಗೆ ಮೈತ್ರಿ ಚಾರಿಟಬಲ್ಟ್ರಸ್ಟ್ನ ಆಡಳಿತ ಮಂಡಳಿ, ಶಿಕ್ಷಕರು, ಸಿಬ್ಬಂದಿ ಅಭಿನಂದಿಸಿದ್ದಾರೆ.