ಮೈಸೂರು, ಫೆಬ್ರವರಿ 18, 2026: ಜಿಲ್ಲೆಯ ಟಿ. ನರಸೀಪುರ ತಾಲ್ಲೂಕಿನ ಕರುಹಟ್ಟಿ ಗ್ರಾಮದಲ್ಲಿ ಹುಲಿ ಕಾಣಿಸಿಕೊಂಡಿದ್ದು, ಗ್ರಾಮಸ್ಥರಲ್ಲಿ ತೀವ್ರ ಆತಂಕ ಮನೆಮಾಡಿದೆ. ಕಳೆದ ಮಧ್ಯರಾತ್ರಿ ರೈತರೊಬ್ಬರು ಟ್ರಾಕ್ಟರ್ನಲ್ಲಿ ಬರುತ್ತಿದ್ದಾಗ ಗ್ರಾಮದ ಕೆರೆಯ ಪಕ್ಕದಲ್ಲೇ ಹುಲಿ ಕುಳಿತಿರುವುದು ಕಂಡುಬಂದಿದೆ.
ರೈತ ಟ್ರಾಕ್ಟರ್ ಚಲಾಯಿಸಿಕೊಂಡು ಬರುತ್ತಿದ್ದ ವೇಳೆ ಏಕಾಏಕಿ ರಸ್ತೆಯ ಪಕ್ಕದ ಕೆರೆಯ ಬಳಿ ಹುಲಿ ಪ್ರತ್ಯಕ್ಷವಾಗಿದ್ದನ್ನು ಕಂಡು ಬೆಚ್ಚಿಬಿದ್ದಿದ್ದಾರೆ. ಕೂಡಲೇ ಧೈರ್ಯ ಪ್ರದರ್ಶಿಸಿದ ಅವರು, ಕೆರೆಯ ಪಕ್ಕದಲ್ಲಿ ಹುಲಿ ಕುಳಿತಿದ್ದ ದೃಶ್ಯವನ್ನು ತಮ್ಮ ಮೊಬೈಲ್ನಲ್ಲಿ ಸೆರೆಹಿಡಿದಿದ್ದಾರೆ. ಈ ವಿಡಿಯೋ ಈಗ ಗ್ರಾಮಸ್ಥರಲ್ಲಿ ಭಯದ ವಾತಾವರಣ ನಿರ್ಮಿಸಿದೆ.
ಇತ್ತೀಚಿನ ದಿನಗಳಲ್ಲಿ ಮೈಸೂರು ಜಿಲ್ಲೆಯ ವಿವಿಧೆಡೆ ಹುಲಿ ಉಪಟಳ ಮಿತಿಮೀರಿದ್ದು, ಇದೀಗ ಕರುಹಟ್ಟಿ ಗ್ರಾಮದ ತೀರಾ ಸಮೀಪದಲ್ಲೇ ಹುಲಿ ಬೀಡು ಬಿಟ್ಟಿರುವುದು ರೈತರನ್ನು ಆತಂಕಕ್ಕೆ ತಳ್ಳಿದೆ. ಅರಣ್ಯ ಇಲಾಖೆಯ ಅಧಿಕಾರಿಗಳು ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ, ಕಾರ್ಯಾಚರಣೆ ನಡೆಸುವ ಮೂಲಕ ಹುಲಿಯನ್ನು ಸೆರೆಹಿಡಿದು ಬೇರೆಡೆಗೆ ಸ್ಥಳಾಂತರಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
