ಸರಗೂರು, ಫೆಬ್ರವರಿ 5, 2026:ತಾಲೂಕಿನ ಬಿ. ಮಟಕೆರೆಯ ಎಸ್.ಟಿ. ಕಾಲೋನಿಯಲ್ಲಿ ಇಂದು ಮುಂಜಾನೆ ಭೀಕರ ಘಟನೆಯೊಂದು ಸಂಭವಿಸಿದ್ದು, ಕಾಡಾನೆ ದಾಳಿಗೆ ಸಿಲುಕಿ ವ್ಯಕ್ತಿಯೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮಾದ ಎಂಬುವವರೇ ಮೃತಪಟ್ಟ ದುರ್ದೈವಿ.
ಸ್ಥಳೀಯ ದೇವಸ್ಥಾನವೊಂದರಲ್ಲಿ ಕಾವಲುಗಾರನಾಗಿ ಕೆಲಸ ಮಾಡುತ್ತಿದ್ದ ಮಾದ ಅವರು ಇಂದು ಬೆಳ್ಳಂಬೆಳಗ್ಗೆ ಬಹಿರ್ದೆಸೆಗೆಂದು ಬಯಲು ಪ್ರದೇಶಕ್ಕೆ ತೆರಳಿದ್ದರು. ಈ ವೇಳೆ ಗ್ರಾಮದ ಬಳಿಯೇ ರಾತ್ರಿಯಿಂದ ಬೀಡು ಬಿಟ್ಟಿದ್ದ ಕಾಡಾನೆಯು ಹಠಾತ್ತಾಗಿ ಅವರ ಮೇಲೆ ದಾಳಿ ನಡೆಸಿದೆ. ಮಾದ ಅವರ ಚೀರಾಟ ಕೇಳಿದ ಗ್ರಾಮಸ್ಥರು ತಕ್ಷಣ ಸ್ಥಳಕ್ಕೆ ಧಾವಿಸಿ ಆನೆಯನ್ನು ಹಿಮ್ಮೆಟ್ಟಿಸಲು ಯತ್ನಿಸಿದ್ದಾರೆ. ಆದರೆ, ಅಷ್ಟರಲ್ಲಾಗಲೇ ಆನೆಯ ತುಳಿತಕ್ಕೆ ಸಿಲುಕಿದ್ದ ಮಾದ ಅವರು ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ. ಈ ಘಟನೆಯಿಂದಾಗಿ ಗ್ರಾಮದಲ್ಲಿ ಆತಂಕ ಮತ್ತು ಶೋಕದ ವಾತಾವರಣ ನಿರ್ಮಾಣವಾಗಿದೆ.
