ಕನಕಪುರ ದೇಗುಲ ಮಠದ ಚನ್ನಬಸವ ಸ್ವಾಮೀಜಿ ಸಲಹೆ
ಪ್ರತಿನಿಧಿ ವರದಿ ರಾಮನಗರ
ತಾಯಂದಿರು ಮಕ್ಕಳಿಗೆ ಧಾರ್ಮಿಕ ಸಂಸ್ಕಾರದ ಬಗ್ಗೆ ಹೆಚ್ಚು ಅರಿವು ಮೂಡಿಸುವ ಅಗತ್ಯವಿದೆ ಎಂದು ಕನಕಪುರ ದೇಗುಲ ಮಠದ ಚನ್ನಬಸವ ಸ್ವಾಮೀಜಿ ತಿಳಿಸಿದರು.
ತಾಲೂಕಿನ ದೊಡ್ಡಗಂಗವಾಡಿ ಗ್ರಾಮದಲ್ಲಿ ಶುಕ್ರವಾರ ನಡೆದ ಧಾರ್ಮಿಕ ಸಂಸ್ಕಾರಗಳು ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ, ಮಕ್ಕಳಿಗೆ ಇಂದು ಸಾಮಾಜಿಕ ಹಾಗೂ ಸಾಂಪ್ರಾದಾಯಿಕ ಶಿಕ್ಷಣದ ಜತೆಗೆ ಧಾರ್ಮಿಕ ಸಂಸ್ಕಾರದ ಬಗ್ಗೆ ಅರಿವು ನೀಡುವುದು ಹೆಚ್ಚು ಅಗತ್ಯವಿದೆ. ಆ ಕೆಲಸ ಬೇರಾರಿಂದಲೂ ಸಾಧ್ಯವಿಲ್ಲ. ತಾಯಂದಿರಿಂದ ಮಾತ್ರ ಅದು ಸಾಧ್ಯ ಎಂದರು.
ಮಕ್ಕಳಿಗೆ ಉತ್ತಮ ಧಾರ್ಮಿಕ ಸಂಸ್ಕಾರದ ಬಗ್ಗೆ ಅರಿವು ಮೂಡಿಸಿದರೆ ದೇಶದ ಪ್ರಗತಿಯೂ ಸಾಧ್ಯ. ಶಾಲಾ- ಕಾಲೇಜುಗಳಲ್ಲಿ ಕಲಿಯುವ ವಿದ್ಯೆ ಬದುಕಲು ಕಲಿಸುತ್ತದೆ. ಆದರೆ, ಧಾರ್ಮಿಕ ಸಂಸ್ಕಾರ ಬದುಕಿಗೇ ಬುನಾದಿಯಾಗುತ್ತದೆ. ಜೀವನದ ಪಾಠವನ್ನು ಕಲಿಸುತ್ತದೆ ಎಂದರು.
ಅಕ್ಕ ಮಹಾದೇವಿ, ಬಸವಣ್ಣ ಅವರ ವಚನಗಳನ್ನು ಅಳವಡಿಸಿಕೊಂಡು, ಶರಣರು ಸಾರಿರುವ ಸಂದೇಶವನ್ನು ಮತ್ತೆ ಸಾರುವ ಕ್ರಾಂತಿಯಾಗಬೇಕು. ಈ ಮೂಲಕ ಮಕ್ಕಳು ಸೇರಿ ಪ್ರತಿಯೊಬ್ಬರಲ್ಲೂ ವಚನಗಳ ಬಗ್ಗೆ ಅರಿವು ಮೂಡಿಸಬೇಕಿದೆ ಎಂದು ತಿಳಿಸಿದರು.
ಯುವಕರು ಧಾರ್ಮಿಕ ಕಾರ್ಯಗಳಲ್ಲಿ ಹೆಚ್ಚು ತೊಡಗಿಸಿಕೊಂಡು ಸಂಸ್ಕಾರಯುತ ಸಮಾಜ ನಿರ್ಮಾಣ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಬೇಕು. ಇಂದಿನ ಯುವಕರು ಮೊಬೈಲ್, ಟಿವಿ, ಇಂಟರ್ ನೆಟ್ನಲ್ಲಿ ಕಾಲಹರಣ ಮಾಡುತ್ತಿರುವುದು ವಿಷಾಧನೀಯ. ಪಾಲಕರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸುವ ಜತೆಗೆ ಸಂಸ್ಕೃತಿ, ಸಂಸ್ಕಾರ ಕಲಿಸಬೇಕು. ವಿನಯತೆ, ಸೌಜನ್ಯತೆ, ಮಾನವೀಯತೆ, ಪ್ರಾಮಾಣಿಕತೆ, ಬದ್ಧತೆಯ ನಡೆತೆ ಕಲಿಸಬೇಕು ಎಂದರು.
ಸಾಹಿತಿ ಡಾ.ಸಿ.ಶಿವಕುಮಾರಸ್ವಾಮಿ ಮಾತನಾಡಿ, ಇಂದಿನ ಯುಗದಲ್ಲಿ ಪ್ರತಿಯೊಬ್ಬರೂ ಒಳ್ಳೆಯ ರೀತಿಯಿಂದ ಬದುಕಬೇಕಾಗಿದೆ. ಇವತ್ತಿನ ಕಂಪ್ಯೂಟರ್ ಯುಗದಲ್ಲಿ ಮನುಷ್ಯನ ಜೀವನದಲ್ಲಿ ನೆಮ್ಮದಿ ಸಿಗುವುದು ಬಹಳ ಕಷ್ಟ. ಅದಕ್ಕಾಗಿ ನಾವೆಲ್ಲರೂ ಉತ್ತಮ ಸಂಸ್ಕಾರದೊಂದಿಗೆ ಜೀವನ ನಡೆಸಿದರೆ ಜೀವನ ಪಾವನ ಎಂದರು.
ನಾವೆಲ್ಲರೂ ಒಳ್ಳೆಯ ಮಾರ್ಗ ಹಿಡಿದು ನಡೆದಾಗ ಜೀವನದಲ್ಲಿ ಯಶಸ್ವಿ ಕಾಣಲು ಸಾಧ್ಯ. ಜೀವನದಲ್ಲಿ ಏನೇ ಕಷ್ಟ ಬಂದರೆ ಪರಿಹಾರ ಗುರುವಿನಿಂದ ಸಿಗುತ್ತದೆ. ಆ ಗುರುವನ್ನು ಒಳ್ಳೆ ರೀತಿಯಿಂದ ಕಾಣಬೇಕು ಎಂದು ತಿಳಿಸಿದರು.
ಅತ್ತಿಹಳ್ಳಿ ಮಠದ ನಿರಂಜನ ಸ್ವಾಮೀಜಿ, ಸಾಹಿತಿ ಡಾ.ಸಿ.ಶಿವಕುಮಾರಸ್ವಾಮಿ, ಮುಖಂಡರಾದ ಸಿ. ವೀರಣ್ಣ, ಸಿ.ಮಲ್ಲಿಕಾರ್ಜುನಯ್ಯ, ಸಿ. ಉಮಾಶಂಕರಸ್ವಾಮಿ, ಸಿ.ಜಯಣ್ಣ, ಡಿ.ಸಿ.ಗೌರಿಶಂಕರಸ್ವಾಮಿ, ಶಶಿಧರ ಇತರರು ಇದ್ದರು.
![](https://www.prathinidhi.net/wp-content/uploads/2024/04/-600x337-2.jpg)