ಮಂಡ್ಯ, ಫೆಬ್ರವರಿ 5, 2026 : ಜಿಲ್ಲೆಯ ಅಬಕಾರಿ ಇಲಾಖೆಯಲ್ಲಿ ನಡೆಯುತ್ತಿದ್ದ ಭ್ರಷ್ಟಾಚಾರದ ಜಾಲವೊಂದು ಬಯಲಾಗಿದ್ದು, ಹೊಸ ಬಾರ್ ಲೈಸೆನ್ಸ್ ನೀಡಲು ಭಾರಿ ಮೊತ್ತದ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಅಬಕಾರಿ ಉಪ ಆಯುಕ್ತ (ಡಿಸಿ) ನಾಗಶಯನ ಅವರನ್ನು ಸರ್ಕಾರ ಅಮಾನತುಗೊಳಿಸಿ ಆದೇಶ ಹೊರಡಿಸಿದೆ. ಇದು ಮಂಡ್ಯ ಅಬಕಾರಿ ಇಲಾಖೆಯ ಲಂಚಗುಳಿತನಕ್ಕೆ ಮತ್ತೊಂದು ತಾಜಾ ಉದಾಹರಣೆಯಾಗಿ ನಿಂತಿದೆ.

ಕೆ.ಆರ್. ಪೇಟೆಯ ಸೋಮನಹಳ್ಳಿ ಗ್ರಾಮದಲ್ಲಿ ಹೊಸದಾಗಿ ಸಿಎಲ್-7 ಬಾರ್ ಲೈಸೆನ್ಸ್ ಪಡೆಯಲು ಸುಂದರ್ ಎಂಬುವವರು ಅರ್ಜಿ ಸಲ್ಲಿಸಿದ್ದರು. ಆದರೆ, ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ನಾಗಶಯನ ಅವರು ಬರೊಬ್ಬರಿ 60 ಲಕ್ಷ ರೂಪಾಯಿ ಲಂಚ ನೀಡುವಂತೆ ಒತ್ತಾಯಿಸಿದ್ದರು. ಲೈಸೆನ್ಸ್ ನೀಡುವಂತೆ ನ್ಯಾಯಾಲಯವೇ ಆದೇಶ ನೀಡಿದ್ದರೂ ಸಹ, ಅಧಿಕಾರಿ ಮಾತ್ರ ಸಣ್ಣಪುಟ್ಟ ತಾಂತ್ರಿಕ ನೆಪಗಳನ್ನು ಹೇಳಿಕೊಂಡು ಸುಂದರ್ ಅವರ ಅರ್ಜಿಯನ್ನು ಪದೇ ಪದೇ ವಜಾ ಮಾಡುತ್ತಾ ಸತಾಯಿಸುತ್ತಿದ್ದರು.
ಅಧಿಕಾರಿಯ ಕಿರುಕುಳದಿಂದ ಬೇಸತ್ತ ಸುಂದರ್ ಅವರು, ಲಂಚದ ಬೇಡಿಕೆಯ ಆಡಿಯೋ ಸಂಭಾಷಣೆಯನ್ನು ಸಾಕ್ಷ್ಯವಾಗಿಟ್ಟುಕೊಂಡು ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಕಳೆದ ಒಂದು ವರ್ಷದಿಂದ ಈ ಭ್ರಷ್ಟಾಚಾರದ ವಿರುದ್ಧ ಅವರು ನಿರಂತರವಾಗಿ ಕಾನೂನು ಹೋರಾಟ ನಡೆಸುತ್ತಾ ಬಂದಿದ್ದರು. ಈ ಗಂಭೀರ ಪ್ರಕರಣವು ರಾಜ್ಯ ವಿಧಾನಮಂಡಲದ ಸದನದಲ್ಲೂ ಚರ್ಚೆಯಾಗಿ ಸರ್ಕಾರದ ಗಮನ ಸೆಳೆದಿತ್ತು. ಆರೋಪಗಳು ಮೇಲ್ನೋಟಕ್ಕೆ ಸಾಬೀತಾದ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಸರ್ಕಾರ, ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ ನಾಗಶಯನ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿದೆ.
