ಕೂಡಿಗೆ ; ಕಣಿವೆಯ ಶ್ರೀ ರಾಮಲಿಂಗೇಶ್ವರ ಸ್ವಾಮಿ ಬ್ರಹ್ಮ ರಥೋತ್ಸವ ಪ್ರಮುಖ ಪುಣ್ಯ ಕ್ಷೇತ್ರವಾದ ಕಣಿವೆಯ ಶ್ರೀರಾಮಲಿಂಗೇಶ್ವರ ದೇವರ ವಾರ್ಷಿಕ ಬ್ರಹ್ಮ ರಥೋತ್ಸವ ಶ್ರದ್ದಾ ಭಕ್ತಿಯಿಂದ ನೆರವೇರಿತು.
ದೇವಾಲಯದಲ್ಲಿ ಶ್ರೀ ರಾಮನು ಮರಳಿನಿಂದ ಲಿಂಗವನ್ನು ಪ್ರತಿಷ್ಠಾಪಿಸಿದನು ಎಂಬ ಪ್ರತೀತಿ ಇರುವ ಸನ್ನಿಧಿಯಲ್ಲಿ ಬೆಂಗಳೂರಿನಿಂದ ಧಾವಿಸಿರುವ ವೇದಬ್ರಹ್ಮ ನರಹರಿಶರ್ಮಾ ನೇತೃತ್ವದ ಪುರೋಹಿತರ ತಂಡ ಧಾರ್ಮಿಕ ವಿಧಿಗಳನ್ನು ಪೂರೈಸಿದರು. ಅಭಿಜಿನ್ ಲಗ್ನದಲ್ಲಿ ರಥಕ್ಕೆ ಚಾಲನೆ ನೀಡಲಾಯಿತು.
ಹೆಬ್ಬಾಲೆ ಗ್ರಾಮಸ್ಥರು ಕಾಶಿಯಿಂದ ಅಂಚೆಯಲ್ಲಿ ತರಿಸಿದ್ದ ಪವಿತ್ರ ಗಂಗಾ ಜಲವನ್ನು ಅಲಂಕೃತ ಮಂಟಪದಲ್ಲಿಟ್ಟು ಮಂಗಳವಾದ್ಯಗಳೊಂದಿಗೆ ಮೆರವಣಿಗೆಯಲ್ಲಿ ಕಣಿವೆಯ ಶ್ರೀಕ್ಷೇತ್ರಕ್ಕೆ ತಂದು ದೇವರಿಗೆ ಪ್ರೋಕ್ಷಣೆ ಗೈದ ಬಳಿಕ ರಾಮಲಿಂಗೇಶ್ವರ ಉತ್ಸವ ಮೂರ್ತಿಯನ್ನು ಅಲಂಕೃತ ರಥದಲ್ಲಿ ಇರಿಸಿ ಧಾರ್ಮಿಕ ವಿಧಿಗಳನ್ನು ನಡೆಸಲಾಯಿತು.
ರಥ ಸಾಗುತ್ತಿದ್ದಂತೆಯೇ ದೇವಾಲಯದ ಆವರಣದಲ್ಲಿ ನೆರೆದಿದ್ದ ಭಕ್ತರು ಬಾಳೆ ಹಣ್ಣು ಹಾಗೂ ಜವುನಗಳನ್ನು ರಥಕ್ಕೆ ಅರ್ಪಿಸಿದರು. ದೇವಾಲಯದಿಂದ ಹೊರಟ ರಥ ಗ್ರಾಮದ ಅರಳೀಕಟ್ಟೆಯವರೆಗೂ ಸಾಗಿತು. ಬಳಿಕ ಸಂಜೆ ಸ್ವಸ್ಥಾನಕ್ಕೆ ತರಲಾಯಿತು. ರಥ ಸಾಗುವ ಮಾರ್ಗದುದ್ದಕ್ಕೂ ಭಕ್ತಾಧಿಗಳಿಗೆ ಹಲವು ನಿವಾಸಿಗಳು ತಮ್ಮ ಮನೆಗಳ ಮುಂದೆ ಮಜ್ಜಿಗೆ, ಪಾನಕ, ಕೋಸಂಬರಿಗಳನ್ನು ವಿತರಿಸಿದರು. ಈ ದೇವಾಲಯಕ್ಕೆ ಕೊಡಗು ಜಿಲ್ಲೆ ಅಲ್ಲದೆ ಹಾಸನ ಹಾಗೂ ಮೈಸೂರು ಜಿಲ್ಲೆಗಳಿಂದ ಸಾವಿರಾರು ಭಕ್ತಾದಿಗಳು ಆಗಮಿಸಿ ದೇವರ ದರ್ಶನ ಪಡೆದು ಪುನೀತರಾದರು.
ಆಕರ್ಷಿಸಿದ ಕಲಾ ತಂಡಗಳು ;
ಹೆಬ್ಬಾಲೆ ಗ್ರಾಮಸ್ಥರು ಮೆರವಣಿಗೆಯಲ್ಲಿ ಕಾಶಿಯ ತೀರ್ಥವನ್ನು ತಂದ ಸಂದರ್ಭ ಕಣಿವೆ ಗ್ರಾಮದ ಪ್ರವೇಶ ದ್ವಾರ ರಾಂಪುರದಲ್ಲಿ ತೋರಣಗಳೊಂದಿಗೆ ಭಕ್ತಿಪೂರ್ವಕವಾಗಿ ಬರಮಾಡಿಕೊಳ್ಳಲಾಯಿತು. ಕೂಡಿಗೆ ಮತ್ತು ಕೂಡುಮಂಗಳೂರು ಹನುಮ ಸೇನಾ ಸಮಿತಿ ವತಿಯಿಂದ ದೇವಾಲಯ ಸುತ್ತ ಹಾಗೂ ರಸ್ತೆ ಬದಿಗಳಲ್ಲಿ ಕೇಸರಿ ಧ್ವಜಗಳು ರಾರಾಜಿಸುತ್ತಿದ್ದವು. ಚಂಡೇ ವಾದ್ಯ, ವೀರಗಾಸೆ ನೃತ್ಯ ಹಾಗೂ ಮಂಗಳ ವಾದ್ಯ ರಥೋತ್ಸವದಲ್ಲಿ ವಿಶೇಷ ಮೆರುಗು ನೀಡಿದವು.
ಮಂಗಳವಾರ ರಾತ್ರಿ ಕೂಡಿಗೆಯ ದಂಡಿನಮ್ಮ ಮತ್ತು ಬಸವೇಶ್ವರ ದೇವಾಲಯದಿಂದ ಪೂಜೆ ಸಲ್ಲಿಸಲಾಯಿತು. ಕಣಿವೆಯ ರಥೋತ್ಸವಕ್ಕೆ ಕೊಡಗು ಜಿಲ್ಲೆಯ ಭಕ್ತರೂ ಸೇರಿದಂತೆ ನೆರೆಯ ಮೈಸೂರು ಜಿಲ್ಲೆಯ ಗಡಿ ಗ್ರಾಮಗಳ ಭಕ್ತರು ಹಾಗೂ ಹಾಸನ ಜಿಲ್ಲೆಯ ಗಡಿ ಗ್ರಾಮಗಳ ಭಕ್ತರು ಭಾಗವಹಿಸಿದ್ದರು.
ದೇವಾಲಯ ಸಮಿತಿಯಿಂದ ಲಾಡು ಹಾಗೂ ಅನ್ನದಾನ ಮಹಾಪ್ರಸಾದದ ವ್ಯವಸ್ಥೆ ಕಲ್ಪಿಸಲಾಗಿತ್ತು.
ಫೋಟೋ 20 ಎಂಡಿಕೆ 08 ರಥೋತ್ಸವ