ಚಿಕ್ಕಮಗಳೂರು ರೋಟರಿ ಕ್ಲಬ್ ಅಧ್ಯಕ್ಷ ಶ್ರೀವಾತ್ಸವ್ ನಟರಾಜ್ ಅಭಿಪ್ರಾಯ
ಚಿಕ್ಕಮಗಳೂರು : ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಕ್ರೀಡೆ ಸಹಕಾರಿ ಎಂದು ಚಿಕ್ಕಮಗಳೂರು ರೋಟರಿ ಕ್ಲಬ್ ಅಧ್ಯಕ್ಷ ಶ್ರೀವಾತ್ಸವ್ ನಟರಾಜ್ ನುಡಿದರು.
ಉದ್ದೇಬೋರನಹಳ್ಳಿಯ ಶ್ರೀ ಜಗದ್ಗುರು ರೇಣುಕಾಚಾರ್ಯ ಪ್ರೌಢಶಾಲೆಯ 10ನೆಯ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಹಾಗೂ ಶಾರದಪೂಜೆ ಕಾರ್ಯಕ್ರಮದಲ್ಲಿ ಕ್ರೀಡಾ ಪರಿಕರಗಳನ್ನು ವಿತರಿಸಿ ಸೋಮವಾರ ಮಾತನಾಡಿದರು.
ಕ್ರೀಡೆಯಿಂದ ದೈಹಿಕ, ಮಾನಸಿಕ, ಶಾರೀರಿಕ ವಿಕಾಸ ಸಾಧ್ಯ. ಅದಕ್ಕಾಗಿಯೆ ಕ್ರೀಡೆಗೆ ವಿಶೇಷ ಮಹತ್ವ ಬಂದಿದೆ. ಬಾಲ್ಯದಲ್ಲೆ ಮಕ್ಕಳ ಸಾಮರ್ಥ್ಯ ಅರಿತು ಅವರಿಗೆ ಸೂಕ್ತವಾದ ಕ್ರೀಡೆಯಲ್ಲಿ ಆಸಕ್ತಿ ಮೂಡಿಸಬೇಕು. ವಿಶೇಷ ತರಬೇತಿ ನೀಡಿ ಸೌಲಭ್ಯ-ಸೌರ್ಯಗಳನ್ನು ನೀಡಿದಾಗ ಮುಂದೆ ಅವರಿಂದ ಉತ್ತಮ ಸಾಧನೆ ನಿರೀಕ್ಷಿಸಬಹುದು ಎಂದರು.
ಶಿಕ್ಷಣದ ಸಬಲೀಕರಣಕ್ಕಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ರೋಟರಿ ಸಂಸ್ಥೆ ವಿಶೇಷ ಪರಿಶ್ರಮ ಹಾಕುತ್ತಿದೆ. ಇಂದಿನ ಮಕ್ಕಳು ಮುಂದಿನ ಪ್ರಜೆಗಳು. ಅವರು ಆರೋಗ್ಯವಂತರಾಗಿ ವಿದ್ಯಾವಂತರಾಗಿ ರೂಪುಗೊಂಡಾಗ ಭವಿಷ್ಯ ಉತ್ತಮವಾಗುತ್ತದೆ. ರೋಟರಿ ಸಂಸ್ಥೆ ವಿವಿಧೆಡೆಯಲ್ಲಿ ಶಿಕ್ಷಣ ಸಂಸ್ಥೆಗಳ ಅಗತ್ಯತತೆಗಳನ್ನು ಪೂರೈಸಲು ನೆರವು ನೀಡುತ್ತಿದೆ.
ಚಿಕ್ಕಮಗಳೂರು ರೋಟರಿ ವತಿಯಿಂದ 20,000 ರೂ.ಗಳ ಕ್ರೀಡಾ ಉಪಕರಣಗಳನ್ನು ಇಂದು ಉದ್ದೇಬೋರನಹಳ್ಳಿಯ ಈ ಶಾಲೆಗೆ ನೀಡಲಾಗುತ್ತಿದೆ. ವಿದ್ಯಾರ್ಥಿಗಳು ಇದನ್ನು ಬಳಸಿಕೊಂಡು ಕ್ರೀಡೆಯಲ್ಲಿ ಉತ್ತಮ ಸಾಧನೆ ಮಾಡಬೇಕು ಎಂದ ಶ್ರೀವಾತ್ಸವ್, ಮುಂಬರುವ ದಿನಗಳಲ್ಲಿ ಇನ್ನಷ್ಟು ನೆರವು ನೀಡಲಾಗುತ್ತದೆ. ಶಾಲೆಗೆ ಅಗತ್ಯವಿರುವ 15 ಬೆಂಚ್ ಹಾಗೂ ಡೆಸ್ಕ್ ನೀಡಲು ಸಹಕಾರ ಮಾಡುವುದಾಗಿ ಭರವಸೆಯಿತ್ತರು.
ಶಾಲಾ ಆಡಳಿತ ಮಂಡಳಿ ಕಾರ್ಯದರ್ಶಿ ಲಕ್ಷ್ಮಯ್ಯ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಾಮಾನ್ಯ ರೈತಾಪಿ ಕುಟುಂಬದ ಬಡಮಕ್ಕಳೇ ಇಲ್ಲಿ ಹೆಚ್ಚಾಗಿದ್ದು, ಅವರಿಗೆ ಉತ್ತಮ ಶಿಕ್ಷಣ ಸ್ಥಳೀಯವಾಗಿ ನೀಡಲು ಶ್ರಮಿಸಲಾಗುತ್ತಿದೆ. ಚಿಕ್ಕಮಗಳೂರು ರೋಟರಿಕ್ಲಬ್ ವತಿಯಿಂದ ಕ್ರೀಡಾ ಉಪಕರಣಗಳನ್ನು ನೀಡಿ ಸಹಕರಿಸಿದ್ದಾರೆ. ಮುಂದೆಯೂ ಪೀಠೋಪಕರಣ ಪೂರೈಸಲು ನೆರವು ಬಯಸುವುದಾಗಿ ಹೇಳಿದರು.
ರೋಟರಿ ಕಾರ್ಯದರ್ಶಿ ಸುಜಿತ್, ಶ್ರೀರೇಣುಕಾಚಾರ್ಯ ಶಿಕ್ಷಣ ಸಂಸ್ಥೆ ನಿರ್ದೇಶಕ ಪುಟ್ಟೇಗೌಡ ಮತ್ತು ಮಲ್ಲಿಕಾರ್ಜುನ, ನಿವೃತ್ತ ಶಿಕ್ಷಕರಾದ ಕೆ.ಎಲ್.ಬಸವರಾಜು ಮತ್ತು ಬಿ.ಮಂಜುನಾಥರಾವ್, ಶಾಲಾ ಮುಖ್ಯಶಿಕ್ಷಕ ರಾಮಸ್ವಾಮಿನಾಯ್ಕ ಮಾತನಾಡಿ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಶುಭಹಾರೈಸಿದರು. ಡಿ.ವೈ.ಮಧು ಸ್ವಾಗತಿಸಿ, ಎಚ್.ನಾಗರಾಜ್ ಕಾರ್ಯಕ್ರಮ ನಿರೂಪಿಸಿ, ಎಲ್.ನರೇಂದ್ರ ವಂದಿಸಿದರು.