ಮೈಸೂರು, ಮಾರ್ಚ್ 4, 2026 : ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಹದಿನಾರು ಗ್ರಾಮದ ಹೊರವಲಯದಲ್ಲಿ ತಂತಿ ಉರುಳಿಗೆ ಸಿಲುಕಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಅಪರೂಪದ ‘ಬಾರ್ ಹೆಡೆಡ್ ಗೂಸ್’ (ಪಟ್ಟೆತಲೆ ಬಾತುಕೋಳಿ) ಪಕ್ಷಿಯನ್ನು ಸ್ಥಳೀಯ ಯುವಕರು ರಕ್ಷಿಸಿ ಮಾನವೀಯತೆ ಮೆರೆದಿದ್ದಾರೆ.
ದೂರದ ಮಂಗೋಲಿಯಾದಿಂದ ಹಿಮಾಲಯ ಪರ್ವತವನ್ನು ದಾಟಿಕೊಂಡು ಸಾವಿರಾರು ಮೈಲಿ ಕ್ರಮಿಸಿ ಭಾರತಕ್ಕೆ ಬರುವ ಈ ಪಕ್ಷಿಗಳು, ಪ್ರತಿ ವರ್ಷ ಚಳಿಗಾಲದ ಅವಧಿಯಲ್ಲಿ ಹದಿನಾರು ಗ್ರಾಮದ ಕೆರೆಗೆ ವಲಸೆ ಬರುತ್ತವೆ. ಎಂದಿನಂತೆ ವಲಸೆ ಬಂದಿದ್ದ ಈ ಹಕ್ಕಿಗಳಲ್ಲಿ ಒಂದು ಹಕ್ಕಿ ಆಕಸ್ಮಿಕವಾಗಿ ಆಹಾರ ಅರಸುವಾಗ ಉರುಳಿಗೆ ಸಿಲುಕಿಕೊಂಡಿತ್ತು. ತಂತಿಯ ಪೆಟ್ಟಿನಿಂದಾಗಿ ಹಾರಲಾಗದೆ ಒದ್ದಾಡುತ್ತಿದ್ದ ಪಕ್ಷಿಯನ್ನು ಗಮನಿಸಿದ ಗ್ರಾಮದ ಯುವಕರು ಕೂಡಲೇ ಸ್ಥಳಕ್ಕೆ ಧಾವಿಸಿದ್ದಾರೆ.
ಬಹಳ ಜಾಗರೂಕತೆಯಿಂದ ಹಕ್ಕಿಯ ದೇಹಕ್ಕೆ ಸುತ್ತಿಕೊಂಡಿದ್ದ ತಂತಿಯನ್ನು ಬಿಡಿಸಿದ ಯುವಕರು, ಅದಕ್ಕೆ ಅಗತ್ಯವಾದ ಪ್ರಾಥಮಿಕ ಶುಶ್ರೂಷೆ ನೀಡಿ ಮತ್ತೆ ಕೆರೆಗೆ ಬಿಟ್ಟಿದ್ದಾರೆ. ಸಾವಿನ ದವಡೆಯಿಂದ ಪಾರಾದ ಪಕ್ಷಿಯು ಕೆರೆಯಲ್ಲಿ ಮತ್ತೆ ಸ್ವಚ್ಚಂದವಾಗಿ ಈಜುತ್ತಾ ಸಾಗಿದ್ದು, ಪ್ರಾಣಿ ಪ್ರಿಯರ ಮೆಚ್ಚುಗೆಗೆ ಪಾತ್ರವಾಗಿದೆ. ಈ ವಿದೇಶಿ ಹಕ್ಕಿಗಳು ಕೆಲ ತಿಂಗಳುಗಳ ಕಾಲ ಇಲ್ಲಿನ ಕೆರೆಗಳಲ್ಲಿ ವಾಸ್ತವ್ಯ ಹೂಡಿ, ನಂತರ ಮತ್ತೆ ತಮ್ಮ ಸ್ವಸ್ಥಾನಕ್ಕೆ ಹಿಂತಿರುಗುತ್ತವೆ.
