ಮೈಸೂರು, ನವೆಂಬರ್ 6, 2025 : ರಾಜ್ಯದಲ್ಲಿ ಜಿಎಸ್ಟಿ ಇಳಿಕೆಯ ಬಳಿಕವೂ ತುಪ್ಪದ ಬೆಲೆ ಜಾಸ್ತಿಯಾಗಿದ್ದು, ಇದರಿಂದ ಬಡವರು ಮತ್ತು ಮಧ್ಯಮ ವರ್ಗದವರು ಬದುಕುವುದು ಕಷ್ಟಕರವಾಗಿದೆ. ಆದ್ದರಿಂದ ಸರ್ಕಾರವು ಕೂಡಲೇ ರೈತರ ಹಾಲಿನ ಪ್ರೋತ್ಸಾಹ ಧನವನ್ನು ಹೆಚ್ಚಿಸಬೇಕು ಎಂದು ಮಾಜಿ ಸಚಿವ ಸಾರಾ ಮಹೇಶ್ ಅವರು ಮೈಸೂರಿನಲ್ಲಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಕಾಂಗ್ರೆಸ್ ಸರ್ಕಾರದ ಆಡಳಿತದ ಬಗ್ಗೆ ಟೀಕೆ ವ್ಯಕ್ತಪಡಿಸಿದ ಸಾರಾ ಮಹೇಶ್, “ನಮ್ಮ ಆಡಳಿತದಲ್ಲಿ ಉತ್ತಮ ಆಡಳಿತ ಕೊಟ್ವಿ. ಈಗ ನಿಮ್ಮ ಅವಧಿಯಲ್ಲಿ ಉತ್ತಮ ಆಡಳಿತ ಕೊಡಿ,” ಎಂದು ಆಗ್ರಹಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎರಡನೇ ಬಾರಿ ಸಿಎಂ ಆಗಿ ದಾಖಲೆ ಮಾಡಿದ್ದಾರೆ. ಆದರೆ, ಅದೇ ರೀತಿ ಅತಿ ಹೆಚ್ಚು ರಾಜ್ಯದ ಸಾಲ ಮಾಡಿದ ಕೀರ್ತಿಯೂ ಅವರಿಗೆ ಸಲ್ಲುತ್ತದೆ ಎಂದು ದೂರಿದರು. ಸಿದ್ದರಾಮಯ್ಯನವರನ್ನು ದೇವರಾಜ ಅರಸು, ಮೈಸೂರು ಮಹಾರಾಜರಿಗಿಂತ ಅಭಿವೃದ್ಧಿ ಮಾಡಿದವರು ಎಂದು ಅವರ ಹಿಂಬಾಲಕರು ಮಾತನಾಡುವುದನ್ನು ಪ್ರಸ್ತಾಪಿಸಿದ ಅವರು, ಮುಖ್ಯಮಂತ್ರಿಗಳ ವರ್ಚಸ್ಸು ಮತ್ತು ಆಡಳಿತ ಇತ್ತೀಚಿನ ದಿನಗಳಲ್ಲಿ ರಾಜಿ ಆಗಿದೆಯೇ ಎಂದು ಪ್ರಶ್ನಿಸಿದರು.
ಕಾಮಗಾರಿಗಳ ಹಂಚಿಕೆ ಬಗ್ಗೆ ಗಂಭೀರ ಆರೋಪ
ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಸವರಾಜ್ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದಾಗ ಗ್ರಾಮೀಣ ಭಾಗದ ರಸ್ತೆಗಳ ಅಭಿವೃದ್ಧಿಗೆ ಅನುದಾನ ನೀಡಿದ್ದನ್ನು ಸ್ಮರಿಸಿದರು. ಆ ವೇಳೆ ಮಂಜೂರಾದ ಎಲ್ಲಾ ಹಳ್ಳಿಗಳಿಗೂ ತಾವೇ ಹೋಗಿ ಭೂಮಿ ಪೂಜೆ ಮಾಡಿದ್ದಾಗಿ ತಿಳಿಸಿದರು. ಆದರೆ, ಚುನಾವಣಾ ನೀತಿ ಸಂಹಿತೆ ಜಾರಿಯಾದ ನಂತರ, ಗುದ್ದಲಿಪೂಜೆ ಮತ್ತು ಟೆಂಡರ್ ಆದ ಕಾಮಗಾರಿಯನ್ನು ಕ್ಯಾನ್ಸಲ್ ಮಾಡಿ, ಮತ್ತೆ ಅದೇ ಕಾಮಗಾರಿಗಳಿಗೆ ಭೂಮಿ ಪೂಜೆ ಮಾಡಲು ಮುಖ್ಯಮಂತ್ರಿಗಳು ಹೆಲಿಕಾಪ್ಟರ್ನಲ್ಲಿ ಬಂದಿರುವುದು ಏಕೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಈ ಎಲ್ಲಾ ಕಾಮಗಾರಿಗಳನ್ನು ಲ್ಯಾಂಡ್ ಆರ್ಮಿಗೆ ನೀಡಿರುವುದನ್ನು ಸಾರಾ ಮಹೇಶ್ ಗಂಭೀರವಾಗಿ ಪ್ರಶ್ನಿಸಿದರು. “ಭ್ರಷ್ಟಾಚಾರ ಮುಕ್ತ ಸರ್ಕಾರ ಅಂತ ಹೇಳುವ ನೀವು, ಈ ಕಾಮಗಾರಿಯನ್ನು ಯಾಕೆ ಲ್ಯಾಂಡ್ ಆರ್ಮಿಗೆ ಕೊಟ್ಟಿದ್ದು ಹೇಳಿ?” ಎಂದು ನೇರ ಪ್ರಶ್ನೆ ಹಾಕಿದರು. ಸರ್ಕಾರವು ಜನರ ಕಣ್ಣೊರೆಸುವ ತಂತ್ರ ಮಾಡಬಾರದು, ಗೃಹಲಕ್ಷ್ಮಿ ಯೋಜನೆಯಡಿ ₹2 ಸಾವಿರ ಕೊಡ್ತಿರುವುದರಿಂದ ಮಹಿಳೆಯರು ಸುಮ್ಮನಿದ್ದಾರೆ ಅಷ್ಟೇ ಎಂದು ಟೀಕಿಸಿದರು.
ಅಂತಿಮವಾಗಿ, ರಾಜ್ಯದಲ್ಲಿ ಅಧಿಕಾರ ವಿಕೇಂದ್ರೀಕರಣ ಆಗಬೇಕೆಂದರೆ ಕೂಡಲೇ ಜಿಲ್ಲಾ ಪಂಚಾಯತಿ ಮತ್ತು ತಾಲೂಕು ಪಂಚಾಯತಿ ಚುನಾವಣೆಗಳನ್ನು ನಡೆಸಬೇಕು ಎಂದು ಸಾರಾ ಮಹೇಶ್ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು.
