ಮೈಸೂರು, ಫೆಬ್ರವರಿ 27, 2026: ರಾಜ್ಯದ ಹೆಮ್ಮೆಯ ಮೈಸೂರು ಸಿಲ್ಕ್ ಮತ್ತು ಕೆಎಸ್ಐಸಿ (KSIC) ಸಂಸ್ಥೆಯನ್ನು ಉಳಿಸುವ ನಿಟ್ಟಿನಲ್ಲಿ ವಿಧಾನಸಭೆ ಪ್ರತಿಪಕ್ಷ ನಾಯಕ ಆರ್. ಅಶೋಕ್ ಅವರು ಮೈಸೂರಿನಲ್ಲಿ ಇಂದು ಧ್ವನಿ ಎತ್ತಿದ್ದಾರೆ. ನಗರದ ಹೊರವಲಯದ ಖಾಸಗಿ ಹೋಟೆಲ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರದ ನಡೆ ಹಾಗೂ ಮೈತ್ರಿಕೂಟದ ಮುಂದಿನ ರಾಜಕೀಯ ಬೆಳವಣಿಗೆಗಳ ಬಗ್ಗೆ ಹರಿತವಾದ ವಿಚಾರಗಳನ್ನು ಹಂಚಿಕೊಂಡರು. ಈ ಸಂದರ್ಭದಲ್ಲಿ ಶಾಸಕ ಶ್ರೀವತ್ಸ, ಮಾಜಿ ಸಂಸದ ಪ್ರತಾಪ್ ಸಿಂಹ, ಮಾಜಿ ಶಾಸಕ ಹರ್ಷವರ್ಧನ್ ಹಾಗೂ ಮಾಜಿ ಮೇಯರ್ ಶಿವಕುಮಾರ್ ಉಪಸ್ಥಿತರಿದ್ದರು.
ಕೆಎಸ್ಐಸಿ ಜಾಗದಲ್ಲಿ ಕ್ರೀಡಾಂಗಣ: ಕಾಂಗ್ರೆಸ್ ವಿರುದ್ಧ ಕುತಂತ್ರದ ಆರೋಪ
‘ಸೇವ್ ಕೆಎಸ್ಐಸಿ’ ಅಭಿಯಾನದ ಅಂಗವಾಗಿ ಮೈಸೂರಿಗೆ ಭೇಟಿ ನೀಡಿರುವುದಾಗಿ ತಿಳಿಸಿದ ಆರ್. ಅಶೋಕ್, ಮೈಸೂರು ಸಿಲ್ಕ್ ಎನ್ನುವುದು ರಾಜ್ಯದ ಅತಿದೊಡ್ಡ ಬ್ರಾಂಡ್ ಆಗಿದೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ದೂರದೃಷ್ಟಿಯಿಂದ ಸ್ಥಾಪನೆಯಾದ ಈ ಸಂಸ್ಥೆ ಇಂದು ಸಾವಿರಾರು ಜನರಿಗೆ ಉದ್ಯೋಗ ನೀಡುತ್ತಿದ್ದು, ಕಳೆದ ಸಾಲಿನಲ್ಲಿ 96 ಕೋಟಿ ರೂ. ಲಾಭ ಗಳಿಸಿದೆ ಎಂದರು.
ಟಿ.ನರಸೀಪುರದಲ್ಲಿ ಕೆಎಸ್ಐಸಿಗೆ ಸೇರಿದ ಜಾಗದಲ್ಲಿ ಕ್ರೀಡಾಂಗಣ ನಿರ್ಮಾಣ ಮಾಡುತ್ತಿರುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಅವರು, “ನಾನು ಕ್ರೀಡಾಪಟುವಾಗಿದ್ದು ಕ್ರೀಡಾಂಗಣಕ್ಕೆ ವಿರೋಧವಿಲ್ಲ, ಆದರೆ ಕೆಎಸ್ಐಸಿ ಜಾಗವನ್ನೇ ಬಳಸುವುದು ಸರಿಯಲ್ಲ. ಕಾಂಗ್ರೆಸ್ ಕಂಟ್ರಾಕ್ಟರ್ಗೆ 12 ಕೋಟಿ ರೂ. ಮೊತ್ತದ ಕಾಮಗಾರಿ ನೀಡುವ ಸಲುವಾಗಿ ಈ ಕುತಂತ್ರ ಮಾಡಲಾಗುತ್ತಿದೆ” ಎಂದು ಕಿಡಿಕಾರಿದರು.
ಮೈಸೂರು ಸ್ಯಾಂಡಲ್ ಸೋಪ್ ರಾಯಭಾರಿ ನೇಮಕಕ್ಕೆ ಆಕ್ಷೇಪ
ಇದೇ ವೇಳೆ ಮೈಸೂರು ಸ್ಯಾಂಡಲ್ ಸೋಪ್ಗೆ ಬಾಲಿವುಡ್ ನಟಿ ತಮನ್ನಾ ಭಾಟಿಯಾ ಅವರನ್ನು ರಾಯಭಾರಿಯನ್ನಾಗಿ ಮಾಡಿರುವುದನ್ನು ಅಶೋಕ್ ಪ್ರಶ್ನಿಸಿದರು. “ನಮ್ಮಲ್ಲಿ ಯಶ್ ಅಥವಾ ರಶ್ಮಿಕಾ ಮಂದಣ್ಣ ಅವರಂತಹ ಸ್ಟಾರ್ಗಳಿದ್ದಾರೆ. ಯಶ್ ದಂಪತಿಗೆ ಅವಕಾಶ ನೀಡಿದ್ದರೆ ಈ ಬ್ರಾಂಡ್ ಮತ್ತಷ್ಟು ಬೆಳೆಯುತ್ತಿತ್ತು. ಕೈಗಾರಿಕಾ ಸಚಿವರಿಗೆ ತಮನ್ನಾ ಅವರ ಮೇಲೆ ಏಕಿಷ್ಟು ಆಸೆಯೋ ಗೊತ್ತಿಲ್ಲ” ಎಂದು ವ್ಯಂಗ್ಯವಾಡಿದರು.
ಧಾರವಾಡ ಪ್ರತಿಭಟನೆ ಹಾಗೂ ಮುಂದಿನ ಸಿಎಂ ವಿಚಾರ
ಧಾರವಾಡದಲ್ಲಿ ನಡೆದ ಯುವಕರ ಪ್ರತಿಭಟನೆ ಕುರಿತು ಪ್ರತಿಕ್ರಿಯಿಸಿದ ಅವರು, ಅದು ಬಿಜೆಪಿ ಲೆಟರ್ ಹೆಡ್ ಅಡಿಯಲ್ಲೇ ನಡೆದ ಹೋರಾಟವಾಗಿದ್ದು, ಪೊಲೀಸರು ಕೂಡ ಅದಕ್ಕೆ ಅನುಮತಿ ನೀಡಿದ್ದರು ಎಂದು ಸ್ಪಷ್ಟಪಡಿಸಿದರು.
ಇನ್ನು ನಿಖಿಲ್ ಕುಮಾರಸ್ವಾಮಿ ಅವರು ಎಚ್.ಡಿ. ಕುಮಾರಸ್ವಾಮಿ ಮುಂದಿನ ಸಿಎಂ ಎಂಬ ಹೇಳಿಕೆ ನೀಡಿದ ವಿಚಾರಕ್ಕೆ ಪ್ರತಿಕ್ರಿಯಿಸಿ, “ಕೂಸು ಹುಟ್ಟುವ ಮುನ್ನವೇ ಕುಲಾವಿ ಹೊಲಿಸುವುದು ಸರಿಯಲ್ಲ. ಮುಂದಿನ ಸಿಎಂ ಬಗ್ಗೆ ನಮ್ಮಲ್ಲಿ ಯಾವುದೇ ತೀರ್ಮಾನವಾಗಿಲ್ಲ. ಮೊದಲು ಎಲ್ಲರೂ ಒಟ್ಟಾಗಿ ಚುನಾವಣೆ ಗೆಲ್ಲಬೇಕು, ನಂತರ ಹೈಕಮಾಂಡ್ ಮತ್ತು ಎನ್ಡಿಎ ಒಕ್ಕೂಟ ಸಿಎಂ ಯಾರೆಂದು ನಿರ್ಧರಿಸುತ್ತದೆ” ಎಂದು ಸ್ಪಷ್ಟನೆ ನೀಡಿದರು.
