ಮೈಸೂರು, ಡಿಸೆಂಬರ್ 18, 2025 : ಸಾಂಸ್ಕೃತಿಕ ನಗರಿ ಮೈಸೂರಿನಿಂದ ಅಯೋಧ್ಯೆಯ ಶ್ರೀ ರಾಮಲಲ್ಲಾನ ದರ್ಶನ ಪಡೆಯಲು ಒಂದು ಸಾವಿರಕ್ಕೂ ಹೆಚ್ಚು ಭಕ್ತರು ಏಕಕಾಲದಲ್ಲಿ ಪ್ರಯಾಣ ಬೆಳೆಸಲು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಮೈಸೂರಿನ ಅವಧೂತ ದತ್ತ ಪೀಠದ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದ ವತಿಯಿಂದ ಈ ಬೃಹತ್ ಯಾತ್ರೆಯನ್ನು ಆಯೋಜಿಸಲಾಗಿದ್ದು, ವಿಶೇಷ ರೈಲಿನ ಮೂಲಕ ಸಾವಿರಾರು ಭಕ್ತರು ಒಟ್ಟಾಗಿ ಅಯೋಧ್ಯೆಗೆ ತೆರಳುತ್ತಿದ್ದಾರೆ.
ಡಿಸೆಂಬರ್ 24ರಿಂದ 28ರವರೆಗೆ ಅಯೋಧ್ಯೆಯಲ್ಲಿರುವ ಗಣಪತಿ ಸಚ್ಚಿದಾನಂದ ಆಶ್ರಮದ ಶಾಖೆಯಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಈ ಸಂದರ್ಭದಲ್ಲಿ ಲೋಕ ಕಲ್ಯಾಣಕ್ಕಾಗಿ ರಾಮತಾರಕ ಹೋಮ ಹಾಗೂ ರಾಮಜಪ ಸೇರಿದಂತೆ ವಿವಿಧ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ವಿಧಿವಿಧಾನಗಳು ಜರುಗಲಿವೆ. ಈ ಎಲ್ಲಾ ಕಾರ್ಯಕ್ರಮಗಳ ದಿವ್ಯ ಸಾನ್ನಿಧ್ಯ ವಹಿಸಲು ಅವಧೂತ ದತ್ತ ಪೀಠಾಧಿಪತಿಗಳಾದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರು ಭಕ್ತರೊಂದಿಗೆ ವಿಶೇಷ ರೈಲಿನಲ್ಲಿ ಪ್ರಯಾಣಿಸುತ್ತಿರುವುದು ಈ ಯಾತ್ರೆಯ ಪ್ರಮುಖ ವಿಶೇಷವಾಗಿದೆ.
ಶ್ರೀಗಳು ತಮ್ಮ ಸುದೀರ್ಘ ಆಧ್ಯಾತ್ಮಿಕ ಪಯಣದಲ್ಲಿ ಇದೇ ಮೊದಲ ಬಾರಿಗೆ ರೈಲಿನ ಮೂಲಕ ಇಷ್ಟು ದೂರದ ಪ್ರಯಾಣ ಕೈಗೊಳ್ಳುತ್ತಿದ್ದಾರೆ. ಶ್ರೀಗಳ ಪ್ರಯಾಣದ ಹಿನ್ನೆಲೆಯಲ್ಲಿ ಕೇಂದ್ರ ರೈಲ್ವೆ ರಾಜ್ಯ ಖಾತೆ ಸಚಿವ ವಿ. ಸೋಮಣ್ಣ ಅವರ ವಿಶೇಷ ಸೂಚನೆಯ ಮೇರೆಗೆ ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳು ಶ್ರೀಗಳು ಪ್ರಯಾಣಿಸುವ ಬೋಗಿಯನ್ನು ವಿಶೇಷವಾಗಿ ಸಿದ್ಧಪಡಿಸಿದ್ದಾರೆ. ಭಕ್ತರು ಹಾಗೂ ಶ್ರೀಗಳ ಪ್ರಯಾಣ ಸುಗಮವಾಗಿ ಸಾಗಲು ರೈಲ್ವೆ ಇಲಾಖೆ ಅತ್ಯಂತ ಆಸಕ್ತಿ ವಹಿಸಿ ಸಕಲ ವ್ಯವಸ್ಥೆಗಳನ್ನು ಮಾಡಿಕೊಟ್ಟಿದೆ.
ಕೇವಲ ಮೈಸೂರಿನ ಭಕ್ತರು ಮಾತ್ರವಲ್ಲದೆ, ದೇಶದ ವಿವಿಧ ರಾಜ್ಯಗಳಿಂದಲೂ ಸಾವಿರಾರು ಭಕ್ತರು ಅಯೋಧ್ಯೆಗೆ ಆಗಮಿಸಿ ಈ ಪುಣ್ಯ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎಂದು ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರು ಪ್ರತಿನಿಧಿ ನ್ಯೂಸ್ಗೆ ಮಾಹಿತಿ ನೀಡಿದ್ದಾರೆ. ರಾಮಜನ್ಮಭೂಮಿಯಲ್ಲಿ ನಡೆಯಲಿರುವ ಈ ಐತಿಹಾಸಿಕ ಧಾರ್ಮಿಕ ಕಾರ್ಯಕ್ರಮಕ್ಕೆ ದತ್ತ ಪೀಠವು ಸಂಪೂರ್ಣವಾಗಿ ಸಜ್ಜಾಗಿದ್ದು, ಮೈಸೂರಿನಿಂದ ಹೊರಡಲಿರುವ ಈ ವಿಶೇಷ ರೈಲು ಭಕ್ತರಲ್ಲಿ ಭಾರಿ ಕುತೂಹಲ ಮತ್ತು ಭಕ್ತಿಭಾವವನ್ನು ಮೂಡಿಸಿದೆ.
