ಬಿಜೆಪಿ ಕಚೇರಿಯಲ್ಲಿ ಜೆಡಿಎಸ್ ಮುಖಂಡರ ಒಗ್ಗಟ್ಟು ಪ್ರದರ್ಶನ
ತುಮಕೂರು: ತುಮಕೂರು ನಗರದ ಯಾವೊಬ್ಬ ಜೆಡಿಎಸ್ ಮುಖಂಡರು, ಮಾಜಿ ಕಾರ್ಪೊರೇಟರ್ಗಳು, ಕಾರ್ಯಕರ್ತರು ಪಕ್ಷ ಬಿಟ್ಟುಹೋಗಿ ಕಾಂಗ್ರೆಸ್ ಸೇರ್ಪಡೆಯಾಗಿಲ್ಲ. ಎಲ್ಲರೂ ಎನ್ ಡಿಎ ಅಭ್ಯರ್ಥಿ ವಿ.ಸೋಮಣ್ಣ ಅವರ ಪರವಾಗಿ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದು, ಸೋಮಣ್ಣ ಅವರ ಗೆಲುವಿಗೆ ಸಕ್ರಿಯವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಜಿಲ್ಲಾ ಜೆಡಿಎಸ್ ಅಧ್ಯಕ್ಷ ಆರ್.ಸಿ.ಆಂಜನಪ್ಪ ಹೇಳಿದರು.
ನಗರದ ಜಿಲ್ಲಾ ಬಿಜೆಪಿ ಕಾರ್ಯಲಯದಲ್ಲಿ ಜೆಡಿಎಸ್ನ ಎಲ್ಲಾ ಮಾಜಿ ಕಾರ್ಪೊರೇಟರ್ಗಳು, ಪ್ರಮುಖ ಮುಖಂಡರೊಂದಿಗೆ ಒಗ್ಗಟ್ಟು ಪ್ರದರ್ಶನದೊಂದಿಗೆ ಸುದ್ದಿಗೋಷ್ಠಿ ನಡೆಸಿದದರು.
ನಗರದಿಂದ ಮೂರು ಬಾರಿ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಎನ್.ಗೋವಿಂದರಾಜು ಅವರು ಇತ್ತೀಚೆಗೆ ಕಾಂಗ್ರೆಸ್ ಸೇರಿದ್ದು, ಅವರ ಜತೆ ಹಲವು ಜೆಡಿಎಸ್ ಕಾರ್ಪೊರೇಟರ್ಗಳು ಕಾಂಗ್ರೆಸ್ ಸೇರಿದ್ದಾರೆ ಎಂಬ ಅಪಪ್ರಚಾರ ನಡೆದಿದ್ದು, ಜೆಡಿಎಸ್ನ ಯಾರೊಬ್ಬರೂ ಪಕ್ಷಬಿಟ್ಟು ಹೋಗಿಲ್ಲ, ಎಲ್ಲರೂ ಇಲ್ಲೇ ಇದ್ದು ಉಳಿದು ವಿ.ಸೋಮಣ್ಣ ಅವರ ಗೆಲುವಿಗಾಗಿ ಕೆಲಸ ಮಾಡುತ್ತಿದ್ದಾರೆ ಎಂದರು.
ಜೆಡಿಎಸ್ಗೆ ಕಾರ್ಯಕರ್ತರೇ ಜೀವಾಳ, ಗೋವಿಂದರಾಜು ಅವರು ಮೂರು ಬಾರಿ ಚುನಾವಣೆ ಸೋಲಲು ಅವರ ಸ್ವಯಂಕೃತ ಅಪರಾಧಗಳೇ ಕಾರಣ ಹೊರತು ಜೆಡಿಎಸ್ ಅಲ್ಲ. ದೇವೇಗೌಡರು ಹಾಗೂ ಕುಮಾರಸ್ವಾಮಿ ಅವರು ಗೋವಿಂದರಾಜು ಅವರಿಗೇ ಟಿಕೆಟ್ ನೀಡಿ ನೆರವಾಗಿದ್ದರು. ಈಗ ಪಕ್ಷಕ್ಕೆ ದ್ರೋಹ ಮಾಡಿ ಕಾಂಗ್ರೆಸ್ ಸೇರಿರುವ ಗೋವಿಂದರಾಜು ಅವರು ಮುಂದಿನ ದಿನಗಳಲ್ಲಿ ಪಶ್ಚಾತಾಪ ಪಡುತ್ತಾರೆ ಎಂದು ಹೇಳಿದರು.
ನಗರ ಕ್ಷೇತ್ರದಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಸೇರಿ ಒಂದು ಲಕ್ಷಕ್ಕೂ ಅಧಿಕ ಮತಗಳನ್ನು ಎನ್ ಡಿಎ ಅಭ್ಯರ್ಥಿ ವಿ.ಸೋಮಣ್ಣ ಪಡೆಯುವುದು ಖಚಿತ, ಕ್ಷೇತ್ರದ ಎಲ್ಲ ಕಡೆಯೂ ಜೆಡಿಎಸ್ನವರು ಸೋಮಣ್ಣ ಅವರ ಪರವಾಗಿ ಚುನಾವಣಾ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ ಎಂದು ಹೇಳಿದರು.
ಟಿ.ಆರ್.ನಾಗರಾಜು ಜಿಲ್ಲಾ ಜೆಡಿಎಸ್ ಕಾರ್ಯಾಧ್ಯಕ್ಷ ಟಿ.ಆರ್.ನಾಗರಾಜು ಮಾತನಾಡಿ, ಜೆಡಿಎಸ್ ಮುಖಂಡರು, ಕಾರ್ಯಕರ್ತರು ಪಕ್ಷ ನಿಷ್ಠರು, ಯಾರೂ ಪಕ್ಷಬಿಟ್ಟುಹೋಗಿಲ್ಲ. ಪಕ್ಷದ ಹೈಕಮಾಂಡ್ ಸೂಚನೆಯಂತೆ ಎನ್.ಡಿ.ಎ ಅಭ್ಯರ್ಥಿ ವಿ.ಸೋಮಣ್ಣ ಅವರನ್ನು ಗೆಲ್ಲಿಸಲು ಸಕ್ರಿಯವಾಗಿ ಕೆಲಸ ಮಾಡುತ್ತಿದ್ದಾರೆ ಎಂದರು.
ಜೆಡಿಎಸ್ ಮುಖಂಡ ರವೀಶ್ ಜಹಂಗೀರ್ ಮಾತನಾಡಿ, ತುಮಕೂರು ನಗರ ಕ್ಷೇತ್ರದಲ್ಲಿ ತಿಗಳ ಸಮುದಾಯಕ್ಕೆ ಕೊಡಬೇಕು ಎಂದು ಕೊಂಡಿದ್ದ ಟಿಕೆಟ್ ಅನ್ನು ಗೋವಿಂದರಾಜು ಅವರಿಗೆ ಬಿಟ್ಟುಕೊಟ್ಟೆವು, ದೇವೇಗೌಡರು, ಕುಮಾರಸ್ವಾಮಿಯವರ ಮನವಿ ಮೇರೆಗೆ ಗೋವಿಂದರಾಜು ಅವರಿಗೆ ಟಿಕೆಟ್ ತ್ಯಾಗ ಮಾಡಿ ಅವರ ಪರ ಚುನಾವಣೆಗೆ ಕೆಲಸ ಮಾಡಿದೆವು. ಅದೆಲ್ಲವನ್ನೂ ಮರೆತು ಅವರು ಕಾಂಗ್ರೆಸ್ ಸೇರಿದರು. ಅವರು ಹೋಗಿರುವುದರಿಂದ ಪಕ್ಷಕ್ಕೆ ನಷ್ಟವೇನೂ ಆಗಿಲ್ಲ, ಜೆಡಿಎಸ್ ಕಾರ್ಯಕರ್ತರು ಗಟ್ಟಿಯಾಗಿ ನಿಂತಿದ್ದಾರೆ ಎಂದು ಹೇಳಿದರು.
ನಗರ ಜೆಡಿಎಸ್ ಅಧ್ಯಕ್ಷ ವಿಜಯ್ಗೌಡ, ಹಿರಿಯ ಮುಖಂಡರಾದ ಶ್ರೀನಿವಾಸಪ್ರಸಾದ್, ಟಿ.ಎಚ್.ಜಯರಾಂ, ಟಿ.ಜಿ.ನರಸಿಂಹರಾಜು, ಟಿ.ಹೆಚ್.ವಾಸುದೇವ್, ಹನುಮಂತರಾಯಪ್ಪ(ಎಚ್.ಆರ್), ರಾಮಕೃಷ್ಣಯ್ಯ, ಜೆಡಿಎಸ್ನ ನಗರ ಪಾಲಿಕೆ ಮಾಜಿ ಸದಸ್ಯರಾದ ಟಿ.ಕೆ.ನರಸಿಂಹಮೂರ್ತಿ, ಎ.ಶ್ರೀನಿವಾಸ್, ಹೆಚ್.ಡಿ.ಕೆ.ಮಂಜುನಾಥ್, ಟಿ.ಹೆಚ್.ಬಾಲಕೃಷ್ಣ, ಲಕ್ಷ್ಮೀನರಸಿಂಹರಾಜು, ಶ್ರೀನಿವಾಸ್, ಮನು, ಧರಣೇಂದ್ರಕುಮಾರ್, ಮರಿಗಂಗಯ್ಯ, ವಿಶ್ವನಾಥ್ಗೌಡ, ಲೋಕೇಶ್, ಮುಖಂಡರಾದ ಮೆಡಿಕಲ್ ಮಧು, ಭೈರೇಶ್ ಭಾಗವಹಿಸಿದ್ದರು.