ಮೈಸೂರು, ಫೆಬ್ರವರಿ 16, 2026: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆಯಲ್ಲೇ ಕಾಂಗ್ರೆಸ್ ಕೋಟೆ ಭೇದಿಸಲು ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಸಜ್ಜಾಗಿದ್ದಾರೆ. ನಗರದ ಖಾಸಗಿ ಹೋಟೆಲ್ನಲ್ಲಿ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಜೆಡಿಎಸ್ ನಾಯಕರು, ಫೆಬ್ರವರಿ 18ರಿಂದ ಮೈಸೂರು ಜಿಲ್ಲೆಯಾದ್ಯಂತ ‘ಜನರೊಂದಿಗೆ ಜನತಾದಳ’ ಕಾರ್ಯಕ್ರಮದ ಮೂಲಕ ಪಕ್ಷ ಸಂಘಟನೆಗೆ ಚಾಲನೆ ನೀಡಲಾಗುವುದು ಎಂದು ಘೋಷಿಸಿದರು. ಈ ಪ್ರವಾಸದಲ್ಲಿ ನಿಖಿಲ್ ಅವರು ಪ್ರತಿದಿನ ಒಂದೊಂದು ವಿಧಾನಸಭಾ ಕ್ಷೇತ್ರದಲ್ಲಿ ಸಂಚರಿಸಿ ಕಾರ್ಯಕರ್ತರನ್ನು ಹುರಿದುಂಬಿಸಲಿದ್ದಾರೆ.
ಮುಖ್ಯಮಂತ್ರಿಗಳ ತವರು ಜಿಲ್ಲೆಯಲ್ಲಿ ಪಕ್ಷವನ್ನು ಬಲಪಡಿಸುವುದು ನಿಖಿಲ್ ಅವರಿಗೆ ದೊಡ್ಡ ಸವಾಲಾಗಿದೆ. ಅದರಲ್ಲೂ ವಿಶೇಷವಾಗಿ ಪಕ್ಷದಿಂದ ಅಂತರ ಕಾಯ್ದುಕೊಂಡಿರುವ ಹಿರಿಯ ನಾಯಕ ಜಿ.ಟಿ. ದೇವೇಗೌಡರನ್ನು ವಿಶ್ವಾಸಕ್ಕೆ ಪಡೆಯುವಲ್ಲಿ ನಿಖಿಲ್ ಯಶಸ್ವಿಯಾಗುತ್ತಾರೆಯೇ ಎಂಬುದು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ. ಸಿದ್ದರಾಮಯ್ಯ ಅವರ ಪ್ರಭಾವವಿರುವ ಈ ನೆಲದಲ್ಲಿ ನಿಖಿಲ್ ಎಷ್ಟರಮಟ್ಟಿಗೆ ಯಶಸ್ಸು ಕಾಣಲಿದ್ದಾರೆ ಎಂಬುದು ಈ ಪ್ರವಾಸದ ನಂತರ ತಿಳಿಯಲಿದೆ.
ಕಾಂಗ್ರೆಸ್ ಶಾಸಕರ ವಿದೇಶ ಪ್ರವಾಸಕ್ಕೆ ಸಾ.ರಾ. ಮಹೇಶ್ ವ್ಯಂಗ್ಯ
ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಶಾಸಕರ ವಿದೇಶ ಪ್ರವಾಸದ ವಿಚಾರವಾಗಿ ರಾಜ್ಯ ಸರ್ಕಾರದ ವಿರುದ್ಧ ಮಾಜಿ ಸಚಿವ ಸಾ.ರಾ. ಮಹೇಶ್ ಹರಿಹಾಯ್ದರು. “ಈ ಪ್ರವಾಸವು ಶಾಸಕರಿಗೆ ಸೂಟ್ಕೇಸ್ ತಲುಪಿಸುವುದಕ್ಕೋ ಅಥವಾ ಅಸಮಾಧಾನಿತರನ್ನು ಸಮಾಧಾನಪಡಿಸುವುದಕ್ಕೋ ಎಂಬುದು ತಿಳಿಯುತ್ತಿಲ್ಲ. ಈ ಪ್ರವಾಸದ ಖರ್ಚನ್ನು ಯಾರು ಭರಿಸುತ್ತಿದ್ದಾರೆ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ಪ್ರವಾಸ ಮುಗಿದು ಬಿಲ್ ಬಂದ ಮೇಲೆ ಅಸಲಿ ಕಥೆಗಳು ಹೊರಬರಲಿವೆ” ಎಂದು ಮಾರ್ಮಿಕವಾಗಿ ನುಡಿದರು.
ಡಾ. ಯತೀಂದ್ರ ಹೇಳಿಕೆಗೆ ತಿರುಗೇಟು
ಹಿಂದುಳಿದ ವರ್ಗಗಳು ಸಿದ್ದರಾಮಯ್ಯ ಅವರ ಬೆಂಬಲಕ್ಕೆ ನಿಲ್ಲಬೇಕು ಎಂಬ ಎಂಎಲ್ಸಿ ಡಾ. ಯತೀಂದ್ರ ಸಿದ್ದರಾಮಯ್ಯ ಅವರ ಹೇಳಿಕೆಗೆ ಸಾ.ರಾ. ಮಹೇಶ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು. “ನೀವು ಎಂಎಲ್ಸಿ ಆಗುವಾಗ ಹಿಂದುಳಿದ ವರ್ಗಗಳ ನೆನಪು ಕಾಡಲಿಲ್ಲವೇ? ನಿಮ್ಮ ತಂದೆ ಮುಖ್ಯಮಂತ್ರಿಯಾಗಿದ್ದಾರೆ, ನೀವು ವೈದ್ಯರಾಗಿದ್ದೀರಿ. ಜನರ ಸೇವೆ ಮಾಡಲು ವೈದ್ಯಕೀಯ ವೃತ್ತಿಗಿಂತ ದೊಡ್ಡ ಹುದ್ದೆ ಬೇಕಿತ್ತೇ? ಅಷ್ಟಕ್ಕೂ ಅಧಿಕಾರ ನಿಮ್ಮ ಕುಟುಂಬಕ್ಕೇ ಬೇಕಿತ್ತೇ? ಆ ಎಂಎಲ್ಸಿ ಸ್ಥಾನವನ್ನು ಹಿಂದುಳಿದ ವರ್ಗದ ಯಾರಿಗಾದರೂ ಬಿಟ್ಟುಕೊಡಬಹುದಿತ್ತಲ್ಲವೇ? ಈಗ ನೀವು ಹಿಂದುಳಿದವರಾ?” ಎಂದು ಪ್ರಶ್ನಿಸುವ ಮೂಲಕ ಯತೀಂದ್ರ ಅವರಿಗೆ ಕಟುವಾದ ಟಾಂಗ್ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಶಾಸಕ ಜಿ.ಡಿ. ಹರೀಶ್ ಗೌಡ, ಎಂಎಲ್ಸಿ ಸಿ.ಎನ್. ಮಂಜೇಗೌಡ, ಜೆಡಿಎಸ್ ಕಾರ್ಯಾಧ್ಯಕ್ಷ ಸಾ.ರಾ. ಮಹೇಶ್, ಜಿಲ್ಲಾ ಗ್ರಾಮಾಂತರ ಅಧ್ಯಕ್ಷ ಅಶ್ವಿನ್ ಕುಮಾರ್, ನಗರಾಧ್ಯಕ್ಷ ಎಸ್.ಬಿ.ಎಂ. ಮಂಜು, ಮಾಜಿ ಶಾಸಕ ಕೆ. ಮಹದೇವ್ ಸೇರಿದಂತೆ ಮಾಜಿ ಮೇಯರ್ಗಳಾದ ಆರ್. ಲಿಂಗಪ್ಪ, ಎಂ.ಜೆ. ರವಿಕುಮಾರ್, ಭಾಗ್ಯವತಿ ಮತ್ತು ಮಾಜಿ ಜಿ.ಪಂ. ಸದಸ್ಯ ದ್ವಾರಕೀಶ್ ಭಾಗವಹಿಸಿದ್ದರು.
