ನಂಜನಗೂಡು, ನವೆಂಬರ್ 17, 2025 : ಗಂಡನ ಕೊಲೆಗೆ ದರೋಡೆ ಮಾದರಿಯ ಸಂಚು ರೂಪಿಸಿದ್ದ ಪತ್ನಿಯ ಕುತಂತ್ರಕ್ಕೆ ಬಲಿಯಾದ ಅಮಾಯಕ ಪತಿಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಕಳೆದ ತಿಂಗಳು ನಂಜನಗೂಡಿನಲ್ಲಿ ನಡೆದಿದ್ದ ಈ ಸಿನಿಮೀಯ ಕೊಲೆ ಯತ್ನ ಪ್ರಕರಣ ಇದೀಗ ಗಂಡನ ಸಾವಿನಲ್ಲಿ ಅಂತ್ಯಗೊಂಡಿದೆ.

ಕಳೆದ ಅಕ್ಟೋಬರ್ 25 ರಂದು ಈ ಘಟನೆ ಮೈಸೂರು ಜಿಲ್ಲೆಯ ನಂಜನಗೂಡು ಪಟ್ಟಣದಲ್ಲಿ ನಡೆದಿತ್ತು. ಪತ್ನಿ ಸಂಗೀತಾ ತನ್ನ ಪತಿ ರಾಜೇಂದ್ರ ಅವರನ್ನು ಕೊಲೆ ಮಾಡಲು ತಮ್ಮನ ಜೊತೆಗೂಡಿ ಸಂಚು ರೂಪಿಸಿದ್ದಳು.ಯಾರಿಗೂ ಅನುಮಾನ ಬಾರದಂತೆ, ದಂಪತಿಯ ಮನೆಗೆ ನುಗ್ಗಿದ ದರೋಡೆಕೋರರಂತೆ ನಾಟಕ ಸೃಷ್ಟಿಸಿ ಪತಿಯ ಕೊಲೆಗೆ ಸ್ಕೆಚ್ ಹಾಕಲಾಗಿತ್ತು. ಸಂಚು ರೂಪಿಸಿದ ಹಂತಕರು ಡ್ರ್ಯಾಗರ್ನಿಂದ ರಾಜೇಂದ್ರ ಅವರಿಗೆ ಇರಿದು ಕೊಲೆಗೆ ಯತ್ನಿಸಿದ್ದರು.
ಗಂಭೀರವಾಗಿ ಗಾಯಗೊಂಡಿದ್ದ ರಾಜೇಂದ್ರ ಅವರನ್ನು ತಕ್ಷಣ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ದುರದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೆ ರಾಜೇಂದ್ರ ಅವರು ಇಂದು ಕೊನೆಯುಸಿರೆಳೆದಿದ್ದಾರೆ.
ಪ್ರಕರಣದ ಕುರಿತು ನಂಜನಗೂಡು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರು, ಇದೊಂದು ದರೋಡೆ ಪ್ರಯತ್ನವಲ್ಲ, ಬದಲಾಗಿ ಪತ್ನಿ ಸಂಗೀತಾ ರೂಪಿಸಿದ ಕೊಲೆ ಸಂಚು ಎಂಬುದನ್ನು ಭೇದಿಸಿದ್ದಾರೆ. ಈಗಾಗಲೇ ಆರೋಪಿಗಳಾದ ಪತ್ನಿ ಸಂಗೀತಾ ಮತ್ತು ಆಕೆಯ ತಮ್ಮ ಸೇರಿದಂತೆ ಒಟ್ಟು ನಾಲ್ವರನ್ನು ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.
