ಮೈಸೂರು, ಮಾರ್ಚ್ 5, 2026 : ನಾಳೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಲಿರುವ ರಾಜ್ಯ ಬಜೆಟ್ ಕುರಿತು ಮೈಸೂರಿನಲ್ಲಿ ಮಾತನಾಡಿದ ಶಾಸಕ ತನ್ವೀರ್ ಸೇಠ್, ಸಿಎಂ ತವರು ಜಿಲ್ಲೆಯಾದ ಮೈಸೂರಿಗೆ ಈ ಬಾರಿ ಭರಪೂರ ಕೊಡುಗೆಗಳು ಸಿಗಲಿವೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸಾಂಸ್ಕೃತಿಕ ನಗರಿ ಮೈಸೂರಿನ ಸಮಗ್ರ ಅಭಿವೃದ್ಧಿಯ ದೃಷ್ಟಿಯಿಂದ ಸರ್ಕಾರ ಸೂಕ್ತ ಅನುದಾನ ಮೀಸಲಿಡಲಿದೆ ಎಂಬ ಭರವಸೆ ನಮಗಿದೆ ಎಂದು ಅವರು ಹೇಳಿದರು.
ವಿಶೇಷವಾಗಿ ಆರೋಗ್ಯ, ಶಿಕ್ಷಣ ಮತ್ತು ಉದ್ಯೋಗ ಸೃಷ್ಟಿಯತ್ತ ಬಜೆಟ್ನಲ್ಲಿ ಹೆಚ್ಚು ಒತ್ತು ನೀಡಬೇಕು ಎಂದು ನಾವು ಈಗಾಗಲೇ ಸರ್ಕಾರಕ್ಕೆ ಒಂದಷ್ಟು ಮಹತ್ವದ ಸಲಹೆಗಳನ್ನು ನೀಡಿದ್ದೇವೆ. ಕೇವಲ ಮೈಸೂರು ಮಾತ್ರವಲ್ಲದೆ, ಇಡೀ ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾದ ಜನಪರ ಬಜೆಟನ್ನು ಸಿದ್ದರಾಮಯ್ಯನವರು ಮಂಡಿಸಲಿದ್ದಾರೆ ಎಂಬ ಆಶಯವನ್ನು ತನ್ವೀರ್ ಸೇಠ್ ಇದೇ ಸಂದರ್ಭದಲ್ಲಿ ಹಂಚಿಕೊಂಡರು.
ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಯುದ್ಧದ ಭೀತಿ ಆವರಿಸಿರುವ ಹಿನ್ನೆಲೆಯಲ್ಲಿ, ಅಲ್ಲಿರುವ ಕನ್ನಡಿಗರನ್ನು ರಕ್ಷಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಕ್ತ ಕ್ರಮಗಳನ್ನು ಕೈಗೊಂಡಿದ್ದಾರೆ ಎಂದು ಶಾಸಕ ತನ್ವೀರ್ ಸೇಠ್ ತಿಳಿಸಿದ್ದಾರೆ. ಕನ್ನಡಿಗರ ಸುರಕ್ಷಿತ ವಾಪಸಾತಿ ಕುರಿತು ಸಿಎಂ ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಅವರಿಗೂ ಪತ್ರ ಬರೆದು ಕೇಂದ್ರ ಸರ್ಕಾರದ ನೆರವು ಕೋರಿದ್ದಾರೆ ಎಂದು ಅವರು ಮೈಸೂರಿನಲ್ಲಿ ಮಾಹಿತಿ ನೀಡಿದರು.
ಮೈಸೂರಿನಿಂದ ಅನೇಕರು ಉದ್ಯೋಗಕ್ಕಾಗಿ ಮಧ್ಯಪ್ರಾಚ್ಯಕ್ಕೆ ತೆರಳಿದ್ದಾರೆ, ಇನ್ನು ಕೆಲವರು ಮೆಕ್ಕಾ-ಮದೀನಾಗೆ ಯಾತ್ರೆಗೆ ಹೋಗಿ ಅಲ್ಲಿ ಸಿಲುಕಿದ್ದಾರೆ. ಆದರೆ, ಸದ್ಯಕ್ಕೆ ಅಲ್ಲಿರುವ ನಮ್ಮವರಿಗೆ ಯಾವುದೇ ತೊಂದರೆಯಾಗಿಲ್ಲ. ಮುಖ್ಯವಾಗಿ ಯುಎಸ್ಎ (USA) ಬೇಸ್ ಇರುವ ಕಡೆಗಳಲ್ಲಿ ಮಾತ್ರ ದಾಳಿಗಳು ನಡೆಯುತ್ತಿವೆ. ಉಳಿದಂತೆ ನಮ್ಮವರೆಲ್ಲರೂ ಸುರಕ್ಷಿತವಾಗಿದ್ದಾರೆ ಹಾಗೂ ಅವರನ್ನು ವಾಪಸ್ ಕರೆತರುವ ಪ್ರಕ್ರಿಯೆಯೂ ನಡೆಯುತ್ತಿದೆ ಎಂದು ಅವರು ಭರವಸೆ ನೀಡಿದರು.
ಪರಿಸ್ಥಿತಿಯ ಮೇಲೆ ನಿಗಾ ಇಡಲು ‘ಮೈಸೂರಿಯನ್ಸ್ ಇನ್ ಯುಎಇ’ (Mysoreans in UAE) ಎಂಬ ಗುಂಪಿನ ಮೂಲಕ ನಿರಂತರ ಸಂಪರ್ಕದಲ್ಲಿದ್ದೇವೆ. ಪ್ರಸ್ತುತ ಮೈಸೂರಿನ ಯಾವುದೇ ನಾಗರಿಕರಿಗೆ ಅಪಾಯವಿಲ್ಲ ಮತ್ತು ಎಲ್ಲರೂ ಕ್ಷೇಮವಾಗಿದ್ದಾರೆ ಎಂದು ತನ್ವೀರ್ ಸೇಠ್ ಮಾಧ್ಯಮಗಳಿಗೆ ತಿಳಿಸಿದರು.
