ತಿರುಪತಿ ,ಜುಲೈ 23, 2025 : ಪುರಾಣ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ತಿರುಪತಿಯ ಶ್ರೀ ವೆಂಕಟೇಶ್ವರ ಸ್ವಾಮಿ ಸನ್ನಿಧಾನದಲ್ಲಿ ನಡೆದ ಪಲ್ಲವೋತ್ಸವ ಧಾರ್ಮಿಕ ಕಾರ್ಯದಲ್ಲಿ ಮೈಸೂರು ರಾಜವಂಶಸ್ಥರಾದ ಪ್ರಮೋದಾ ದೇವಿ ಒಡೆಯರ್ ಮತ್ತು ಅವರ ಪುತ್ರ ಹಾಗೂ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಭಾಗಿಯಾದರು.
ಸುಮಾರು 300 ವರ್ಷಗಳಷ್ಟು ಪುರಾತನವಾಗಿರುವ ಈ ಸಾಂಪ್ರದಾಯಿಕ ಪಲ್ಲವೋತ್ಸವ ಸಮಾರಂಭದಲ್ಲಿ ರಾಜವಂಶಸ್ಥರು ಪಾಲ್ಗೊಂಡು, ಶಾಸ್ತ್ರೋಕ್ತವಾಗಿ ಸಕಲ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು. ನಾಡಿನ ಒಳಿತಿಗಾಗಿ ಶ್ರದ್ಧಾ ಭಕ್ತಿಯಿಂದ ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ತಿರುಪತಿಯ ಶ್ರೀದೇವಿ ಮತ್ತು ಭೂದೇವಿ ಹಾಗೂ ಶ್ರೀ ಮಲಯಪ್ಪ ಸ್ವಾಮಿ ದೇವರ ಉತ್ಸವ ಮೂರ್ತಿಗಳ ಮೆರವಣಿಗೆಯನ್ನು ನಡೆಸಲಾಯಿತು. ನಂತರ ವಿಶೇಷ ಮಂಗಳಾರತಿಯನ್ನು ನೆರವೇರಿಸಲಾಯಿತು.