ಮೈಸೂರು, ಡಿಸೆಂಬರ್ 19, 2025 : ರಾಜ್ಯ ರಾಜಕಾರಣದಲ್ಲಿ ಎಂ.ಎಲ್.ಸಿ ಸ್ಥಾನಕ್ಕಾಗಿ ಪೈಪೋಟಿ ಜೋರಾಗಿರುವ ಬೆನ್ನಲ್ಲೇ, ಮೈಸೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರೊಬ್ಬರು ವಿಭಿನ್ನವಾಗಿ ತಮ್ಮ ಹಕ್ಕೊತ್ತಾಯ ಮಂಡಿಸಿದ್ದಾರೆ. “ನನಗೂ ಎಂ.ಎಲ್.ಸಿ ಸ್ಥಾನ ನೀಡಿ” ಎಂದು ಆಗ್ರಹಿಸಿ ಕಾಂಗ್ರೆಸ್ ಕಾರ್ಯಕರ್ತ ಮೈಸೂರು ಬಸವಣ್ಣ ಅವರು ತಮ್ಮ ರಕ್ತದಲ್ಲೇ ಸಹಿ ಹಾಕಿ ವರಿಷ್ಠರಿಗೆ ಪತ್ರ ಬರೆದಿದ್ದಾರೆ.
ಮೈಸೂರಿನ ರಾಮಸ್ವಾಮಿ ವೃತ್ತದಲ್ಲಿ ನಿಂತು ತಮ್ಮ ಅರ್ಜಿಯನ್ನು ಪೋಸ್ಟ್ ಮಾಡಿದ ಬಸವಣ್ಣ, ಎಐಸಿಸಿ ನಾಯಕ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಈ ರಕ್ತಸಿಕ್ತ ಪತ್ರವನ್ನು ರವಾನಿಸಿದ್ದಾರೆ.
ಎಂ.ಎಲ್.ಸಿ ಸ್ಥಾನಕ್ಕಾಗಿ ಬಸವಣ್ಣ ಅವರು ಅರ್ಜಿ ಸಲ್ಲಿಸುತ್ತಿರುವುದು ಇದು ಮೂರನೇ ಬಾರಿ.ಹೊಸ ವರ್ಷದಲ್ಲಿ ಎಂ.ಎಲ್.ಸಿ ಸ್ಥಾನಗಳು ಖಾಲಿಯಾಗಲಿದ್ದು, ಈ ಬಾರಿ ತಮಗೆ ಅವಕಾಶ ಸಿಗಲಿದೆ ಎಂಬ ಭರವಸೆಯಲ್ಲಿ ಬಸವಣ್ಣ ಇದ್ದಾರೆ. ಹಲವಾರು ವರ್ಷಗಳಿಂದ ನಿಷ್ಠಾವಂತ ಕಾರ್ಯಕರ್ತನಾಗಿ ಪಕ್ಷಕ್ಕಾಗಿ ದುಡಿಯುತ್ತಿದ್ದೇನೆ. ನನ್ನ ಶ್ರಮವನ್ನು ಗುರುತಿಸಿ ಈ ಬಾರಿ ನೂರಕ್ಕೆ ನೂರರಷ್ಟು ಸ್ಥಾನ ನೀಡುತ್ತಾರೆ ಎಂಬ ವಿಶ್ವಾಸವಿದೆ ಎಂದು ಅವರು ಹೇಳಿದ್ದಾರೆ. “ಮಾನ್ಯ ಮುಖ್ಯಮಂತ್ರಿಯವರು ಹಾಗೂ ವರಿಷ್ಠರು ಈ ಬಾರಿ ನನ್ನನ್ನು ಕೈಬಿಡುವುದಿಲ್ಲ. ರಕ್ತದ ಮೂಲಕ ಸಹಿ ಮಾಡಿ ನನ್ನ ನಿಷ್ಠೆಯನ್ನು ತೋರಿಸಿದ್ದೇನೆ. ಈ ಬಾರಿ ಎಂ.ಎಲ್.ಸಿ ಸ್ಥಾನ ಸಿಗುತ್ತದೆ ಎನ್ನುವ ಅಚಲ ವಿಶ್ವಾಸ ನನಗಿದೆ.” ಎಂದು ಕಾಂಗ್ರೆಸ್ ಕಾರ್ಯಕರ್ತ ಮೈಸೂರು ಬಸವಣ್ಣ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಹಲವು ವರ್ಷಗಳಿಂದ ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಂಡಿರುವ ಬಸವಣ್ಣ, ಈ ಬಾರಿ ವರಿಷ್ಠರ ಗಮನ ಸೆಳೆಯಲು ಈ ಸಾಹಸಕ್ಕೆ ಮುಂದಾಗಿದ್ದಾರೆ. ಇವರ ಈ ವಿಭಿನ್ನ ಮನವಿ ಈಗ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
