ಉಮೇಶ್ ಸುಬ್ರಮಣಿ ವಿಶ್ವಾಸ * ಮಡಿಕೇರಿಯಲ್ಲಿ ಬಿಜೆಪಿ ಬಿರುಸಿನ ಪ್ರಚಾರ
ಪ್ರತಿನಿಧಿ ವರದಿ ಮಡಿಕೇರಿ
ಪ್ರಾಮಾಣಿಕವಾಗಿ ಫಲಾನುಭವಿಗಳನ್ನು ತಲುಪುವ ಮತ್ತು ಯಾರಿಗೂ ಹೊರೆಯಿಲ್ಲದ ಏಕೈಕ ಗ್ಯಾರಂಟಿಯೆಂದರೆ ಅದು ಮೋದಿ ಗ್ಯಾರಂಟಿ ಎಂದು ಮಡಿಕೇರಿ ನಗರ ಬಿಜೆಪಿ ಅಧ್ಯಕ್ಷ ಉಮೇಶ್ ಸುಬ್ರಮಣಿ ತಿಳಿಸಿದ್ದಾರೆ.
ನಗರದ ವಿವಿಧ ಬಡಾವಣೆಗಳಲ್ಲಿ ಬಿಜೆಪಿ ಅಭ್ಯರ್ಥಿ ಯದುವೀರ್ ಒಡೆಯರ್ ಅವರ ಪರ ಎರಡನೇ ಹಂತದ ಮನೆ ಮನೆ ಪ್ರಚಾರ ನಡೆಸಿ ಮಾತನಾಡಿದರು.
ಹತ್ತು ವರ್ಷಗಳ ಬಿಜೆಪಿ ನೇತೃತ್ವದ ಆಡಳಿತದಲ್ಲಿ ದೇಶ ಪ್ರಗತಿ ಪಥದತ್ತ ಸಾಗಿದ್ದು, ಈ ಬಾರಿ ಕೂಡ ಮೋದಿ ಗ್ಯಾರಂಟಿಗೆ ಬಹುಮತ ಲಭಿಸಲಿದೆ. ಇಡೀ ದೇಶದ ಜನ ಒಪ್ಪುವಂತಹ ಗ್ಯಾರಂಟಿಗಳನ್ನು ಪ್ರಧಾನಮಂತ್ರಿ ನರೇಂದ್ರಮೋದಿ ಅವರು ನೀಡಿದ್ದಾರೆ ಎಂದರು.
ಮೋದಿ ಗ್ಯಾರಂಟಿಗೆ ಮತ ನೀಡಿದರೆ ವಿಕಸಿತ ಭಾರತದ ಹಿತ ಕಾಯಬಹುದಾಗಿದೆ. ಸರ್ವವ್ಯಾಪಿ, ಸರ್ವಸ್ಪರ್ಶಿ ಮತ್ತು ದೂರದೃಷ್ಟಿಯ ಸಂಕಲ್ಪ ಪತ್ರವನ್ನು ಮನೆ ಮನೆಗೆ ತಲುಪಿಸುತ್ತಿದ್ದೇವೆ. ಎಲ್ಲ ಕಡೆ ಅಭ್ಯರ್ಥಿ ಯದುವೀರ್ ಅವರ ಪರ ಜನ ಒಲವು ತೋರುತ್ತಿದ್ದಾರೆ. ಮೈಸೂರು- ಕೊಡಗು ಕ್ಷೇತ್ರದಲ್ಲಿ ಬಿಜೆಪಿ ಭರ್ಜರಿ ಜಯ ಸಾಧಿಸಲಿದೆ. ಮಡಿಕೇರಿ ನಗರದಲ್ಲಿ ಪ್ರಚಾರವನ್ನು ಬಿರುಸುಗೊಳಿಸಲಾಗಿದ್ದು, ಅತ್ಯಧಿಕ ಮತಗಳನ್ನು ಯದುವೀರ್ ಅವರಿಗೆ ನೀಡಲಾಗುವುದು ಎಂದು ಉಮೇಶ್ ಸುಬ್ರಮಣಿ ತಿಳಿಸಿದರು.
ಮನೆ ಮನೆ ಪ್ರಚಾರ ಕಾರ್ಯದಲ್ಲಿ ಬಿಜೆಪಿ ಜಿಲ್ಲಾ ವಕ್ತಾರ ಬಿ.ಕೆ.ಅರುಣ್ ಕುಮಾರ್, ನಗರ ಪ್ರಧಾನ ಕಾರ್ಯದರ್ಶಿಗಳಾದ ಬಿ.ಕೆ.ಜಗದೀಶ್, ಕವನ್ ಕಾವೇರಪ್ಪ, ಪ್ರಮುಖರಾದ ಸತೀಶ್ ಪೈ, ಕನ್ನಂಡ ಸಂಪತ್, ನಗರಸಭೆಯ ಬಿಜೆಪಿ ಸದಸ್ಯರುಗಳು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.