ಮಂಡ್ಯ, ನವೆಂಬರ್ 18, 2025 : ಖಾಸಗಿ ವಿದ್ಯುತ್ ಉತ್ಪಾದನಾ ಕೇಂದ್ರದ ಆಳವಾದ ಕಾಲುವೆಗೆ ಬಿದ್ದ ಕಾಡಾನೆಯೊಂದು ಮೂರು ದಿನಗಳಿಂದ ಮೇಲೇರಲಾಗದೆ ಪರಿತಪಿಸುತ್ತಿರುವ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಬ್ಲಫ್ ಬಳಿ ನಡೆದಿದೆ. ಈ ವಿಚಾರ ತಿಳಿದಿದ್ದರೂ, ಆನೆಯನ್ನು ರಕ್ಷಿಸುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ ಎಂದು ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಳವಳ್ಳಿ ತಾಲ್ಲೂಕಿನ ಬ್ಲಫ್ ಬಳಿ ಇರುವ ಖಾಸಗಿ ವಿದ್ಯುತ್ ಉತ್ಪಾದನಾ ಕೇಂದ್ರದ ಕಾಲುವೆಯಲ್ಲಿ ಕಳೆದ ಶನಿವಾರ ರಾತ್ರಿ ಕಾಡಾನೆ ಕಾಲುವೆಗೆ ಬಿದ್ದಿದೆ ಎನ್ನಲಾಗಿದೆ. ಸುಮಾರು 20 ಅಡಿ ಆಳದ ಈ ಕಾಲುವೆಯಿಂದ ಮೇಲೆ ಬರಲಾಗದೆ ಆನೆ ಪರದಾಡುತ್ತಿದೆ. ಆಹಾರವಿಲ್ಲದೆ ಜೀವ ಭಯದಲ್ಲಿ ಓಡಾಡುತ್ತಿದೆ.
ಕಾಡಾನೆ ಕಾಲುವೆಗೆ ಬಿದ್ದಿರುವ ವಿಚಾರವನ್ನು ವಿದ್ಯುತ್ ಉತ್ಪಾದನಾ ಕೇಂದ್ರದ ಸಿಬ್ಬಂದಿಗಳು ಅರಣ್ಯ ಇಲಾಖೆಗೆ ಕೂಡಲೇ ತಿಳಿಸಿದ್ದರು. ಆದರೆ, ಮಾಹಿತಿ ತಿಳಿದಿದ್ದರೂ ಅರಣ್ಯ ಇಲಾಖೆ ಸಿಬ್ಬಂದಿಗಳು ಆನೆಯನ್ನು ಮೇಲೆತ್ತುವ ಕಾರ್ಯವನ್ನು ಮಾಡಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಮೂರು ದಿನಗಳ ಕಾಲ ಆನೆ ಸಂಕಷ್ಟದಲ್ಲಿ ಇರುವ ಬಗ್ಗೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾದ ನಂತರ, ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆಯನ್ನು ಆರಂಭಿಸಿದ್ದಾರೆ.
ಪ್ರಸ್ತುತ, ಸುಮಾರು 20 ಅಡಿ ಆಳದ ಕಾಲುವೆಯಲ್ಲಿ ಸಿಲುಕಿರುವ ಕಾಡಾನೆಯನ್ನು ಸುರಕ್ಷಿತವಾಗಿ ಮೇಲೆತ್ತಲು ಅರಣ್ಯ ಇಲಾಖೆ ಸಿಬ್ಬಂದಿಗಳ ತಂಡ ಕಾರ್ಯಾಚರಣೆಯನ್ನು ಮುಂದುವರಿಸಿದೆ.
