ಬೆಂಗಳೂರು, ಏಪ್ರಿಲ್ 9, 2026: ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಹೆಚ್.ಡಿ. ಕುಮಾರಸ್ವಾಮಿ ಹಾಗೂ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರು ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ಮೈಸೂರಿನವರೆಗೆ ವಿಶೇಷ ರೈಲಿನಲ್ಲಿ ‘ವಿಂಡೋ ಟ್ರೇಲಿಂಗ್’ (Window Trailing) ಮೂಲಕ ಜಂಟಿ ಪರಿವೀಕ್ಷಣೆ ನಡೆಸಿದರು.
ಒಡೆಯರ್ ಎಕ್ಸ್ಪ್ರೆಸ್ಗೆ ರಾಮನಗರ ನಿಲುಗಡೆ: ಅತ್ಯಂತ ನಿರೀಕ್ಷಿತ ವಿಷಯವಾದ ‘ಒಡೆಯರ್ ಎಕ್ಸ್ಪ್ರೆಸ್’ ರೈಲಿಗೆ ರಾಮನಗರದಲ್ಲಿ ನಿಲುಗಡೆ ನೀಡುವ ಕುರಿತು ರೈಲ್ವೆ ಮಂಡಳಿಯಿಂದ ಅಧಿಕೃತ ಅನುಮತಿ ದೊರೆತಿದೆ. ಈ ಸಂಬಂಧ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮತ್ತು ರಾಜ್ಯ ಸಚಿವ ವಿ. ಸೋಮಣ್ಣ ಅವರೊಂದಿಗೆ ಕುಮಾರಸ್ವಾಮಿಯವರು ಸಮಾಲೋಚನೆ ನಡೆಸಿದ್ದರು. ಕೇಂದ್ರ ಸಚಿವರು ಸಮಯ ನಿಗದಿಪಡಿಸಿದ ನಂತರ, ರಾಮನಗರದಲ್ಲಿ ನಿಲುಗಡೆಗೆ ಅಧಿಕೃತವಾಗಿ ಚಾಲನೆ ನೀಡಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.
ಮಾರ್ಗದುದ್ದಕ್ಕೂ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ: ಸಚಿವರು ಮೈಸೂರು ಮಾರ್ಗದ ಉದ್ದಕ್ಕೂ ರೈಲು ಹಳಿಗಳ ಸ್ಥಿತಿಗತಿ, ರೈಲ್ವೆ ಮಾರ್ಗದ ವ್ಯಾಪ್ತಿಯಲ್ಲಿ ಬರುವ ಅಂಡರ್-ಪಾಸ್ಗಳು (Underpass) ಮತ್ತು ಮೇಲ್ಸೇತುವೆಗಳ (Overbridges) ನಿರ್ಮಾಣ ಹಾಗೂ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳನ್ನು ಖುದ್ದು ವೀಕ್ಷಿಸಿ, ಪರಿಶೀಲನೆ ನಡೆಸಿದರು.
ಅಧಿಕಾರಿಗಳೊಂದಿಗೆ ಸಮಾಲೋಚನೆ: ಈ ಪರಿವೀಕ್ಷಣಾ ಪ್ರವಾಸದಲ್ಲಿ ದಕ್ಷಿಣ ಪಶ್ಚಿಮ ರೈಲ್ವೆ ವಿಭಾಗೀಯ ವ್ಯವಸ್ಥಾಪಕರು ಸೇರಿದಂತೆ ಹಿರಿಯ ರೈಲ್ವೆ ಅಧಿಕಾರಿಗಳು ಹಾಗೂ ರೈಲು ಮಾರ್ಗ ವ್ಯಾಪ್ತಿಗೆ ಬರುವ ಆಯಾ ಕ್ಷೇತ್ರಗಳ ಜನಪ್ರತಿನಿಧಿಗಳು ಭಾಗವಹಿಸಿದ್ದರು. ಪರಿವೀಕ್ಷಣೆ ವೇಳೆ ಮಂಡ್ಯ, ರಾಮನಗರ ಮತ್ತು ಮೈಸೂರು ಲೋಕಸಭಾ ಕ್ಷೇತ್ರಗಳಲ್ಲಿ ಬಾಕಿ ಉಳಿದಿರುವ ರೈಲ್ವೆ ಯೋಜನೆಗಳ ಕುರಿತು ಸಚಿವರು ಮತ್ತು ಉನ್ನತ ಅಧಿಕಾರಿಗಳೊಂದಿಗೆ ಕುಮಾರಸ್ವಾಮಿಯವರು ಸುದೀರ್ಘ ಚರ್ಚೆ ನಡೆಸಿದರು.
ಈ ಜಂಟಿ ಪರಿವೀಕ್ಷಣೆಯು ಈ ಭಾಗದ ರೈಲ್ವೆ ಸಂಪರ್ಕ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ಮತ್ತು ಪ್ರಯಾಣಿಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ.
