ಮೈಸೂರು, ಫೆಬ್ರವರಿ 7, 2026 :ಸಾಂಸ್ಕೃತಿಕ ನಗರಿ ಮೈಸೂರಿನ ಸಿದ್ದಾರ್ಥನಗರ ಸಂಚಾರ ಪೊಲೀಸ್ ಠಾಣೆಯ ಸುಸಜ್ಜಿತ ನೂತನ ಕಟ್ಟಡವನ್ನು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಶುಕ್ರವಾರ ಅಧಿಕೃತವಾಗಿ ಉದ್ಘಾಟಿಸಿದರು. ಟೇಪ್ ಕತ್ತರಿಸುವ ಮೂಲಕ ಕಟ್ಟಡ ಲೋಕಾರ್ಪಣೆ ಮಾಡಿದ ಸಚಿವರು, ಬಳಿಕ ವೇದಿಕೆ ಸಮಾರಂಭಕ್ಕೆ ದೀಪ ಬೆಳಗುವ ಮೂಲಕ ಚಾಲನೆ ನೀಡಿದರು.

ಪೊಲೀಸ್ ಠಾಣೆಗಳು ದೇಗುಲಗಳಿದ್ದಂತೆ: ಗೃಹ ಸಚಿವ ಡಾ. ಜಿ. ಪರಮೇಶ್ವರ್
ಸಮಾರಂಭದಲ್ಲಿ ಮಾತನಾಡಿದ ಗೃಹ ಸಚಿವರು, “ಪೊಲೀಸ್ ಇಲಾಖೆಯಲ್ಲಿ ಕಳೆದ ಹತ್ತು ವರ್ಷಗಳಿಂದ ಸಾಕಷ್ಟು ಸುಧಾರಣೆ ತರಲಾಗಿದೆ. ಜನರು ತಮ್ಮ ಕಷ್ಟ ಪರಿಹಾರಕ್ಕಾಗಿ ದೇವಸ್ಥಾನಕ್ಕೆ ಹೋಗುವಂತೆ ಪೊಲೀಸ್ ಠಾಣೆಗೂ ಬರುತ್ತಾರೆ. ಆ ದೃಷ್ಟಿಯಿಂದ ಠಾಣೆಗಳು ದೇಗುಲಗಳಿದ್ದಂತೆ. ಪೊಲೀಸರು ಪ್ರತಿಯೊಬ್ಬರನ್ನೂ ಅಪರಾಧಿ ಎಂಬಂತೆ ನೋಡದೆ, ಜನಸ್ನೇಹಿ ಪೊಲೀಸ್ ವ್ಯವಸ್ಥೆಯನ್ನು ಜಾರಿಗೊಳಿಸಬೇಕು,” ಎಂದರು. ಇದೇ ವೇಳೆ ‘ಮನೆ ಮನೆಗೂ ಕಾಂಗ್ರೆಸ್’ ಮಾದರಿಯಲ್ಲಿ ‘ಮನೆ ಮನೆಗೂ ಪೊಲೀಸ್’ ಅಭಿಯಾನಕ್ಕೆ ಚಾಲನೆ ನೀಡಲಾಗಿದ್ದು, ಪೊಲೀಸರು ಜನರ ಮನೆಬಾಗಿಲಿಗೆ ಹೋಗಿ ಸಮಸ್ಯೆ ಆಲಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಜನಪ್ರತಿನಿಧಿಗಳು ಮೈಸೂರಿನ ಸುಗಮ ಸಂಚಾರ ಮತ್ತು ಕಾನೂನು ಸುವ್ಯವಸ್ಥೆ ಕುರಿತು ಹಲವು ಸಲಹೆಗಳನ್ನು ನೀಡಿದರು:
-
ಶಾಸಕ ಶ್ರೀವತ್ಸ: “ಮೈಸೂರು ಪ್ರವಾಸಿಗರ ತಾಣ. ವಾರಾಂತ್ಯದಲ್ಲಿ ನಗರದ ಹೃದಯ ಭಾಗದಲ್ಲಿ ವಿಪರೀತ ಟ್ರಾಫಿಕ್ ಜಾಮ್ ಆಗುತ್ತಿದ್ದು, ಪ್ರವಾಸಿಗರು ಪರದಾಡುತ್ತಿದ್ದಾರೆ. ಇದನ್ನು ತಡೆಯಲು ಮತ್ತು ಮೈಸೂರನ್ನು ಟೂರಿಸ್ಟ್ ಫ್ರೆಂಡ್ಲಿ ನಗರವನ್ನಾಗಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು,” ಎಂದು ಒತ್ತಾಯಿಸಿದರು.
-
ಶಾಸಕ ತನ್ವೀರ್ ಸೇಠ್: “ಉದಯಗಿರಿ ಪೊಲೀಸ್ ಠಾಣೆ ವಿಭಜನೆಯಾಗಿದ್ದರೂ ಸೂಕ್ತ ಸಿಬ್ಬಂದಿ ನೇಮಕವಾಗಿಲ್ಲ. ಹೆಚ್ಚುತ್ತಿರುವ ಅಪರಾಧ ಕೃತ್ಯಗಳಿಗೆ ಕಡಿವಾಣ ಹಾಕಲು ಹೆಚ್ಚಿನ ಸಿಬ್ಬಂದಿ ನಿಯೋಜಿಸಬೇಕು. ವ್ಯಸನ ಮುಕ್ತ ಸಮಾಜದ ಜೊತೆಗೆ ಅಪರಾಧ ಮುಕ್ತ ಸಮಾಜದತ್ತ ಪೊಲೀಸರು ಗಮನಹರಿಸಬೇಕು,” ಎಂದರು.
-
ಶಾಸಕ ಅನಿಲ್ ಚಿಕ್ಕಮಾದು: “ನಗರದಲ್ಲಿ ಇತ್ತೀಚೆಗೆ ಡ್ರಗ್ಸ್ ಹಾವಳಿ ಹೆಚ್ಚುತ್ತಿರುವುದು ಕಳವಳಕಾರಿ. ವಿಶೇಷವಾಗಿ ಇಂಜಿನಿಯರಿಂಗ್, ಮೆಡಿಕಲ್ ಸೇರಿದಂತೆ ವಿವಿಧ ಕಾಲೇಜು ವಿದ್ಯಾರ್ಥಿಗಳಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಬೇಕು,” ಎಂದು ತಿಳಿಸಿದರು.
-
ಎಂಎಲ್ಸಿ ಸಿ.ಎನ್. ಮಂಜೇಗೌಡ: “ಹಗಲಿರುಳು ದುಡಿಯುವ ಪೊಲೀಸರ ಆರೋಗ್ಯ ಸುಧಾರಣೆ ಮತ್ತು ವಸತಿ ಗೃಹಗಳ ನವೀಕರಣಕ್ಕೆ ಸರ್ಕಾರ ಹೆಚ್ಚಿನ ಆದ್ಯತೆ ನೀಡಬೇಕು,” ಎಂದು ಮನವಿ ಮಾಡಿದರು.
