ಮೈಸೂರು, ನವೆಂಬರ್ 3, 2025 : ಮೈಸೂರು ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿಂದು ಮಾಜಿ ಮುಖ್ಯಮಂತ್ರಿ, ಹಿಂದುಳಿದ ವರ್ಗಗಳ ಹರಿಕಾರ ದಿವಂಗತ ಡಿ ದೇವರಾಜ ಅರಸುರವರ ಪ್ರತಿಮೆಯನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಲೋಕಾರ್ಪಣೆಗೊಳಿಸಿದರು.

ಈ ವೇಳೆ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ದೇವರಾಜ ಅರಸುರವರ ಪ್ರತಿಮೆ ಉದ್ಘಾಟನಾ ಸಮಾರಂಭ ಅದ್ದೂರಿಯಾಗಿ ನೆರವೇರಬೇಕಿತ್ತು. ನವೆಂಬರ್ 15 ಕ್ಕೆ ಉದ್ಘಾಟನೆ ಮಾಡಲು ಚಿಂತಿಸಲಾಗಿತ್ತು ಆದರೆ ಇಂದು ಉದ್ಘಾಟನೆ ನೆರವೇರಿದೆ. ಮೈಸೂರು ಜಿಲ್ಲೆ ದೇವರಾಜ ಅವರ ಜನ್ಮಭೂಮಿಯಾದ ಕಾರಣ ಮೈಸೂರು ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಅವರ ಪ್ರತಿಮೆ ನಿರ್ಮಿಸುವ ಚಿಂತನೆ ಮೊದಲಿನಿಂದಲೂ ಇತ್ತು. ದೇವರಾಜ ಅರಸು ಸಿಎಂ ಆಗಿದ್ದಾಗ ನಾವೆಲ್ಲರೂ ಬೇರೆ ಬೇರೆ ಪಕ್ಷದಲ್ಲಿದ್ದರೂ ಅವರು ನಮಗೆಲ್ಲರಿಗೂ ಮಾದರಿಯಾಗಿದ್ದರು. ಸಮಾಜದ ಎಲ್ಲಾ ವರ್ಗದ ಜನರಿಗೂ ನ್ಯಾಯ ಸಿಕ್ಕಾಗ ಮಾತ್ರ ಸಮ ಸಮಾಜದ ನಿರ್ಮಾಣ ಸಾಧ್ಯವಾಗಲಿದೆ. ಸಮಾಜದಲ್ಲಿ ವಂಚಿತವಾಗಿದ್ದ ತಳ ಸಮುದಾಯಗಳಿಗೆ ನ್ಯಾಯ ದೊರಕಿಸಿಕೊಟ್ಟರು.ದೇವರು ವರವನ್ನು ಕೊಡೋದಿಲ್ಲ, ಶಾಪವನ್ನು ಕೊಡೋದಿಲ್ಲ, ಅವಕಾಶವನ್ನು ಕೊಡುತ್ತಾನೆ. ಅವಕಾಶವನ್ನು ಸದುಪಯೋಗ ಮಾಡಿಕೊಳ್ಳುವುದು ಬುದ್ಧಿವಂತಿಕೆಯ ಲಕ್ಷಣ.ಎಲ್ಲರಿಗೂ ಸಮಾನ ಅವಕಾಶ ಸಿಗದ ಕಾರಣ ಅಸಮಾನತೆಯ ಸಮಾಜ ನಿರ್ಮಾಣವಾಯಿತು. ನಮ್ಮ ಸರ್ಕಾರ ಅಸಮಾನತೆ ನಿರ್ಮೂಲನೆಗಾಗಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ. ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ಸಮ ಸಮಾಜದ ನಿರ್ಮಾಣ ಇನ್ನೂ ಸಾಧ್ಯವಾಗಿಲ್ಲ. ಶಿಕ್ಷಣದಿಂದ ವಂಚಿತರಾದ ಜನರು ಬಡತನಕ್ಕೆ ಒಳಗಾಗಿ, ನಿರುದ್ಯೋಗ ಸಮಸ್ಯೆಗೆ ಸಿಲುಕಿ, ಅಧಿಕಾರದಿಂದ ವಂಚಿತರಾಗುತ್ತಾರೆ. ಅಂತಹವರಿಗೆ ಶಕ್ತಿ ತುಂಬುವ ಕೆಲಸವನ್ನು ನಮ್ಮ ಸರ್ಕಾರ ಮಾಡುತ್ತಿದೆ ಎಂದು ನುಡಿದರು.
ಇದೇ ವೇಳೆ ಸಿದ್ದರಾಮಯ್ಯ ಭಾಷಣ ಮಾಡಲು ಬರುತ್ತಿದ್ದಂತೆ ಕಂಸಾಳೆ ರವಿಯವರು, ಅಂದು ದೇವರಾಜ ಅರಸು, ಇಂದು ಸಿದ್ದರಾಮಯ್ಯ ಎಂದು ಘೋಷಣೆ ಕೂಗಿದ್ದಕ್ಕೆ ಸಿಎಂ ಸಿದ್ದರಾಮಯ್ಯ ಗರಂ ಆದ ಘಟನೆ ಜರುಗಿದ್ದು, ಘೋಷಣೆ ಕೂಗಿದವರು ಯಾರು ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ದೇವರಾಜ ಅರಸು ದೇವರಾಜ ಅರಸುರವರೇ. ಸಿದ್ದರಾಮಯ್ಯ ಸಿದ್ದರಾಮಯ್ಯನೇ ಎಂದು ನುಡಿದರು. ಈ ಸಂದರ್ಭ ಸಿಎಂ ಸಿದ್ದರಾಮಯ್ಯಗೆ ಜಯವಾಗಲಿ ಎಂದು ಜಯಕಾರ ಕೂಗಿದವರ ಬಾಯ್ಮುಚ್ಚಿಸಿದರು ಅಲ್ಲದೆ ಘೋಷಣೆ ಕೂಗದಂತೆ ಗದರಿದರು.
ಸಮಾರಂಭದಲ್ಲಿ ಸಚಿವ ಡಾ. ಹೆಚ್ ಸಿ ಮಹದೇವಪ್ಪ,, ದೇವರಾಜ ಅರಸುರವರ ಪುತ್ರಿ ಭಾರತಿ ಅರಸು, ಶಾಸಕರಾದ ತನ್ವೀರ್ ಸೇಠ್, ಪುಟ್ಟರಂಗಶೆಟ್ಟಿ, ಡಿ ರವಿಶಂಕರ್, ವಿಧಾನ ಪರಿಷತ್ ಸದಸ್ಯರಾದ ಎಚ್ ವಿಶ್ವನಾಥ್, ಡಾ. ಡಿ ತಿಮ್ಮಯ್ಯ, ಸಿ ಎನ್ ಮಂಜೇಗೌಡ, ಡಾ. ಯತೀಂದ್ರ, ಶಿವಕುಮಾರ್ ಸೇರಿದಂತೆ ಇತರ ಪ್ರಮುಖರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
