ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕೆ । ಕೊಳ್ಳೇಗಾಲದಲ್ಲಿ ಚುನಾವಣಾ ಪ್ರಚಾರ ಸಭೆ
ಪ್ರತಿನಿಧಿ ವರದಿ ಕೊಳ್ಳೇಗಾಲ
ಸಂವಿಧಾನ ಮತ್ತು ಪ್ರಜಾಪ್ರಭುತ್ವ ದೇಶದ ಪ್ರಧಾನಿ ನರೇಂದ್ರಮೋದಿ ಕೈಯಲ್ಲಿ ಸುರಕ್ಷಿತವಾಗಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆತಂಕ ವ್ಯಕ್ತಪಡಿಸಿದರು.
ಪಟ್ಟಣದ ಎಂಜಿಎಸ್ವಿ ಸರ್ಕಾರಿ ಕಾಲೇಜು ಮೈದಾನದಲ್ಲಿ ಶುಕ್ರವಾರ ಹನೂರು ಹಾಗೂ ಕೊಳ್ಳೇಗಾಲ ಬ್ಲಾಕ್ ಕಾಂಗ್ರೆಸ್ ವತಿಯಿಂದ ಆಯೋಜಿಸಲಾಗಿದ್ದ ಚಾಮರಾಜನಗರ ಲೋಕಸಭಾ ಕ್ಷೇತ್ರದ ಚುನಾವಣಾ ಪ್ರಚಾರ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಬಾಬಾ ಸಾಹೇಬ್ ಅಂಬೇಡ್ಕರ್ ಅವರು ದೇಶದ ಒಳಿತಿಗಾಗಿ ಸಂವಿಧಾನ ಕೊಟ್ಟಿದ್ದಾರೆ. ಆದರೆ, ಅದನ್ನೇ ಬದಲಾವಣೆ ಮಾಡಲು ನರೇಂದ್ರಮೋದಿ ಅವರ ಸರ್ಕಾರ ಹೊರಟಿದೆ. ಸಂವಿಧಾನ ಉಳಿಯಲೇಬೇಕು. ಬಡವರು, ಹಿಂದುಳಿದವರು, ದಲಿತರು, ಮಹಿಳೆಯರು, ಅಲ್ಪಸಂಖ್ಯಾತರ ಅಭಿವೃದ್ಧಿ ಆಗಬೇಕಾದರೆ ದೇಶದಲ್ಲಿ ಈ ಬಾರಿ ಕಾಂಗ್ರೆಸ್ ಗೆಲ್ಲಲೇಬೇಕು. ಪ್ರಜಾಪ್ರಭುತ್ವ ಉಳಿದರೆ ಮಾತ್ರ ದೇಶ ಉಳಿಯಲು ಸಾಧ್ಯ ಎಂಬುದನ್ನು ನೀವೆಲ್ಲ ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.
ನರೇಂದ್ರಮೋದಿ ಅವರು ಪ್ರಧಾನಿಯಾಗಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಮತ್ತೆ 10 ವರ್ಷ ಪ್ರಧಾನಿಯಾಗುತ್ತೇನೆ ಎಂದು ಹೇಳುತ್ತಿದ್ದಾರೆ. 140 ಕೋಟಿ ಜನರ ಅಭಿವೃದ್ಧಿ ಮಾಡುತ್ತೇನೆ ಎಂದಿದ್ದರು. ಆದರೆ, ಇವತ್ತಿನವರೆಗೂ ಮಾಡಲಿಲ್ಲ. ಇವರು ಅಭಿವೃದ್ಧಿ ಮಾಡಿದ್ದು ಅಂಬಾನಿ, ಆದಾನಿ, ಟಾಟಾ ಬಿರ್ಲಾಗಳನ್ನು ಮಾತ್ರ. ಇವರಿಂದ ಬಡವರು, ರೈತರು, ಮಹಿಳೆಯರ ಅಭಿವೃದ್ಧಿಯಾಗಲಿಲ್ಲ. ಇಷ್ಟಾದರೂ ನರೇಂದ್ರಮೋದಿ ಮತ್ತು ಬಿಜೆಪಿಗೆ ವೋಟ್ ಹಾಕಬೇಕಾ? ಎಂದು ಪ್ರಶ್ನಿಸಿದರಲ್ಲದೇ, ಕೈಮುಗಿದು ನಿಮ್ಮನ್ನು ಕೇಳಿಕೊಳ್ಳುತ್ತೇನೆ. ಬಿಜೆಪಿಗೆ ವೋಟು ಹಾಕಬೇಡಿ. ಅವರು ಬಡವರು, ಹಿಂದುಳಿದ, ಮಹಿಳೆಯರ, ಅಲ್ಪಸಂಖ್ಯಾತರ ವಿರೋಧಿಗಳು ಎಂದು ಕಿಡಿಕಾರಿದರು.
5 ಗ್ಯಾರಂಟಿ ಮುಂದುವರೆಯಲಿದೆ:
ಲೋಕಸಭಾ ಚುನಾವಣೆ ನಂತರ ನಮ್ಮ ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆ ನಿಲ್ಲಿಸುತ್ತದೆ ಎಂಬ ಅಪಪ್ರಚಾರವನ್ನು ಬಿಜೆಪಿಯವರು ಮಾಡುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಆರೋಪಿಸಿದರಲ್ಲದೇ, ನಾನು ಕೊಟ್ಟ ಮಾತಿಗೆ ತಪ್ಪಿಸಿಕೊಳ್ಳುವವನಲ್ಲ. ಹಿಂದೆ ಸಿಎಂ ಆಗಿದ್ದಾಗ ಎಲ್ಲ ಯೋಜನೆ ಈಡೇರಿಸಲಿಲ್ಲವಾ? ಯಾವಾಗ ಮಾತಿಗೆ ತಪ್ಪಿಸಿಕೊಂಡಿದ್ದೇವೆ? ನರೇಂದ್ರಮೋದಿ, ಬಿಜೆಪಿ ಮಾತಿಗೆ ತಪ್ಪಿಸಿಕೊಂಡವರು. ಇದೇ ಕಾಂಗ್ರೆಸ್ ಗೂ ಬಿಜೆಪಿಗೂ ಇರುವ ವ್ಯತ್ಯಾಸ. ಸುಳ್ಳೇ ಬಿಜೆಪಿಯವರ ಮನೆ ದೇವರು. ಬಡವರು, ಮಹಿಳೆಯರನ್ನು ಕಂಡರೆ ಅವರಿಗೆ ಆಗಲ್ಲ. ಬಡವರಿಗೆ, ದಲಿತರಿಗೆ, ಮಹಿಳೆಯರಿಗೆ, ಹಿಂದುಳಿದವರಿಗೆ ಶಕ್ತಿ ತುಂಬುವ ಕೆಲಸ ಕಾಂಗ್ರೆಸ್ನಿಂದ ಮಾತ್ರ ಸಾಧ್ಯವೇ ಹೊರತು ಬಿಜೆಪಿಗಿಲ್ಲ ಎಂದು ಗುಡುಗಿದರು.
ನಮ್ಮ ಎದುರಾಳಿ ಬಿಜೆಪಿ, ಜೆಡಿಎಸ್:
ಸಿದ್ದರಾಮಯ್ಯ ಅವರು ಮುಂದುವರೆದು ಮಾತನಾಡಿ, ನಮ್ಮ ಎದುರಾಳಿ ಬಿಜೆಪಿ ಮತ್ತು ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡಿದ್ದು, ನಮ್ಮ ವಿರುದ್ಧ ಸ್ಪರ್ಧಿಸಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಾವು 136 ಸ್ಥಾನಗಳನ್ನು ಗೆದ್ದೆವು. ಅಧಿಕಾರದಲ್ಲಿದ್ದ ಬಿಜೆಪಿ ಕೇವಲ 66 ಸ್ಥಾನಗಳನ್ನು ಗೆದ್ದಿತು. ಜೆಡಿಎಸ್ 19 ಸ್ಥಾನಗಳನ್ನು ಗೆದ್ದರು. ಈ ನಡುವೆ ಇವರಿಬ್ಬರಿಗೂ ಈ ಚುನಾವಣೆಯಲ್ಲಿ ಭಯ ಬಂದಿದೆ. ಸೋಲುತ್ತೇವೆ ಎಂದು ಒಟ್ಟುಗೂಡಿ ಲೋಕ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. ಇವರಿಗೆ ಯಾವುದೇ ಸಿದ್ಧಾಂತವೂ ಇಲ್ಲ. ಕಾರ್ಯಕ್ರಮ ಇಲ್ಲ. ಕಾಂಗ್ರೆಸ್ ಸೋಲಿಸಬೇಕೆಂಬ ಒಂದೇ ಒಂದು ಗುರಿ ಅವರದು ಎಂದು ಟೀಕಿಸಿದರು.
ಕಾಂಗ್ರೆಸ್ ನೀಡುವ 1 ಲಕ್ಷ ಬೇಕೋ ಬೇಡಾ?
ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಹಾಲಕ್ಷ್ಮಿ ಯೋಜನೆಯಡಿ ಮಹಿಳೆಯರಿಗೆ 1 ವರ್ಷಕ್ಕೆ ಒಂದು ಲಕ್ಷ ರೂ. ನೀಡುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ನಾವು ರಾಜ್ಯದಿಂದ ಗೃಹಲಕ್ಷ್ಮೀ ಯೋಜನೆಯಡಿ 24 ಸಾವಿರ ರೂ. ಕೊಟ್ಟರೆ, ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರದವರು 1 ಲಕ್ಷ ರೂ. ಕೊಡುತ್ತಾರೆ. ನಾವು ತಮಾಷೆಗೆ ಹೇಳುವುದಲ್ಲ. ಏನು ಹೇಳುತ್ತೀವೇಯೋ ಅದನ್ನು ಮಾಡುತ್ತೀವಿ. ನುಡಿದಂತೆ ನಡೆಯುತ್ತೇವೆ. ನಾವು ಬಸವಣ್ಣ, ಶರಣರ ಮಾತಲ್ಲಿ ನಂಬಿಕೆ ಇರುವವರು. ಬಸವಣ್ಣ ಸಾಂಸ್ಕೃತಿಕ ನಾಯಕರು ಎಂದು ಘೋಷಿಸಿದ್ದೇವೆ. ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನವರ ಭಾವಚಿತ್ರ ಹಾಕಿದ್ದೇವೆ. ಇದನ್ನು ಸಿಂಎ ಆಗಿದ್ದಾಗ ಯಡಿಯೂರಪ್ಪ ಮಾಡಲಿಲ್ಲ ಎಂದು ಕುಟುಕಿದರು.
*ಬಾಕ್ಸ್)
ಹಿಂದು ವಿರೋಧಿ ಎಂಬ ಸುಳ್ಳು ಸುದ್ದಿ ಪ್ರಸಾರ:
ಬಡವರಿಗೆ ಅನೇಕ ಯೋಜನೆ ಕೊಡ್ತಾ ಇದಾರಲ್ಲ ಅಂತ ಬಿಜೆಪಿಯವರಿಗೆ ಹೊಟ್ಟೆ ಉರಿ ಎಂದು ಸಿಎಂ ಸಿದ್ದರಾಮಯ್ಯ ಆರೋಪಿಸಿದರು. ಹೀಗಾಗಿ ಸಿದ್ದರಾಮಯ್ಯ ಹಿಂದು ವಿರೋಧಿ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಹಿಂದುಗಳ ವೋಟೇ ಬೇಡ ಎಂದು ಹೇಳಿದೆ ಅಂತ ಸುಳ್ಳು ಪ್ರಚಾರ ಮಾಡುತ್ತಿದ್ದಾರೆ. ಹೀಗೆ ಸುಳ್ಳು ಸುದ್ದಿ ಸೃಷ್ಟಿಸಿ ಪ್ರಸಾರ ಮಾಡಿದವರನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಿ ಎಂದು ಹೇಳಿದ್ದೇನೆ ಎಂದು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದರು.
ಇವರ್ಯಾರಿಗೂ ಮುಖವೇ ಇಲ್ಲ, ಮೋದಿಗೆ ವೋಟು ಕೇಳುತ್ತಿದ್ದಾರೆ!
ಬಿಜೆಪಿಯವರು ಬಡವರಿಗೆ, ಹಿಂದುಳಿದವರಿಗೆ, ಮಹಿಳೆಯರಿಗೆ, ಅಲ್ಪಸಂಖ್ಯಾತರಿಗೆ ಇಂಥ ಕೆಲಸ ಮಾಡಿದ್ದೇವೆ ಎಂದು ಹೇಳಿ ವೋಟ್ ಕೇಳುತ್ತಿಲ್ಲ. ಬದಲಿಗೆ, ಮೋದಿಗೆ ವೋಟು ಕೊಡಿ, ಮೋದಿಗೆ ವೋಟು ಕೊಡಿ ಎನ್ನುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಲೇವಡಿ ಮಾಡಿದರು. ಇವರ್ಯಾರಿಗೂ ಮುಖ ಇಲ್ಲ. ವೋಟು ಕೇಳುವ ನೈತಿಕತೆ ಇಲ್ಲ. ಮೋದಿ ಬಿಟ್ಟು ಬೇರೆ ಚುನಾವಣಾ ವಸ್ತುವೇ ಇಲ್ಲ ಎಂದರು.
ಬಾಲರಾಜು ಕಾಂಗ್ರೆಸ್ ಸೇರ್ಪಡೆ:
ಚುನಾವಣಾ ಪ್ರಚಾರ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರ ಉಪಸ್ಥಿತಿಯಲ್ಲಿ ಶಾಸಕ ಎ.ಆರ್. ಕೃಷ್ಣಮೂರ್ತಿ ಅವರ ಸೋದರ ಜಿ.ಪಂ.ಮಾಜಿ ಸದಸ್ಯ ಆರ್.ಬಾಲರಾಜು ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷವನ್ನು ಸೇರಿದರು. ಇವರಲ್ಲದೇ ಅನೇಕ ಮುಖಂಡರು ವಿವಿಧ ಪಕ್ಷಗಳನ್ನು ತೊರೆದು ಕಾಂಗ್ರೆಸ್ಗೆ ಸೇರ್ಪಡೆಗೊಂಡು ಸಭಿಕರ ಗಮನ ಸೆಳೆದರು. ಜಿಪಂ ಮಾಜಿ ಸದಸ್ಯ ಎಲ್.ನಾಗರಾಜು, ಮುಳ್ಳೂರು ಶಿವಮಲ್ಲು, ಬಾಗಳಿ ರೇವಣ್ಣ, ವಕೀಲ ಚಿನ್ನಸ್ವಾಮಿ, ಕಿನಕಹಳ್ಳಿ ರಾಚಯ್ಯ, ಯಳಂದೂರಿನ ಪುಟ್ಟಸುಬ್ಬಪ್ಪ, ನಟೇಶ್, ನಿವೃತ್ತ ತಹಸೀಲ್ದಾರ್ ಸಿ.ಮಹದೇವಯ್ಯ, ಶಂಭಪ್ಪ, ಡಾ.ರಾಜು, ಯರಿಯೂರು ಶಾಂತರಾಜು, ನಿವೃತ್ತ ಬಿಇಒ ಸೋಮಣ್ಣೇಗೌಡ, ಶಿವರಾಜು ಸೇರಿದಂತೆ ಹಲವರು ಬಿಜೆಪಿ, ಬಿಎಸ್ಪಿ, ಜೆಡಿಎಸ್ ಪಕ್ಷ ತೊರೆದು ಕಾಂಗ್ರೆಸ್ ಪಕ್ಷ ಸೇರಿದರು.
ದೇಶದ ಆಡಳಿತವನ್ನು ಬದಲಾಯಿಸಬೇಕು:
ಸಭೆಯಲ್ಲಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೋಳಿ ಮಾತನಾಡಿ, ಈ ಬಾರಿಯ ಲೋಕ ಚುನಾವಣೆಯಲ್ಲಿ ದೇಶದ ಹಿತದೃಷ್ಟಿಯಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು. ಈ ನಿಟ್ಟಿನಲ್ಲಿ ದೇಶದ ಬಿಜೆಪಿ ಆಡಳಿತವನ್ನು ಬದಲಾಯಿಸಬೇಕು. ನಮ್ಮ ಸರ್ಕಾರ ದೇಶದ ಪರ, ರೈತರ ಪರ, ಜನಪರ ಆಡಳಿತ ನೀಡುತ್ತಿದೆ. ಸಿದ್ದರಾಮಯ್ಯ ನೇತೃತ್ವದಲ್ಲಿ ಎರಡನೇ ಬಾರಿಗೆ ರಾಜ್ಯದಲ್ಲಿ ಆಡಳಿತ ನೀಡುತ್ತಿದ್ದೇವೆ. ರಾಜ್ಯದಲ್ಲಿ ಐದು ಯೋಜನೆಗಳನ್ನು ಯಶಸ್ವಿಯಾಗಿ ಜನರಿಗೆ ತಲುಪುವಂತೆ ಮಾಡಿದ್ದೇವೆ. ಹನೂರು ಭಾಗದಲ್ಲಿ ಅತ್ಯುತ್ತಮ ರಸ್ತೆ ನಿರ್ಮಾಣ ಮಾಡಿದ್ದೇವೆ. ಮುಂದೆಯೂ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ನಮ್ಮ ಸರ್ಕಾರ ಮಾಡುತ್ತದೆ. ಹೀಗಾಗಿ ಈ ಬಾರಿಯ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಬೇಕೆಂದು ಮನವಿ ಮಾಡಿದರು.
ಚುನಾವಣಾ ವೆಚ್ಚದ ಭೀತಿ: ಪ್ರಚಾರ ಸಭೆಯಲ್ಲಿ ಅಭ್ಯರ್ಥಿ ಬೋಸ್ ಗೈರು, ಭಾವಚಿತ್ರವೂ ನಾಪತ್ತೆ!
ಕೊಳ್ಳೇಗಾಲದಲ್ಲಿ ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ 12 ಸಾವಿರಕ್ಕೂ ಹೆಚ್ಚು ಕೈ ಕಾರ್ಯಕರ್ತರು ಭಾಗಿಯಾಗಿದ್ದು, ಚುನಾವಣಾ ವೆಚ್ಚದ ಭೀತಿ ಹಿನ್ನೆಲೆ ಕಾಂಗ್ರೆಸ್ ಅಭ್ಯರ್ಥಿ ಸುನಿಲ್ ಬೋಸ್ ಗೈರಾಗಿದ ಪ್ರಸಂಗ ಕಂಡು ಬಂದಿತು. ವೇದಿಕೆಯಲ್ಲಿ ಅಳವಡಿಸಿರುವ ಫ್ಲೆಕ್ಸ್ ನಲ್ಲೂ ಅಭ್ಯರ್ಥಿ ಫೋಟೋ ಬಳಸದೆ ಪ್ರಚಾರ ಸಭೆ ನಡೆಸುತ್ತಿದ್ದು, ಚುನಾವಣಾ ಪ್ರಚಾರ ಸಭೆಯ ಖರ್ಚು ವೆಚ್ಚ ಅಭ್ಯರ್ಥಿಗೆ ತಗಲದಂತೆ ತಂತ್ರ ಮಾಡಲಾಗಿತ್ತು.
ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ, ಕೆಪಿಸಿಸಿ ಕಾರ್ಯಾಧ್ಯಕ್ಷ ತನ್ವೀರ್ ಸೇಠ್, ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್, ಶಾಸಕರಾದ ಎ.ಆರ್.ಕೃಷ್ಣಮೂರ್ತಿ, ಸಿ.ಪುಟ್ಟರಂಗಶೆಟ್ಟಿ, ಎಚ್.ಎಂ.ಗಣೇಶಪ್ರಸಾದ್, ಮರಿತಿಬ್ಬೇಗೌಡ, ಮಾಜಿ ಸಚಿವರಾದ ಬಿ.ಸೋಮಶೇಖರ್, ಕೋಟೆ ಶಿವಣ್ಣ, ಮಾಜಿ ಶಾಸಕರಾದ ಜಿ.ಎನ್.ನಂಜುಂಡಸ್ವಾಮಿ, ಆರ್.ನರೇಂದ್ರ, ಧರ್ಮಸೇನ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪಿ.ಮರಿಸ್ವಾಮಿ, ಕೊಳ್ಳೇಗಾಲ ಬ್ಲಾಕ್ ಅಧ್ಯಕ್ಷ ತೋಟೇಶ್, ಹನೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುಕುಂದ ವರ್ಮ ಸೇರಿ ಇತರರು ಇದ್ದರು.
12ಕೆಜಿಎಲ್-2
ಫೋಟೋ ಶೀರ್ಷಿಕೆ:
ಕೊಳ್ಳೇಗಾಲ ಪಟ್ಟಣದ ಎಂಜಿಎಸ್ವಿ ಸರ್ಕಾರಿ ಕಾಲೇಜು ಮೈದಾನದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಚಾಮರಾಜನಗರ ಲೋಕಸಭಾ ಕ್ಷೇತ್ರದ ಚುನಾವಣಾ ಪ್ರಚಾರ ಸಭೆಯನ್ನು ಸಿಎಂ ಸಿದ್ದರಾಮಯ್ಯ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.