ಬೆಳಗಾವಿ, ನವೆಂಬರ್ 4, 2025 : ಕಾಂಗ್ರೆಸ್ ನಲ್ಲಿ ನವೆಂಬರ್ ಕ್ರಾಂತಿ ಚರ್ಚೆ ಜೋರಾಗಿದ್ದು, ಸಿಎಂ ಬದಲಾವಣೆ ಗುಸು ಗುಸು ಆರಂಭವಾಗಿದೆ. ಈ ಮಧ್ಯೆ ಸಚಿವ ಸತೀಶ್ ಜಾರಕಿಹೊಳಿ ಈ ಬಗ್ಗೆ ಮಾತನಾಡಿದ್ದು, ಸದ್ಯ ನಾನು ದೆಹಲಿಗೆ ಹೋಗುವುದಿಲ್ಲ ಇಲ್ಲೇ ಇರುತ್ತೇನೆ. ಅವಶ್ಯಕತೆ ಬಂದಾಗ ದೆಹಲಿಗೆ ಹೋಗುತ್ತೇನೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ.
ಹುಕ್ಕೇರಿಯಲ್ಲಿ ಮಾಧ್ಯಮಗಳ ಜತೆ ಮಾತಾಡಿದ ಅವರು, ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಇನ್ನೂ ಚರ್ಚೆ ಆಗಿಲ್ಲ, ಚರ್ಚೆ ನಡೆದಾಗ ನೋಡೋಣ. ಸಂಪುಟ ವಿಸ್ತರಣೆ ಬಗ್ಗೆ ನನಗೆ ಮಾಹಿತಿ ಇಲ್ಲ. ಡಿಕೆ ಶಿವಕುಮಾರ್ ಮತ್ತು ಮಲ್ಲಿಕಾರ್ಜುನ ಖರ್ಗೆ ಭೇಟಿ ಬಗ್ಗೆಯೂ ಮಾಹಿತಿಯಿಲ್ಲ ಎಂದು ಹೇಳಿದ್ದಾರೆ.
ಕಾಂಗ್ರೆಸ್ ನಲ್ಲಿ ಎಲ್ಲವೂ ಹೈಕಮಾಂಡ್ ನಿರ್ದೇಶನದಂತೆ ನಡೆಯುತ್ತೆ. ಅಂತಿಮವಾಗಿ ದಿಲ್ಲಿ ಮಟ್ಟದ ನಾಯಕರು ಯಾವ ನಿರ್ಧಾರ ಕೈಗೊಳ್ಳುತ್ತಾರೆ ಅದೇ ಅಂತಿಮ ಎಂದು ಸತೀಶ್ ಜಾರಕಿಹೊಳಿ ಹೇಳಿದರು.
ಇನ್ನು, ಕಬ್ಬಿನ ಬೆಲೆ ನಿಗದಿಗೆ 5ನೇ ದಿನಕ್ಕೆ ರೈತರ ಅಹೋರಾತ್ರಿ ಧರಣಿ ಕಾಲಿಟ್ಟಿರುವ ಕುರಿತು ಸತೀಶ್ ಜಾರಕಿಹೊಳಿ ಮಾತಾಡಿದರು. ಕಾರ್ಖಾನೆ ಪರವಾಗಿ ಡಿಸಿ ಜೊತೆ ಮಾತನಾಡಲು ಸೂಚನೆ ನೀಡಿದ್ದೇನೆ. ಜಿಲ್ಲಾಧಿಕಾರಿಗಳು ಚರ್ಚೆ ನಡೆಸುತ್ತಿದ್ದು ಇನ್ನೂ ಅಂತಿಮವಾಗಿಲ್ಲ. ಬೇಗ ನಿರ್ಣಯ ಮಾಡುವಂತೆ ಸೂಚನೆ ನೀಡಿದ್ದೇನೆ. ಸರಕಾರದ ಗಮನ ಸೆಳೆಯಲು ಹೋರಾಟ ನಡೆಯುತ್ತಿದೆ. ಸರಕಾರದ ಇದೆ ಮುಂದೆ ನೋಡೋಣ ಎಂದು ಸತೀಶ್ ಜಾರಕಿಹೊಳಿ ತಿಳಿಸಿದರು.
