ಪ್ರತಿನಿಧಿ ವರದಿ ಹುಣಸೂರು
ನಗರದ ಡಿವೈಎಸ್ಪಿ ಕಚೇರಿಯಲ್ಲಿ ಶನಿವಾರ ಆಯೋಜನೆಗೊಂಡಿದ್ದ ಉಪವಿಭಾಗ ಮಟ್ಟದ ಎಸ್ಸಿ ಎಸ್ಟಿ ಕುಂದುಕೊರತೆ ಸಭೆಯಲ್ಲಿ ದಲಿತ ಮುಖಂಡರು ಸಮಸ್ಯೆಗಳ ಸರಮಾಲೆಯನ್ನು ಬಿಚ್ಚಿಟ್ಟರು.
ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ನಿಂಗರಾಜ ಮಲ್ಲಾಡಿ ಮಾತನಾಡಿ, ರಾಷ್ಟ್ರ ನಾಯಕರ ಫ್ಲೆಕ್ಸ್ಗಳನ್ನು ಎಲ್ಲೆಂದರಲ್ಲಿ ಬೀದಿ, ಸರ್ಕಲ್ಗಳಲ್ಲಿ ಅಳವಡಿಸುತ್ತಿದ್ದು ಈ ರಾಷ್ಟ್ರ ನಾಯಕರ ಫ್ಲೆಕ್ಸಗಳಿಗೆ ಕೆಲವು ಕಿಡಿಗೇಡಿಗಳು ಹರಿದು ಹಾಕುವುದು, ಬೆಂಕಿ ಹಚ್ಚುವುದು, ಸಗಣಿ ಎರಚುವುದು ಮುಂತಾದ ಕೃತ್ಯಗಳನ್ನು ಮಾಡುತ್ತಾ ಜಾತಿ ಜಾತಿಗಳ ನಡುವೆ ಗಲಾಟೆಗಳಾಲು ಕಾರಣರಾಗುತ್ತಿದ್ದಾರೆ.
ಫ್ಲೆಕ್ಸ್ ಗಳಿಗೆ ಹಾನಿ ಮಾಡಿದ ಕಿಡಿಗೇಡಿಗಳನ್ನು ಪತ್ತೆ ಮಾಡುವುದು ಪೋಲೀಸ್ ಅಧಿಕಾರಿಗಳಿಗೆ ದೊಡ್ಡ ಸವಾಲಾಗುತ್ತದೆ. ಇನ್ನೊಂದೆಡೆ ಕಿಡಿಗೇಡಿಗಳನ್ನು ಪೋಲೀಸ್ ಇಲಾಖೆ ಪತ್ತೆ ಮಾಡದೆ ಇದ್ದಾಗ ದಲಿತರು ಪೋಲೀಸ್ ಅಧಿಕಾರಿಗಳ ಮೇಲೆ ಆರೋಪ ಮಾಡುವ ಸ್ಥಿತಿ ನಿರ್ಮಾಣವಾಗುತ್ತದೆ. ಒಂದು ಕಡೆ ಜಾತಿಗಳ ನಡುವೆ ಅಶಾಂತಿ ಉಂಟಾದರೆ ಮತ್ತೊಂದೆಡೆ ದಲಿತರು ಮತ್ತು ಪೋಲೀಸ್ ಇಲಾಖೆಗಳ ನಡುವೆ ಅಪನಂಬಿಕೆ ಉಂಟಾಗಿ ನಂಬಿಕೆ ಕಳೆದು ಕೊಳ್ಳುವ ಪರಿಸ್ಥಿತಿ ಉಂಟಾಗುತ್ತದೆ.
ಪೊಲೀಸ್ ಇಲಾಖೆ ಇಂತಹ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಯಾವುದೇ ವ್ಯಕ್ತಿ ರಾಷ್ಟ್ರ ನಾಯಕರ ಫ್ಲೆಕ್ಸ್ ಗಳನ್ನು ಹಾಕುವಾಗ ಸ್ಥಳೀಯ ಪೋಲೀಸ್ ಇಲಾಖೆ, ಗ್ರಾಮ ಪಂಚಾಯಿತಿ, ಪುರಸಭೆ, ನಗರಸಭೆಗಳಲ್ಲಿ ಕಡ್ಡಾಯವಾಗಿ ಅನುಮತಿ ಪಡೆದು ಕಾಲಮಿತಿಯಲ್ಲಿ ಹಾಕಿ ಆತನೇ ತೆರವುಗೊಳಿಸಬೇಕು. ಹೀಗೆ ಮಾಡಿದರೆ ಸಮಾಜದಲ್ಲಿ ಜಾತಿಗಳ ನಡುವೆ, ಧರ್ಮಗಳ ನಡುವೆ ಗಲಾಟೆಯಾಗುವುದು ತಪ್ಪಿಸಬಹುದು ಎಂದು ಸಲಹೆ ನೀಡಿದರು.
ಎಚ್.ಡಿ. ಕೋಟೆ ತಾಲೂಕಿನ ದಲಿತ ಮುಖಂಡ ನರಸಿಂಹಮೂರ್ತಿ, ಜಿವಿಕ ಸಂಸ್ಥೆಯ ಬಸವರಾಜು ಮುಂತಾದವರು ಅಕ್ರಮ ಮದ್ಯ ಮಾರಾಟದ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿ, ದಲಿತರ ಕೇರಿಗಳಲ್ಲಿ ಎಗ್ಗಿಲ್ಲದೆ ಅಕ್ರಮ ಸಾರಾಯಿ ಮಾರಾಟವಾಗುತ್ತಿದೆ. ಈ ಸಮಸ್ಯೆಯನ್ನು ಅಬಕಾರಿ ಇಲಾಖೆ ತಡೆಗಟ್ಟುವಲ್ಲಿ ವಿಫಲವಾಗಿದೆ ಸಭೆಯ ಗಮನಕ್ಕೆ ತಂದರು.
ಪಿರಿಯಾಪಟ್ಟಣ ತಾಲೂಕಿನ ಹಿರಿಯ ಮುಖಂಡ ತಮ್ಮಣ್ಣಯ್ಯ ಮಾತನಾಡಿ, ದಲಿತರಾಗಲೀ, ಸವರ್ಣಿಯರಾಗಲೀ ಸುಳ್ಳು ದೂರುಗಳನ್ನು ಕೊಡುವುದನ್ನು ಪೋಲೀಸ್ ಇಲಾಖೆ ಅಂತಹ ಸುಳ್ಳು ದೂರುಗಳನ್ನು ವಜಾಗೊಳಿಸಬೇಕು. ಇಲ್ಲದಿದ್ದರೆ ಸಮಾಜದ ಸ್ವಾರಸ್ಯ ಹಾಳಾಗುತ್ತದೆ ಎಂದು ಮನವಿ ಮಾಡಿದರು.
ಬಿಳಿಕೆರೆ ಗ್ರಾಮದ ದೇವರಾಜು ಮಾತನಾಡಿ, ಪೋಲೀಸ್ ಠಾಣೆಯಲ್ಲಿ ಕೆಲವು ಭ್ರಷ್ಟ ಪೋಲೀಸ್ ಅಧಿಕಾರಿಗಳು ರಕ್ಷಣೆ ಕೇಳಿ ಬರುವ ದಲಿತರಿಂದಲೇ ಹಣ ಕೀಳುವ ಪ್ರವೃತ್ತಿ ಬೆಳೆಸಿಕೊಂಡಿದ್ದಾರೆ. ಮತ್ತು ಕೆಲವು ಪೋಲೀಸ್ ಅಧಿಕಾರಿಗಳು ವೃತ್ತಿಪರ ದಲ್ಲಾಳಿಗಳನ್ನು ಇಟ್ಟುಕೊಂಡಿದ್ದಾರೆ. ಇದರಿಂದ ಪೋಲೀಸ್ ಇಲಾಖೆಗೆ ಕೆಟ್ಟ ಹೆಸರು ಬರುತ್ತಿದೆ. ಕೂಡಲೇ ಇದನ್ನು ಪರಿಶೀಲಿಸಬೇಕು ಎಂದು ಆಗ್ರಹಿಸಿದರು.
ಹುಣಸೂರು ಉಪವಿಭಾಗದ ಪೋಲೀಸ್ ಉಪ ಅಧೀಕ್ಷಕ ಗೋಪಾಲಕೃಷ್ಣ, ಮುಂದೆ ಲೋಕಸಭಾ ಚುನಾವಣೆ ನಡೆಯಲಿದ್ದು, ಫ್ಲೆಕ್ಸ್ ಸಂಬಂಧ ನಿಂಗರಾಜ ಮಲ್ಲಾಡಿ ನೀಡಿದ ಸಲಹೆಯನ್ನು ಗಂಭೀರವಾಗಿ ಪರಿಗಣಿಸಿ ಜಾರಿಗೊಳಿಸಲಾಗುವುದು, ನೊಂದ ದಲಿತರಿಗೆ ಪೋಲೀಸ್ ಇಲಾಖೆ ಕಾನೂನು ಮತ್ತು ಮಾನವೀಯ ನೆಲೆಗಟ್ಟಿನಲ್ಲಿ ಕೆಲಸ ಮಾಡಬೇಕಿದೆ. ದಲಿತರು ಯಾವುದೇ ಕೆಲವು ರಾಜಕೀಯ ವ್ಯಕ್ತಿಗಳ ಸ್ವಾರ್ಥಕ್ಕೆ ಒಳಗಾಗದೆ ಸತ್ಯಾಸತ್ಯತೆಯನ್ನು ತಿಳಿದು ಸಮಾಜದ ಸ್ವಾರಸ್ಯವನ್ನು ಕಾಪಾಡುವ ಜವಾಬ್ದಾರಿ ಪೋಲೀಸರಿಗೆ ಎಷ್ಟಿದೆಯೋ ಅಷ್ಟೇ ನಿಮ್ಮಗಳ ಮೇಲೆಯೂ ಇದೆ ಎಂದರು.
ಗ್ರಾಮಾಂತರ ಪೋಲೀಸ್ ಠಾಣೆ ಇನ್ಸ್ಪೆಕ್ಟರ್ ಚಿಕ್ಕರಾಜಶೆಟ್ಟಿ, ನಗರ ಠಾಣೆಯ ಪಿಎಸ್ಐ ತಾಜ್ ಉದ್ದೀನ್ ಬಿಳಿಕೆರೆ ಠಾಣೆ ಇನ್ಸ್ಪೆಕ್ಟರ್ ಲೋಲಾಕ್ಷಿ, ಪಿರಿಯಾಪಟ್ಟಣ ಇನ್ಸ್ಪೆಕ್ಟರ್ ರಾಘವೇಂದ್ರ, ಬೆಟ್ಟದಪುರ ಪೋಲೀಸ್ ಠಾಣೆಯ ಪಿಎಸ್ಐ ಪ್ರಕಾಶ್ ಎತ್ತಿನಮನಿ, ದಲಿತ ಮುಖಂಡರಾದ ದೊಡ್ಡಹೆಜ್ಜೂರು ನಾಗೇಶ, ಪಿ.ಪುಟ್ಟರಾಜು, ಸಿದ್ದೇಶ, ಕೊಳಗಟ್ಟ ಕೃಷ್ಣ, ಪಿರಿಯಾಪಟ್ಟಣದ ತಮ್ಮಣ್ಣಯ್ಯ, ಚಾಮರಾಜಕೋಟೆ ಜಗದೀಶ, ಗಿರೀಶ ಮತ್ತು ಪೊಲೀಸ್ ಸಿಬ್ಬಂದಿ ಹಾಜರಿದ್ದರು.
೧೬ಊUಓ೧: ಹುಣಸೂರು ನಗರದ ಡಿವೈಎಸ್ಪಿ ಕಚೇರಿಯಲಿ ಆಯೋಜಿಸಿದ್ದ ಎಸ್ಸಿ ಎಸ್ಟಿ ಕುಂದುಕೊರತೆ ಸಭೆಯಲ್ಲಿ ಡಿವೈಎಸ್ಪಿ ಗೋಪಾಲಕೃಷ್ಣ ಮಾತನಾಡಿದರು. ಮುಖಂಡರಾದ ನಿಂಗರಾಜ ಮಲ್ಲಾಡಿ, ಕೊಳಗಟ್ಟ ಕೃಷ್ಣ, ಮಯೂರ, ಸಿದ್ದೇಶ್, ಪಿ.ಪುಟ್ಟರಾಜು, ತಮ್ಮಣ್ಣಯ್ಯ, ಜಗದೀಶ್ ಇತರರಿದ್ದಾರೆ.