ಪ್ರತಿನಿಧಿ ವರದಿ ಹಾಸನ
ಬೆಲೆ ಬಾಳುವ ಮರಗಳನ್ನು ಅಕ್ರಮ ಹನನ ಮಾಡಲು ನೆರವಾಗಿದ್ದಲ್ಲದೇ, ಪ್ರಕರಣದ ದಿಕ್ಕು ತಪ್ಪಿಸಿದ ಆರೋಪದಡಿ ಡಿಆರ್ಎಫ್ಒ ಕೆ.ಎನ್.ರಘು ಅವರನ್ನು ಅಮಾನತ್ತುಗೊಳಿಸಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಆರ್.ರವಿಶಂಕರ್ ಆದೇಶ ಹೊರಡಿಸಿದ್ದಾರೆ.
ಅರಕಲಗೂಡು ತಾಲ್ಲೂಕಿನ ಪ್ರಾದೇಶಿಕ ವಲಯದ ಮಲ್ಲಿಪಟ್ಟಣದ ಶಾಖಾ ಕಚೇರಿಯಲ್ಲಿ ಉಪವಲಯ ಅರಣ್ಯಾಧಿಕಾರಿಯಾಗಿರುವ ರಘು ಅಕ್ರಮವಾಗಿ ಮರಗಳನ್ನು ಕಡಿಯುವ ವ್ಯಕ್ತಿಗಳೊಂದಿಗೆ ಶಾಮೀಲಾಗಿ ಅಧಿಕಾರಿಗಳ ದಿಕ್ಕು ತಪ್ಪಿಸುವ ಪ್ರಯತ್ನವನ್ನೂ ಮಾಡಿದ್ದಾರೆ ಎಂಬುದು ಮೇಲ್ನೋಟಕ್ಕೆ ಬೆಳಕಿಗೆ ಬಂದಿರುವ ಹಿನ್ನೆಲೆ ಅವರನ್ನು ಅಮಾನತ್ತು ಮಾಡಲಾಗಿದೆ.
ಅರಣ್ಯಾಧಿಕಾರಿ ರಘು ವಾಸವಿರುವ ಮನೆಯಿಂದ ಒಂದು ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಬೆಳೆದಿದ್ದ ಬೆಲೆ ಬಾಳುವ ಹೊನ್ನೆ, ನಂದಿ, ತೇಗದ ಮರಗಳನ್ನು ಅಕ್ರಮವಾಗಿ ಕಡಿಯಲಾಗಿತ್ತು. ಈ ಬಗ್ಗೆ ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು ಆರೋಪಿತ ರಘು ಅವರನ್ನು ವಿಚಾರಣೆ ಮಾಡುವ ಸಂದರ್ಭ, ಅಕ್ರಮವಾಗಿ ಮರಗಳನ್ನು ಕಡಿದಿಲ್ಲ ಎಂದು ವಾದಿಸಿ ಪ್ರಕರಣದ ದಿಕ್ಕು ತಪ್ಪಿಸುವ ಪ್ರಯತ್ನ ಮಾಡಿದ್ದರು. ಈ ಅನುಮಾನಗೊಂಡು ಬೇರೆ ಶಾಖೆಯ ಸಿಬ್ಬಂದಿಗಳಿಂದ ತನಿಖೆ ನಡೆಸಿದಾಗ ಅಕ್ರಮ ಮರ ಕಡಿಯುವಲ್ಲಿ ರಘು ಶಾಮೀಲಾಗಿರುವುದು ಕಂಡು ಬಂದಿದೆ ಎನ್ನಲಾಗಿದೆ.