ತಾಂಡವಪುರ, ಮಾರ್ಚ್ 31, 2026 : ದಕ್ಷಿಣ ಕಾಶಿ ಎಂದೇ ಪ್ರಸಿದ್ಧಿಯಾದ ನಂಜನಗೂಡಿನ ಶ್ರೀ ನಂಜುಂಡೇಶ್ವರ ಸ್ವಾಮಿಯ ಪಂಚ ಮಹಾರಥೋತ್ಸವ ಹಾಗೂ ದೊಡ್ಡ ಜಾತ್ರೆಯ ಅಂಗವಾಗಿ, ತಾಂಡವಪುರ ಗ್ರಾಮದಲ್ಲಿ ಭಕ್ತಾದಿಗಳಿಗೆ ಮಜ್ಜಿಗೆ ಮತ್ತು ಪಾನಕ ವಿತರಿಸುವ ಮೂಲಕ ಲೋಕ ಕಲ್ಯಾಣಾರ್ಥವಾಗಿ ಸೇವೆ ಸಲ್ಲಿಸಲಾಯಿತು.
ನಂಜನಗೂಡು ತಾಲೂಕು ವರುಣ ವಿಧಾನಸಭಾ ಕ್ಷೇತ್ರಕ್ಕೆ ಒಳಪಡುವ ತಾಂಡವಪುರ ಗ್ರಾಮದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಬಿ.ಎಂ. ರಾಮು ಅವರ ಮಾರ್ಗದರ್ಶನದಲ್ಲಿ ಹಾಗೂ ಅವರ ಪುತ್ರ, ಕಾಂಗ್ರೆಸ್ ಯುವ ಮುಖಂಡ ಬಿ.ಆರ್. ರಾಕೇಶ್ ಅವರ ನೇತೃತ್ವದಲ್ಲಿ ಈ ಧಾರ್ಮಿಕ ಸೇವಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಮೈಸೂರು-ನಂಜನಗೂಡು-ಊಟಿ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿರುವ ಬಿ.ಎಂ. ರಾಮು ಅವರ ನಿವಾಸದ ಬಳಿ ಆಯೋಜನೆಗೊಂಡಿದ್ದ ಈ ಕಾರ್ಯಕ್ರಮದಲ್ಲಿ, ರಥೋತ್ಸವಕ್ಕೆ ತೆರಳುತ್ತಿದ್ದ ಹಾಗೂ ಜಾತ್ರೆ ಮುಗಿಸಿ ಹಿಂತಿರುಗುತ್ತಿದ್ದ ಸಾವಿರಾರು ಭಕ್ತಾದಿಗಳು ಭಾಗವಹಿಸಿದ್ದರು. ಮಾರ್ಚ್ 30ರ ಸುಡು ಬಿಸಿಲಿನ ತಾಪಕ್ಕೆ ಹೈರಾಣಾಗಿದ್ದ ಪ್ರಯಾಣಿಕರು ಮತ್ತು ಭಕ್ತರು ತಂಪಾದ ಮಜ್ಜಿಗೆ ಹಾಗೂ ಪಾನಕವನ್ನು ಸೇವಿಸಿ ದಣಿವು ಆರಿಸಿಕೊಂಡರು. ಸಾರಿಗೆ ಬಸ್ಗಳಲ್ಲಿ ಪ್ರಯಾಣಿಸುತ್ತಿದ್ದ ಭಕ್ತರಿಗೂ ಸಹ ಮುಖಂಡರು ವಾಹನಗಳ ಬಳಿಯೇ ತೆರಳಿ ಪಾನೀಯ ವಿತರಿಸಿ ದೇವರ ಕೃಪೆಗೆ ಪಾತ್ರರಾದರು.
ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು, ನಂಜುಂಡೇಶ್ವರನ ದೊಡ್ಡ ಜಾತ್ರೆಗೆ ಲಕ್ಷಾಂತರ ಭಕ್ತರು ಆಗಮಿಸುವುದರಿಂದ ಅವರಿಗೆ ದಾಹ ನೀಗಿಸುವ ಸಣ್ಣ ಪ್ರಯತ್ನ ಇದಾಗಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಬಿ.ಎಂ. ರಾಮು, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಎಂ. ಮಹದೇವ್, ಪಿ.ಎ.ಸಿ.ಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಬಿ.ಎಂ. ನಾಗರಾಜು ದಣಿ, ಕಾಂಗ್ರೆಸ್ ಯುವ ಮುಖಂಡ ಬಿ.ಆರ್. ರಾಕೇಶ್, ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ಟಿ. ಚಂದ್ರು, ಗ್ರಾಮ ಪಂಚಾಯಿತಿ ಸದಸ್ಯ ಪ್ರಭುಸ್ವಾಮಿ ಉಪಸ್ಥಿತರಿದ್ದರು.
ಅಲ್ಲದೆ, ಪಿ.ಎ.ಸಿ.ಸಿ ಬ್ಯಾಂಕ್ ಮಾಜಿ ನಿರ್ದೇಶಕ ಬಿ.ಬಿ. ಕುಮಾರ್, ಶಿವರಾಜು ಬಿ., ಪುಟ್ಟಸ್ವಾಮಿ, ಕಾರ್ಮಿಕ ಮುಖಂಡ ಶಂಕರ್, ಪುಟ್ಟರಾಜು, ರವಿ, ನಾರಾಯಣ, ವಿನಯ್ ಹಾಗೂ ವೀರಶೈವ ಮುಖಂಡ ಕುಮಾರ್ ಸೇರಿದಂತೆ ಗ್ರಾಮದ ಹಿರಿಯರು ಮತ್ತು ನೂರಾರು ಕಾರ್ಯಕರ್ತರು ಈ ಜನಸೇವೆಯಲ್ಲಿ ಕೈಜೋಡಿಸಿದ್ದರು.
