ಚಾಮರಾಜನಗರ: ಉಪ ಲೋಕಾಯುಕ್ತರಾದ ಫಣೀಂದ್ರ ಅವರು ಇಂದು ಬೆಳ್ಳಂಬೆಳಗ್ಗೆ ಚಾಮರಾಜನಗರ ನಗರದ ವಿವಿಧ ಸರ್ಕಾರಿ ಸಂಸ್ಥೆಗಳು ಮತ್ತು ಸಾರ್ವಜನಿಕ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ತಾಯಿ ಮತ್ತು ಮಕ್ಕಳ ಆಸ್ಪತ್ರೆ ಹಾಗೂ ಹಾಸ್ಟೆಲ್ಗಳಲ್ಲಿನ ಅವ್ಯವಸ್ಥೆ ಮತ್ತು ನಗರದ ಕಳಪೆ ಸ್ವಚ್ಛತೆಯ ಬಗ್ಗೆ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ತಾಯಿ-ಮಕ್ಕಳ ಆಸ್ಪತ್ರೆಗೆ ಭೇಟಿ: ವೈದ್ಯರ ವಿರುದ್ಧ ಅಸಮಾಧಾನ
ತಾಯಿ ಹಾಗೂ ಮಕ್ಕಳ ಆಸ್ಪತ್ರೆಗೆ ಭೇಟಿ ನೀಡಿದ ಉಪ ಲೋಕಾಯುಕ್ತರು, ವೈದ್ಯರ ಕಾರ್ಯವೈಖರಿ ಬಗ್ಗೆ ಕೆಲವು ಲೋಪಗಳನ್ನು ಗಮನಿಸಿದರು. ವೈದ್ಯರು ಸ್ಕ್ಯಾನಿಂಗ್ ಸೇರಿದಂತೆ ಕೆಲವು ಟ್ಯಾಬ್ಲೆಟ್ಗಳನ್ನು ಹೊರಗಿನಿಂದ ಬರೆದುಕೊಡುತ್ತಿದ್ದಾರೆ ಎಂದು ಉಪ ಲೋಕಾಯುಕ್ತ ಫಣೀಂದ್ರ ಹೇಳಿದ್ದಾರೆ. ಆಸ್ಪತ್ರೆಯಲ್ಲಿ ಬಿಸಿನೀರಿನ ಸೌಲಭ್ಯ ಇಲ್ಲದಿರುವುದು ಗಮನಕ್ಕೆ ಬಂದಿದೆ. ಆದಾಗ್ಯೂ, ವೈದ್ಯರು ಸಮಯಕ್ಕೆ ಸರಿಯಾಗಿ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವುದನ್ನು ಅವರು ಶ್ಲಾಘಿಸಿದರು. ಬೆಡ್, ಬೆಡ್ಶೀಟ್ಗಳನ್ನು ಸ್ವಚ್ಛವಾಗಿಡುವಂತೆ ಮತ್ತು ಇತರ ಎಲ್ಲ ಸಮಸ್ಯೆಗಳನ್ನು ಸರಿಪಡಿಸುವಂತೆ ವೈದ್ಯರಿಗೆ ಸೂಕ್ತ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದರು.
ಹಾಸ್ಟೆಲ್ಗಳಲ್ಲಿ ಅವ್ಯವಸ್ಥೆ
ನಿನ್ನೆಯಿಂದ ಮೂರು ಹಾಸ್ಟೆಲ್ಗಳಿಗೆ ಭೇಟಿ ನೀಡಿದ್ದು, ಅವುಗಳಲ್ಲಿ ಎರಡರಲ್ಲಿ ಭಾರಿ ಅವ್ಯವಸ್ಥೆ ಇರುವುದು ಕಂಡುಬಂದಿದೆ. ನಿನ್ನೆ ಮೂರು ಹಾಸ್ಟೆಲ್ಗಳಿಗೆ ಭೇಟಿ ಕೊಟ್ಟಿದ್ದೇನೆ. ಒಂದು ಹಾಸ್ಟೆಲ್ ಮಾತ್ರ ಸರಿಯಿತ್ತು. ಇನ್ನುಳಿದ ಎರಡು ಹಾಸ್ಟೆಲ್ಗಳಲ್ಲಿ ನೀರಿನ ಸೌಲಭ್ಯ, ಬೆಡ್, ಹೊದಿಕೆ ಸೇರಿದಂತೆ ಹಲವು ಸಮಸ್ಯೆಗಳಿವೆ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನಗಳನ್ನು ನೀಡಿದ್ದೇನೆ ಎಂದು ಫಣೀಂದ್ರ ಸ್ಪಷ್ಟಪಡಿಸಿದರು.
ನಗರದ ಕಸದ ಸಮಸ್ಯೆ: ಸಿಟಿ ಕ್ಲೀನ್ ಆಗಿಲ್ಲ
ಬೆಳಗ್ಗೆಯೇ ನಗರದ ಕಸ ಡಂಪಿಂಗ್ ಯಾರ್ಡ್ಗೆ ಭೇಟಿ ನೀಡಿದ ಉಪ ಲೋಕಾಯುಕ್ತರು, ಚಾಮರಾಜನಗರ ಸಿಟಿ ಕೂಡ ಸರಿಯಾಗಿ ಕ್ಲೀನ್ ಆಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ನಗರದ ರಸ್ತೆಯ ಪಕ್ಕದಲ್ಲೇ ಕಸದಿಂದ ಕೂಡಿದೆ. ಕಸದ ಬುಟ್ಟಿಗಳನ್ನು ಬಳಸುವ ಬಗ್ಗೆ ಜನರು ಕೂಡ ಜಾಗೃತರಾಗಬೇಕು ಎಂದು ಅವರು ಅಭಿಪ್ರಾಯಪಟ್ಟರು. ಕಸ ಹಾಕುವ ಬಗ್ಗೆ ಸಾರ್ವಜನಿಕರಿಗೂ ಜಾಗೃತಿ ಮೂಡಿಸುವ ಕೆಲಸ ಮಾಡಬೇಕಿದೆ ಎಂದು ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು. ಉಪ ಲೋಕಾಯುಕ್ತರ ಈ ದಿಢೀರ್ ಭೇಟಿ ಮತ್ತು ಕಟ್ಟುನಿಟ್ಟಿನ ಸೂಚನೆಗಳಿಂದಾಗಿ ನಗರದ ಆಡಳಿತ ವ್ಯವಸ್ಥೆಯಲ್ಲಿ ಸುಧಾರಣೆ ಕಂಡುಬರುವ ನಿರೀಕ್ಷೆಯಿದೆ.
