ಮೈಸೂರು, ಮಾರ್ಚ್ 25, 2026 : ರಾಜ್ಯದಲ್ಲಿ ಧರ್ಮಗುರುಗಳು ಮತ್ತು ಮಠಾಧಿಪತಿಗಳ ವಿರುದ್ಧ ಇತ್ತೀಚೆಗೆ ಕೇಳಿಬರುತ್ತಿರುವ ಅವಹೇಳನಕಾರಿ ಹೇಳಿಕೆಗಳನ್ನು ಖಂಡಿಸಿ, ಸೇವ್ ಹಿಂದೂಸ್ ಟೆಂಪಲ್ಸ್ ಟ್ರಸ್ಟ್ ವತಿಯಿಂದ ನಗರದ ಹಳೆ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಮೌನ ಪ್ರತಿಭಟನೆ ನಡೆಸಲಾಯಿತು. “ನಮ್ಮ ಧರ್ಮ ಗುರುಗಳು ನಮ್ಮ ಹೆಮ್ಮೆ” ಎಂಬ ಬರಹವಿರುವ ಪ್ಲೇ ಕಾರ್ಡ್ಗಳನ್ನು ಹಿಡಿದಿದ್ದ ಪ್ರತಿಭಟನಾಕಾರರು, ಸಾರ್ವಜನಿಕವಾಗಿ ಮಠಾಧಿಪತಿಗಳ ಗೌರವಕ್ಕೆ ಧಕ್ಕೆ ತರುತ್ತಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು.
ಭಾರತೀಯ ಸಂಸ್ಕೃತಿಯಲ್ಲಿ ಧರ್ಮಗುರುಗಳ ಸೇವೆ ಅಪಾರವಾಗಿದ್ದು, ಶಿಕ್ಷಣ, ವಸತಿ ಹಾಗೂ ದಾಸೋಹದಂತಹ ಸಾಮಾಜಿಕ ಕಾರ್ಯಗಳಲ್ಲಿ ಮಠಮಾನ್ಯಗಳ ಕೊಡುಗೆ ಮರೆಯುವಂತಿಲ್ಲ ಎಂದು ಪ್ರತಿಭಟನಾಕಾರರು ಅಭಿಪ್ರಾಯಪಟ್ಟರು. ಸರ್ಕಾರಗಳಿಗೆ ಮಾಡಲಾಗದ ಕಷ್ಟಸಾಧ್ಯವಾದ ಕೆಲಸಗಳನ್ನು ಮಠಗಳು ಮತ್ತು ಧರ್ಮಗುರುಗಳು ನಿರಂತರವಾಗಿ ಮಾಡುತ್ತಾ ಬಂದಿದ್ದಾರೆ. ಇಂತಹ ಪವಿತ್ರ ಶಕ್ತಿಗಳ ವಿರುದ್ಧ ಬಹಿರಂಗವಾಗಿ ಅಥವಾ ಸಾರ್ವಜನಿಕ ವೇದಿಕೆಗಳಲ್ಲಿ ಯಾರೂ ಕೂಡ ಹಗುರವಾಗಿ ಮಾತನಾಡಬಾರದು ಎಂದು ಅವರು ಎಚ್ಚರಿಸಿದರು.
ಇದೇ ವೇಳೆ ಮಾತನಾಡಿದ ಗಣ್ಯರು, ಧರ್ಮಗುರುಗಳ ವಿರುದ್ಧದ ಇಂತಹ ನಿಂದನೀಯ ಹೇಳಿಕೆಗಳನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ ಮತ್ತು ಒಂದು ವೇಳೆ ಈ ಪ್ರವೃತ್ತಿ ಹೀಗೆಯೇ ಮುಂದುವರಿದರೆ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಹೋರಾಟವನ್ನು ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದರು.
ಈ ಪ್ರತಿಭಟನೆಯಲ್ಲಿ ಸೇವ್ ಹಿಂದೂಸ್ ಟೆಂಪಲ್ ಟ್ರಸ್ಟ್ನ ನಿಖಿಲೇಶ್ ಅರಸ್, ಬಿಜೆಪಿ ನಗರಾಧ್ಯಕ್ಷ ಎಲ್. ನಾಗೇಂದ್ರ, ಮಾಜಿ ಉಪಮೇಯರ್ ಶೈಲೇಂದ್ರ, ರಾಖೇಶ್ ಭಟ್ ಸೇರಿದಂತೆ ಹಲವು ಮುಖಂಡರು ಭಾಗವಹಿಸಿ ತಮ್ಮ ಬೆಂಬಲ ಸೂಚಿಸಿದರು.
