ನಂಜನಗೂಡು, ಜನವರಿ 10, 2025 :ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ತಗಡೂರು ಗ್ರಾಮದಲ್ಲಿ ಚಿರತೆ ಹಾವಳಿ ಮಿತಿಮೀರಿದ್ದು, ರೈತರಲ್ಲಿ ತೀವ್ರ ಆತಂಕ ಸೃಷ್ಟಿಸಿದೆ. ಗ್ರಾಮದ ನಿಂಗೇಗೌಡ ಎಂಬುವವರು ಜಾನುವಾರುಗಳನ್ನು ಮೇಯಿಸುತ್ತಿದ್ದ ಸಂದರ್ಭದಲ್ಲಿ ಹಠಾತ್ತಾಗಿ ದಾಳಿ ಮಾಡಿದ ಚಿರತೆ ಅವರ ಹಸುವನ್ನು ಬಲಿಪಡೆದಿದೆ.
ಈ ವೇಳೆ ರೈತ ನಿಂಗೇಗೌಡ ಅವರು ಹಸುವಿನ ಪಕ್ಕದಲ್ಲೇ ಇದ್ದರೂ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ದುರಂತವೆಂದರೆ ಕೇವಲ ಒಂದು ತಿಂಗಳ ಹಿಂದಷ್ಟೇ ಇದೇ ರೈತನ ಕರುವೊಂದನ್ನು ಚಿರತೆ ಹೊತ್ತೊಯ್ದು ಸಾಯಿಸಿತ್ತು, ಇದೀಗ ಎರಡನೇ ಬಾರಿಗೆ ಜಾನುವಾರು ಬಲಿಯಾಗಿರುವುದು ಅವರಿಗೆ ಆರ್ಥಿಕವಾಗಿ ದೊಡ್ಡ ನಷ್ಟವುಂಟುಮಾಡಿದೆ. ಈ ಸರಣಿ ದಾಳಿಗಳಿಂದ ಗ್ರಾಮಸ್ಥರು ಭಯಭೀತರಾಗಿದ್ದು, ಅರಣ್ಯ ಇಲಾಖೆಯು ತಕ್ಷಣವೇ ಬೋನು ಇರಿಸಿ ಚಿರತೆಯನ್ನು ಸೆರೆಹಿಡಿಯಬೇಕೆಂದು ಮತ್ತು ನಷ್ಟ ಅನುಭವಿಸಿರುವ ರೈತನಿಗೆ ಸರ್ಕಾರದಿಂದ ಸೂಕ್ತ ಪರಿಹಾರ ಒದಗಿಸಬೇಕೆಂದು ತೀವ್ರವಾಗಿ ಒತ್ತಾಯಿಸಿದ್ದಾರೆ.
