ಪ್ರತಿನಿಧಿ ವರದಿ ಸರಗೂರು
ತಾಲೂಕಿನ ಹಾದನೂರು ಗ್ರಾಮದ ನಿವಾಸಿ ಸುನೀಲ್ ಕುಮಾರ್ ಎಂಬ 35 ವರ್ಷದ ವ್ಯಕ್ತಿಯ ಮೇಲೆ ಕಾಡು ಹಂದಿಯೊಂದು ದಾಳಿ ನಡೆಸಿರುವ ಘಟನೆ ನಡೆದಿದೆ.
ಸುನೀಲ್ ಕುಮಾರ್ ಎರಡು ದಿನಗಳಿಂದ ಕಳೆದು ಹೋಗಿದ್ದ ತನ್ನ ಉಳುಮೆಯ ಎತ್ತೊಂದನ್ನು ಹುಡುಕಲು ಸ್ನೇಹಿತರೊಂದಿಗೆ ಜಮೀನಿಗೆ ಹೋಗಿದ್ದನು. ಈ ಸಂದರ್ಭದಲ್ಲಿ ಜಮೀನಿನಲ್ಲಿ ಇದ್ದ ಸುಮಾರು 15 ಕಾಡು ಹಂದಿಗಳ ಹಿಂಡು ಓಡಿ ಹೋಗಿವೆ. ಒಂಟಿ ಹಂದಿಯೊಂದು ಓಡಿ ಬಂದು ತನ್ನ ಕೋರೆ ಹಲ್ಲಿನಿಂದ ತಿವಿದು ಕೆಡವಿ ನಂತರ ಬಾಯಿಯಿಂದ ಕಚ್ಚಿಕೊಂಡು ಎಳೆದಾಡಿದೆ.
ಆತ ಕಿರುಚಾಡುವುದನ್ನು ಗಮನಿಸಿದ ಸ್ನೇಹಿತರು ಓಡಿ ಬಂದು ಬೆದರಿಸಿ ಕಲ್ಲು ತೂರಿದಾಗ ಹಂದಿ ಪರಾರಿಯಾಗಿದೆ. ರಕ್ತದ ನಡುವಿನಲ್ಲಿ ಪ್ರಜ್ಞಾಹೀನನಾಗಿ ಬಿದ್ದಿದ್ದ ಸುನಿಲ್ ಕುಮಾರನನ್ನು ಸಂತೈಸಿ ಅರಣ್ಯ ಇಲಾಖಾಧಿಕಾರಿಗಳ ಗಮನಕ್ಕೆ ತಂದು ಇಲಾಖೆಯ ವಾಹನದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಬಡಗಲಪುರದಲ್ಲಿ ಚಿಕಿತ್ಸೆ ಕೊಡಿಸಿ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ಕಳುಹಿಸಲಾಯಿತು.
ಈ ಸಂದರ್ಭದಲ್ಲಿ ಆಸ್ಪತ್ರೆಗೆ ಭೇಟಿ ನೀಡಿದ ಗ್ರಾಮ ಪಂಚಾಯಿತಿ ಸದಸ್ಯರಾದ ಶಿವರಾಜು, ಶಿವಲಿಂಗಯ್ಯ ಮಾತನಾಡಿ, ಈತನು ಕುಟುಂಬದ ಮುಖ್ಯಸ್ಥನಾಗಿದ್ದು ಕೂಲಿ ಮಾಡಿದರೆ ಹಣ, ಇಲ್ಲವಾದಲ್ಲಿ ಕುಟುಂಬದ ನಿರ್ವಹಣೆಗೆ ತುಂಬ ಕಷ್ಟಕರವಾಗಿದೆ. ಸೂಕ್ತ ಚಿಕಿತ್ಸೆಯೊಂದಿಗೆ ಗುಣಮುಖನಾಗುವತನಕ ಕುಟುಂಬ ನಿರ್ವಹಣೆಗಾಗಿ ಸಹಾಯಧನವನ್ನು ನೀಡಬೇಕೆಂದು ಅರಣ್ಯಾಧಿಕಾರಿಗಳಿಗೆ ಒತ್ತಾಯಿಸಿದರು.
ವೈದ್ಯಾಧಿಕಾರಿ ಮನೋಹರ್. ಸಿಬ್ಬಂದಿ ಜಯಶ್ರೀ, ರಮೇಶ್. ರಾಜೇಶ್, ತೊಳಸಮ್ಮ, ಶಶಿಕಲಾ, ಜ್ಯೋತಿ, ಜಯಲಕ್ಷ್ಮಿ ಮುಖಂಡ ಅಂಗಡಿ ರಾಜಣ್ಣ. ನಿಂಗರಾಜು, ಸ್ವಾಮಿ, ಗುರುಸ್ವಾಮಿ, ಚಿಕ್ಕಣ್ಣ, ಇತರರು ಹಾಜರಿದ್ದು ಸಮಾಧಾನ ಮಾಡಿದರು.