ಮೈಸೂರು, ಮಾರ್ಚ್ 4, 2026 : ನಗರದ ಐತಿಹಾಸಿಕ ಇರ್ವಿನ್ ರಸ್ತೆಯಲ್ಲಿ ನೆಲೆಸಿರುವ ಶ್ರೀ ಪಂಚಮುಖಿ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಶ್ರೀ ಕೇತು ಗ್ರಸ್ತ ಚಂದ್ರಗ್ರಹಣದ ಹಿನ್ನೆಲೆಯಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.
ಗ್ರಹಣ ಮೋಕ್ಷದ ನಂತರ ದೇವಸ್ಥಾನವನ್ನು ಶಾಸ್ತ್ರೋಕ್ತವಾಗಿ ಶುದ್ಧೀಕರಿಸಲಾಗಿದ್ದು, ಅದರ ಮರುದಿನವಾದ ಇಂದು ಅಂದರೆ ಬುಧವಾರದಂದು ಲೋಕ ಕಲ್ಯಾಣದ ಉದ್ದೇಶದಿಂದ ಸಾಮೂಹಿಕವಾಗಿ ‘ಗ್ರಹಣ ಶಾಂತಿ ಹೋಮ’ವನ್ನು ಹಮ್ಮಿಕೊಳ್ಳಲಾಗಿತ್ತು.
ದೇವಸ್ಥಾನದ ಪ್ರಧಾನ ಅರ್ಚಕರಾದ ವಿದ್ವಾನ್ ಕೃಷ್ಣಮೂರ್ತಿ ಅವರ ನೇತೃತ್ವದಲ್ಲಿ ಈ ಹೋಮವು ಅತ್ಯಂತ ಶ್ರದ್ಧಾ ಭಕ್ತಿಯಿಂದ ನೆರವೇರಿತು. ಗ್ರಹಣದ ದೋಷ ನಿವಾರಣೆ ಹಾಗೂ ಸಕಲ ಜೀವರಾಶಿಗಳ ಒಳಿತಿಗಾಗಿ ನಡೆದ ಈ ಯಜ್ಞದಲ್ಲಿ ಅರ್ಚಕರು ವಿವಿಧ ಮಂತ್ರಗಳನ್ನು ಪಠಿಸುವ ಮೂಲಕ ವಿಶೇಷ ಪೂಜೆಗಳನ್ನು ಸಲ್ಲಿಸಿದರು. ಹೋಮದ ಪೂರ್ಣಾಹುತಿಯ ನಂತರ ದೇವರಿಗೆ ಮಹಾಮಂಗಳಾರತಿ ಮಾಡಲಾಯಿತು. ಈ ಸಂದರ್ಭದಲ್ಲಿ ದೇವಸ್ಥಾನಕ್ಕೆ ಭೇಟಿ ನೀಡಿದ ನೂರಾರು ಭಕ್ತಾದಿಗಳಿಗೆ ತೀರ್ಥ ಪ್ರಸಾದವನ್ನು ವಿತರಿಸಿ, ಆಶೀರ್ವದಿಸಲಾಯಿತು.
