ಮೈಸೂರು, ಮಾರ್ಚ್ 2, 2026 : ಕೇಂದ್ರ ಭಾರಿ ಕೈಗಾರಿಕೆ ಮತ್ತು ಉಕ್ಕು ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಇಂದು ಮೈಸೂರಿನಲ್ಲಿ ರಾಜ್ಯ ರಾಜಕಾರಣ, ತಂಬಾಕು ಬೆಳೆಗಾರರ ಸಮಸ್ಯೆ ಹಾಗೂ ಅಂತರಾಷ್ಟ್ರೀಯ ಸಂಘರ್ಷದಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆ ಕುರಿತು ಮಹತ್ವದ ಪ್ರತಿಕ್ರಿಯೆ ನೀಡಿದ್ದಾರೆ.
ಫೋನ್ ಟ್ಯಾಪಿಂಗ್ ವಿವಾದ ಮತ್ತು ರಾಜ್ಯ ರಾಜಕಾರಣ: ರಾಜ್ಯ ಸರ್ಕಾರದಲ್ಲಿ ಅಧಿಕಾರ ಹಸ್ತಾಂತರದ ಚರ್ಚೆಗಳ ನಡುವೆಯೇ ಸಚಿವರು ಫೋನ್ ಟ್ಯಾಪಿಂಗ್ ಕುರಿತು ಹೊಸ ಬಾಂಬ್ ಸಿಡಿಸಿದ್ದಾರೆ. “ಎಲ್ಲಾ ಸರ್ಕಾರಗಳ ಅವಧಿಯಲ್ಲೂ ಫೋನ್ ಟ್ಯಾಪಿಂಗ್ ಇತ್ತು, ಈಗಿನ ಸರ್ಕಾರದಲ್ಲೂ ಅದು ಮುಂದುವರಿದಿದೆ” ಎಂದು ಸ್ಫೋಟಕ ಹೇಳಿಕೆ ನೀಡಿದ ಅವರು, ಕೆಲವರು ಫೋನ್ ಟ್ಯಾಪಿಂಗ್ ಮಾಡಿಯೂ ಪತಿವ್ರತೆಯಂತೆ ವರ್ತಿಸುತ್ತಿದ್ದಾರೆ ಎಂದು ಲೇವಡಿ ಮಾಡಿದರು. ಸ್ವಪಕ್ಷದ ಶಾಸಕರು ಮತ್ತು ಸಚಿವರ ಮೇಲೆಯೇ ಗುಪ್ತಚರ ಇಲಾಖೆ ಮೂಲಕ ನಿಗಾ ಇಡುತ್ತಿರುವುದು ಇದೇ ಮೊದಲು. ಮುಖ್ಯಮಂತ್ರಿಯಾಗಬೇಕೆಂದು ಕನಸು ಕಾಣುತ್ತಿರುವವರು ತಮ್ಮದೇ ಸರ್ಕಾರದ ಮೇಲೆ ಗುಪ್ತಚಾರಿಕೆ ಆರಂಭಿಸಿರುವುದು ದೊಡ್ಡ ದುರಂತ ಎಂದು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು.
ತಂಬಾಕು ಬೆಳೆಗಾರರ ಸಂಕಷ್ಟಕ್ಕೆ ಪರಿಹಾರ: ಸಂಕ್ರಾಂತಿ ಹಬ್ಬದ ಬಳಿಕ ತಂಬಾಕು ಬೆಲೆ ಕುಸಿತದಿಂದ ಕಂಗಾಲಾಗಿರುವ ರೈತರ ಪರವಾಗಿ ಸಚಿವರು ಧ್ವನಿ ಎತ್ತಿದ್ದಾರೆ. ಮೈಸೂರಿನಲ್ಲಿ ನಡೆದ ತಂಬಾಕು ಮಂಡಳಿ ಮತ್ತು ಖರೀದಿದಾರರ ಸಭೆಯಲ್ಲಿ ಮಾತನಾಡಿದ ಅವರು, ಸಂಕ್ರಾಂತಿಗಿಂತ ಮುಂಚೆ ಇದ್ದ ಬೆಲೆಯಲ್ಲೇ ತಂಬಾಕು ಖರೀದಿಸುವಂತೆ ಕಂಪನಿಗಳಿಗೆ ಸೂಚನೆ ನೀಡಲಾಗಿದೆ ಎಂದರು. ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ರೈತರ ಪರವಾಗಿ ಸಭೆಯಲ್ಲಿ ಪ್ರಸ್ತಾಪಿಸಿದ ಅಂಶಗಳ ಬಗ್ಗೆ ಗಮನಹರಿಸಲಾಗಿದ್ದು, ನಾಳೆ ರೈತ ಮುಖಂಡರೊಂದಿಗೆ ಮತ್ತೊಂದು ಸುತ್ತಿನ ಸಭೆ ನಡೆಸಲಾಗುವುದು. ಸಿಗರೇಟ್ ಬೆಲೆ ಏರಿಕೆಯಿಂದಾಗಿ ಬಳಕೆದಾರರ ಸಂಖ್ಯೆ ಕಡಿಮೆಯಾಗಿದೆ ಎಂದು ಕಂಪನಿಗಳು ನೀಡುತ್ತಿರುವ ಕಾರಣದ ಬಗ್ಗೆಯೂ ಪರಿಶೀಲನೆ ನಡೆಸಲಾಗುವುದು. ಮುಂದಿನ ಎರಡರಿಂದ ಮೂರು ದಿನಗಳಲ್ಲಿ ರೈತರಿಗೆ ನ್ಯಾಯಯುತ ಬೆಲೆ ಸಿಗುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಯುದ್ಧ ಪೀಡಿತ ಪ್ರದೇಶಗಳಲ್ಲಿ ಕನ್ನಡಿಗರ ರಕ್ಷಣೆ: ಇಸ್ರೇಲ್-ಇರಾನ್ ಯುದ್ಧದ ಹಿನ್ನೆಲೆಯಲ್ಲಿ ಅಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆ ಕುರಿತು ಮಾತನಾಡಿದ ಕುಮಾರಸ್ವಾಮಿ ಅವರು, ವಿಮಾನ ಹಾರಾಟ ಸ್ಥಗಿತಗೊಂಡಿರುವುದರಿಂದ ಎಲ್ಲರನ್ನು ತಕ್ಷಣವೇ ಕರೆತರುವುದು ಸವಾಲಾಗಿದೆ ಎಂದರು. ಯುದ್ಧ ಸಂಪೂರ್ಣ ನಿಂತು ವಿಮಾನಗಳ ಸಂಚಾರ ಆರಂಭವಾದರೆ ಮಾತ್ರ ಸುರಕ್ಷಿತವಾಗಿ ಕರೆತರಲು ಸಾಧ್ಯ. ದುಬೈನಲ್ಲಿರುವ ಕನ್ನಡಿಗರು ಸಂಕಷ್ಟದಲ್ಲಿರುವವರ ಸಹಾಯಕ್ಕೆ ನಿಂತಿದ್ದಾರೆ ಮತ್ತು ಕೇಂದ್ರ ಸರ್ಕಾರವು ಭಾರತೀಯರ ಸುರಕ್ಷತೆಗೆ ಗರಿಷ್ಠ ಆದ್ಯತೆ ನೀಡಿದೆ. ರಾಜ್ಯ ಸರ್ಕಾರವು ಈ ನಿಟ್ಟಿನಲ್ಲಿ ಕೇಂದ್ರದೊಂದಿಗೆ ನಿರಂತರ ಸಂಪರ್ಕದಲ್ಲಿದೆ ಎಂದು ಮಾಹಿತಿ ನೀಡಿದರು.
