ಮೈಸೂರು, ಫೆಬ್ರವರಿ 28, 2026: ಮೈಸೂರು ಸಂಸ್ಥಾನದ ಅರಸರು ದೂರದೃಷ್ಟಿಯಿಂದ ಆರಂಭಿಸಿದ ಐತಿಹಾಸಿಕ ಮೈಸೂರು ಸಿಲ್ಕ್ (KSIC) ಕಾರ್ಖಾನೆಯನ್ನು ಉಳಿಸಬೇಕು ಎಂದು ಒತ್ತಾಯಿಸಿ ಮೈಸೂರಿನಲ್ಲಿ ಮಹಿಳೆಯರು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಟಿ. ನರಸೀಪುರದಲ್ಲಿರುವ ಕೆ.ಎಸ್.ಐ.ಸಿ ಕಾರ್ಖಾನೆಯ ಜಾಗದಲ್ಲಿ ಕ್ರೀಡಾಂಗಣ ನಿರ್ಮಾಣ ಮಾಡುವ ಸರ್ಕಾರದ ಪ್ರಸ್ತಾವನೆಗೆ ಮಹಿಳಾ ಮಣಿಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ತ್ರಿವೇಣಿ ಸಂಗಮದ ನೀರಿನ ಮಹಿಮೆ: ನೂರಾರು ವರ್ಷಗಳ ಹಿಂದೆ ರಾಜರು ಅತ್ಯಂತ ವೈಜ್ಞಾನಿಕವಾಗಿ ಚಿಂತನೆ ನಡೆಸಿ ಟಿ. ನರಸೀಪುರದಲ್ಲಿ ಈ ಘಟಕವನ್ನು ಸ್ಥಾಪಿಸಿದ್ದರು. ಇಲ್ಲಿನ ತ್ರಿವೇಣಿ ಸಂಗಮದ ನೀರನ್ನು ಬಳಸುವುದರಿಂದಲೇ ಮೈಸೂರು ಸಿಲ್ಕ್ ಸೀರೆಗಳಿಗೆ ವಿಶಿಷ್ಟವಾದ ಹೊಳಪು ಬರುತ್ತದೆ. ವಿದೇಶಿ ಪ್ರವಾಸಿಗರು ಸಹ ಮೈಸೂರಿಗೆ ಬಂದು ಈ ಸೀರೆಗಳನ್ನು ಖರೀದಿಸುತ್ತಾರೆ. ಇಂತಹ ಜಾಗತಿಕ ಮನ್ನಣೆ ಇರುವ ಸಂಸ್ಥೆಯ ಉತ್ಪಾದನೆ ಹೆಚ್ಚಿಸುವ ಬದಲು, ಕ್ರೀಡಾಂಗಣದ ಹೆಸರಿನಲ್ಲಿ ಸಂಸ್ಥೆಯನ್ನು ನಾಶ ಮಾಡಲು ಹೊರಟಿರುವುದು ಸರಿಯಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿದ್ದಾರೆ.
ಕಾರ್ಮಿಕರ ಬದುಕು ಮತ್ತು ಪರ್ಯಾಯ ಜಾಗಕ್ಕೆ ಆಗ್ರಹ: ಈ ಕಾರ್ಖಾನೆಯನ್ನು ನಂಬಿ ನೂರಾರು ಕಾರ್ಮಿಕ ಕುಟುಂಬಗಳು ಜೀವನ ನಡೆಸುತ್ತಿವೆ. ಕ್ರೀಡಾಂಗಣ ನಿರ್ಮಾಣ ಮಾಡುವುದರಿಂದ ಮೈಸೂರು ಸಿಲ್ಕ್ ಸಂಸ್ಥೆಯ ಅಸ್ತಿತ್ವಕ್ಕೆ ಧಕ್ಕೆಯಾಗಲಿದೆ. ಆದ್ದರಿಂದ ಸರ್ಕಾರವು ಕ್ರೀಡಾಂಗಣ ನಿರ್ಮಾಣಕ್ಕೆ ಬೇರೆಡೆ ಜಾಗವನ್ನು ಗುರುತಿಸಬೇಕು ಮತ್ತು ಕೆ.ಎಸ್.ಐ.ಸಿ ಘಟಕವನ್ನು ಯಾವುದೇ ಕಾರಣಕ್ಕೂ ಸ್ಥಳಾಂತರಿಸಬಾರದು ಅಥವಾ ಮುಚ್ಚಬಾರದು ಎಂದು ಮಹಿಳೆಯರು ಆಗ್ರಹಿಸಿದ್ದಾರೆ.
ರಾಜ್ಯ ಸರ್ಕಾರವು ಈ ಕೂಡಲೇ ಮಧ್ಯಪ್ರವೇಶಿಸಿ ಮೈಸೂರಿನ ಪಾರಂಪರಿಕ ಹೆಗ್ಗುರುತಾಗಿರುವ ಸಿಲ್ಕ್ ಕಾರ್ಖಾನೆಯನ್ನು ಸಂರಕ್ಷಿಸಲು ಮುಂದಾಗಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.
