ಮೈಸೂರು , ಫೆಬ್ರವರಿ 10, 2026: ರಾಕೇಶ್ ಸಿದ್ದರಾಮಯ್ಯರಿಂದ ಸಿದ್ದರಾಮಯ್ಯಗೆ ಯಾವತ್ತೂ ಮುಜುಗರ ಆಗಿರಲಿಲ್ಲ. ರಾಕೇಶ್ ಸಿದ್ದರಾಮಯ್ಯ ಬದುಕಿದ್ದರೆ ಸಿದ್ದರಾಮಯ್ಯಗೆ ತಗ್ಗಿಸುವ ಸ್ಥಿತಿ ತರುತ್ತಿರಲಿಲ್ಲ. ಆದರೆ ಸಿದ್ದರಾಮಯ್ಯಗೆ ಯತೀಂದ್ರ ಕೆಟ್ಟ ಹೆಸರು ತರುತ್ತಿದ್ದಾರೆ. ಡಾ. ಯತೀಂದ್ರ ವರ್ಗಾವಣೆ ದಂಧೆಯಲ್ಲಿ ತೊಡಗುವ ಮೂಲಕ ಯತೀಂದ್ರ ಅನಧಿಕೃತವಾಗಿ ವರ್ಗಾವಣೆ ಸಚಿವರಾಗಿದ್ದಾರೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಕಿಡಿಕಾರಿದ್ದಾರೆ.
ರಾಜ್ಯ ಸರ್ಕಾರದ ಆಡಳಿತದಲ್ಲಿ ಸಿಎಂ ಸಿದ್ದರಾಮಯ್ಯ ಪುತ್ರನ ಹಸ್ತಕ್ಷೇಪ ಆರೋಪ ವಿಚಾರವಾಗಿ ಮೈಸೂರಿನಲ್ಲಿ ಹೇಳಿಕೆ ನೀಡಿದ ಮಾಜಿ ಸಂಸದ ಪ್ರತಾಪ್ ಸಿಂಹ, ಸಿದ್ದರಾಮಯ್ಯ ತಲೆ ತಗ್ಗಿಸುವ ಕೆಲಸವನ್ನು ಯತೀಂದ್ರ ಮಾಡುತ್ತಿದ್ದಾರೆ. ಆದರೆ ಸಿಎಂ ಸಿದ್ದರಾಮಯ್ಯನವರ ಮೊದಲ ಪುತ್ರ ರಾಕೇಶ್ ನಿಂದ ಸಿದ್ದರಾಮಯ್ಯಗೆ ಯಾವತ್ತೂ ಮುಜುಗರ ಆಗಿರಲಿಲ್ಲ. ಅಪ್ಪನ ಅಧಿಕಾರವನ್ನು ಯತೀಂದ್ರ ಅತಿ ಹೆಚ್ಚು ದುರುಪಯೋಗ ಮಾಡಿಕೊಂಡಿದ್ದಾರೆ. ಈ ಕಾರಣದಿಂದಲೇ ಸಿದ್ದರಾಮಯ್ಯ ಹೆಜ್ಜೆ ಹೆಜ್ಜೆಗೂ ಮುಜುಗರಕ್ಕೆ ಒಳಗಾಗುತ್ತಿದ್ದಾರೆ. ರಾಜ್ಯದಲ್ಲಿ ಯತೀಂದ್ರ ಸೇಲ್ಸ್ ಟ್ಯಾಕ್ಸ್ ಕಡ್ಡಾಯವಾಗಿದೆ. ಯತೀಂದ್ರ ಅವರೇ ಯಾರಿಗಾಗಿ ಇಷ್ಟು ಆಸ್ತಿ ಮಾಡುತ್ತಿದ್ದೀರಿ? ಮನೆ, ತೋಟ, ಆಸ್ತಿ, ಎಲ್ಲಾ ಇದೆ.ನಿಮ್ಮ ಅಣ್ಣನ ಕುಟುಂಬ ಆರ್ಥಿಕವಾಗಿ ಸದೃಢವಾಗಿದೆ. ಇನ್ನೂ ಯಾರಿಗಾಗಿ ಇಷ್ಟು ಆಸ್ತಿ ಮಾಡುತ್ತಿದ್ದೀರಿ ಹೇಳಿ ಎಂದು ಪ್ರಶ್ನಿಸಿದ್ದಾರೆ.
ಎಲ್ಲರಿಗೂ ಗದರಿಸುವ ಸಿದ್ದರಾಮಯ್ಯ ತಮ್ಮ ಮಗನಿಗೆ ಈ ವಿಚಾರದಲ್ಲಿ ಗದರಿಸಲು ಆಗುತ್ತಿಲ್ಲ. ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು ವರ್ಷದಲ್ಲಿ ಮೂರು ದಿನ ಮಾತ್ರ ಕಾಣುತ್ತಾರೆ. ಸ್ವಾತಂತ್ರ್ಯ ದಿನೋತ್ಸವ, ಗಣರಾಜ್ಯೋತ್ಸವ ಹಾಗೂ ದಸರಾದಲ್ಲಷ್ಟೇ ಜಿಲ್ಲಾ ಉಸ್ತುವಾರಿ ಸಚಿವರು ಕಾಣುತ್ತಾರೆ. ಇಡೀ ಮೈಸೂರು ಅಭಿವೃದ್ಧಿ ಸತ್ತು ಹೋಗಿದೆ. ವರ್ಗಾವಣೆ ದಂಧೆ ಮೈಸೂರಿನಲ್ಲಿ ದೊಡ್ಡ ಮಟ್ಟದಲ್ಲಿ ಸಾಗಿದೆ. ಯತೀಂದ್ರ ಬಾಯಲ್ಲಿ ಒಂದು ದಿನವಾದರೂ ಮೈಸೂರು ಅಭಿವೃದ್ಧಿ ಮಾತು ಬಂದಿದ್ಯಾ? ನಾಳೆ ಬೆಳಿಗ್ಗೆ ಬಿಬಿಎಂಪಿ, ಮೈಸೂರು ಪಾಲಿಕೆ ಚುನಾವಣೆ ನಡೆದರೆ ಕಾಂಗ್ರೆಸ್ ಧೂಳೀಪಟ ಆಗುತ್ತದೆ.
ಸ್ಥಳೀಯ ಸಂಸ್ಥೆ ಚುನಾವಣೆ ಮಾಡಲು ಕಾಂಗ್ರೆಸ್ ಗೆ ಧೈರ್ಯ ಇಲ್ಲ ಎಂದು ಕಿಡಿಕಾರಿದ ಅವರು, ಅಧಿಕಾರ ಹಸ್ತಾಂತರ ಇಲ್ಲ ಎಂಬ ಯತೀಂದ್ರ ಹೇಳಿಕೆ ಅವರ ತಂದೆಯ ಮನದ ಮಾತು. ಸಿದ್ದರಾಮಯ್ಯ ಹೇಳಲು ಆಗದ್ದನ್ನು ಮಗನ ಮೂಲಕ ಹೇಳಿಸುತ್ತಿದ್ದಾರೆ. ವೀರೇಂದ್ರ ಪಾಟೀಲ್ ನಂತರ ಕಾಂಗ್ರೆಸ್ ಗೆ ರಾಜ್ಯದಲ್ಲಿ ಯಾವ ಸ್ಥಿತಿ ಬಂತೋ ಅದೇ ಸ್ಥಿತಿ ಈಗಲು ಕಾಂಗ್ರೆಸ್ ಗೆ ಬರುತ್ತದೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಮೈಸೂರಿನಲ್ಲಿ ಹೇಳಿಕೆ ನೀಡಿದರು.
