ಮೈಸೂರು, ಜುಲೈ 21, 2026 : ‘ಪ್ರತಿನಿಧಿ’ ಪ್ರಾದೇಶಿಕ ದಿನಪತ್ರಿಕೆಯ ವತಿಯಿಂದ ಆಯೋಜಿಸಲಾಗುತ್ತಿರುವ ‘ಲೇಡಿ ವಿಂಗ್ಸ್’ ಕ್ರೀಡೋತ್ಸವವು ನಗರದಲ್ಲಿ ವಿಜೃಂಭಣೆಯಿಂದ ಮುಂದುವರಿದಿದೆ. ಶಿವರಾತ್ರೀಶ್ವರ ಅಕ್ಕನ ಬಳಗ ಹಾಗೂ ಮದರ್ ಹುಡ್ ಆಸ್ಪತ್ರೆಯ ಸಹಯೋಗದೊಂದಿಗೆ ವಿಜಯನಗರ 2ನೇ ಹಂತದ ಬಸವೇಶ್ವರ ಭವನದಲ್ಲಿಂದು ನಡೆದ ಕ್ರೀಡೋತ್ಸವದಲ್ಲಿ ಮಹಿಳೆಯರು ಅತ್ಯಂತ ಉತ್ಸಾಹದಿಂದ ಭಾಗವಹಿಸಿ ಸಂಭ್ರಮಿಸಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮದರ್ ಹುಡ್ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ ಡಾ. ಶ್ವೇತ ನಾಯಕ್ ಅವರು ಮಹಿಳೆಯರ ಆರೋಗ್ಯ ನಿರ್ವಹಣೆ ಹಾಗೂ ಜೀವನಶೈಲಿಗೆ ಸಂಬಂಧಿಸಿದಂತೆ ಉಪಯುಕ್ತ ಆರೋಗ್ಯ ಸಲಹೆಗಳನ್ನು ನೀಡಿದರು. ಇದಕ್ಕೂ ಮುನ್ನ ಮಹಿಳೆಯರಿಗಾಗಿ ಆಯೋಜಿಸಲಾಗಿದ್ದ ವಿವಿಧ ಸ್ಪರ್ಧೆಗಳಲ್ಲಿ ಶಿವರಾತ್ರೀಶ್ವರ ಅಕ್ಕನ ಬಳಗದ ಮಹಿಳೆಯರುಅತ್ಯುತ್ಸಾಹದಿಂದ ಭಾಗವಹಿಸಿ ಸಂಭ್ರಮಿಸಿದರು. ನಂತರ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ಅಭ್ಯರ್ಥಿಗಳಿಗೆ ಬಹುಮಾನಗಳನ್ನು ವಿತರಿಸಿ ಅಭಿನಂದಿಸಲಾಯಿತು.

ಸ್ಪರ್ಧೆಗಳ ವಿವರ ನೋಡುವುದಾದರೆ, ‘ವಿಂಗ್ಸ್ ಸೇಸ್ ವಾಟ್?’ ಸ್ಪರ್ಧೆಯಲ್ಲಿ ಶುಭಾಮಣಿ ಪ್ರಥಮ, ವಿದ್ಯಾ ವೆಂಕಟೇಶ್ ದ್ವಿತೀಯ ಹಾಗೂ ಟಿ.ಎನ್. ವಿದ್ಯಾ ತೃತೀಯ ಬಹುಮಾನ ಪಡೆದುಕೊಂಡರು. ‘ಜೈ ಕರ್ನಾಟಕ’ ಸ್ಪರ್ಧೆಯಲ್ಲಿ ಉಷಾ ಪ್ರಥಮ, ಅನುಪಮ ದ್ವಿತೀಯ ಮತ್ತು ಲೋಕಮಣಿ ತೃತೀಯ ಸ್ಥಾನ ಗಳಿಸಿದರು. ಅದೇ ರೀತಿ ‘ಚೆಂಡು ಮತ್ತು ಚಮಚ’ ಸ್ಪರ್ಧೆಯಲ್ಲಿ ಮಂಜುಳ ಪ್ರಥಮ, ಸುನೀತಾ ದ್ವಿತೀಯ ಹಾಗೂ ಪುಷ್ಪ ತೃತೀಯ ಬಹುಮಾನ ಪಡೆದರು.

ಈ ಕ್ರೀಡೋತ್ಸವದಲ್ಲಿ ಶಿವರಾತ್ರೀಶ್ವರ ಅಕ್ಕನ ಬಳಗದ ಅಧ್ಯಕ್ಷರಾದ ಇಂದ್ರಮ್ಮ ನಟರಾಜ್, ಉಪಾಧ್ಯಕ್ಷರಾದ ಶುಭಾಮಣಿ, ಹಾಗೂ ಕಾರ್ಯದರ್ಶಿ ಸುಜಾತಾ ಕಾಶಿ ಹಾಗೂ ‘ಪ್ರತಿನಿಧಿ’ ದಿನಪತ್ರಿಕೆಯ ಯಶಸ್ವಿನಿ ಮತ್ತು ಯಮುನಾ ರಾಣಿ ಉಪಸ್ಥಿತರಿದ್ದರು.
