ಮೈಸೂರು, ಜುಲೈ 10, 2026 : ಜೂನ್ 30ರಿಂದ ಆರಂಭವಾಗಿರುವ ಎಸ್ಐಆರ್ (SIR) ಪ್ರಕ್ರಿಯೆಯಲ್ಲಿ ಸಾರ್ವಜನಿಕರಿಗೆ ವ್ಯಾಪಕ ಗೊಂದಲ ಉಂಟಾಗುತ್ತಿದ್ದು, ರಾಜ್ಯ ಸರ್ಕಾರದ ಕಾನೂನು ಸುವ್ಯವಸ್ಥೆ ಮತ್ತು ಸಾಂಸ್ಕೃತಿಕ ನಿರ್ಧಾರಗಳ ವಿರುದ್ಧ ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಮೈಸೂರಿನಲ್ಲಿ ತೀವ್ರ ಅಸಮಾಧಾನ ಹೊರಹಾಕಿದ್ದಾರೆ.
ಪ್ರಸ್ತುತ ಎಸ್ಐಆರ್ ಪ್ರಕ್ರಿಯೆಗಾಗಿ ಬಿಎಲ್ಒ (BLO)ಗಳು ಕಾರ್ಯನಿರ್ವಹಿಸುತ್ತಿದ್ದರೂ ಸಹ ಎಲ್ಲ ಕಡೆಗಳಿಂದ ಸಾಲು ಸಾಲು ದೂರುಗಳು ಬರುತ್ತಿವೆ. ತುಂಬಾ ಕಡೆಗಳಲ್ಲಿ ಸಾರ್ವಜನಿಕರು ಗೊಂದಲಕ್ಕೀಡಾಗುತ್ತಿರುವುದರಿಂದ ಮಾಧ್ಯಮಗಳ ಮೂಲಕ ಮೈಸೂರು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿರುವ ಪ್ರತಾಪ್ ಸಿಂಹ ಅವರು, ಪ್ರತಿ ಭಾನುವಾರ ಸಂಬಂಧಪಟ್ಟ ಬೂತ್ಗಳಲ್ಲಿ ಬೆಳಿಗ್ಗೆ 8 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಫಾರಂ ವಿತರಣೆ ಮಾಡಿ ಸಮಸ್ಯೆಗೆ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಆಯಾಯ ಬೂತ್ ಮಟ್ಟದಲ್ಲೇ ಈ ಕೆಲಸಗಳು ಸುಲಭವಾಗಿ ಪೂರ್ಣಗೊಂಡರೆ ಸಾರ್ವಜನಿಕರ ಗೊಂದಲ ಬಗೆಹರಿಯುತ್ತದೆ ಎಂದು ಅವರು ಸಲಹೆ ನೀಡಿದ್ದಾರೆ.
ಇದೇ ವೇಳೆ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕುಟುಂಬವೊಂದರ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಮಾಜಿ ಸಂಸದರು ತೀವ್ರ ವಾಗ್ದಾಳಿ ನಡೆಸಿದರು. ಅಪಘಾತ ಮಾಡಿದ್ದಾರೆ ಎಂಬ ನೆಪದಲ್ಲಿ ವ್ಯಕ್ತಿಯೊಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದ್ದರೂ ಮಂಡ್ಯ ಪೊಲೀಸರು ಆರೋಪಿಗಳ ವಿರುದ್ಧ ಅತ್ಯಂತ ಸರಳವಾದ ಸೆಕ್ಷನ್ಗಳನ್ನು ಹಾಕಿದ್ದಾರೆ ಎಂದು ಕಿಡಿಕಾರಿದ ಅವರು, ಮಂಡ್ಯ ಪೊಲೀಸರಿಗೆ ಕನಿಷ್ಠ ಕಾಮನ್ ಸೆನ್ಸ್ ಇಲ್ಲವೇ ಎಂದು ಪ್ರಶ್ನಿಸಿದರು. ಪ್ರಿಯಾಂಕ್ ಖರ್ಗೆ ಗೃಹ ಸಚಿವರಾದ ಮೇಲೆ ಪೊಲೀಸ್ ಇಲಾಖೆಯ ಕಾರ್ಯ ಸುಧಾರಣೆ ಬಗ್ಗೆ ಎಂದಾದರೂ ಮಾತನಾಡಿದ್ದಾರಾ ಎಂದು ಪ್ರಶ್ನಿಸಿದ ಸಿಂಹ, ಗೃಹ ಸಚಿವರು ಬರೀ ತಲೆಹರಟೆ ಮಾತನಾಡಿಕೊಂಡು, ಅವರಿವರ ಬಗ್ಗೆ ಕೊಂಕು ನುಡಿಯುತ್ತಾ ಟ್ವೀಟ್ ಮಾಡುವುದರಲ್ಲೇ ಕಾಲ ಕಳೆಯುತ್ತಿದ್ದಾರೆ ಎಂದು ಟೀಕಿಸಿದರು. ಈ ಸರ್ಕಾರದಲ್ಲಿ ಅವರು ಪೆದ್ದು ಪೆದ್ದು ಮಾತನಾಡಿಕೊಂಡು ಕೂಗುಮಾರಿಯಂತೆ ಇದ್ದಾರೆ ಎಂದು ಲೇವಡಿ ಮಾಡಿದ ಅವರು, ಈ ಹಿಂದೆ ಇದ್ದ ಮೂವರು ಕೂಗುಮಾರಿಗಳ ಪೈಕಿ ಒಬ್ಬರಿಗೆ ಈಗ ಸಚಿವ ಸ್ಥಾನ ಸಿಕ್ಕಿಲ್ಲ, ಇನ್ನೊಬ್ಬ ಶಾಸಕ ಅದೇ ಕೆಲಸ ಮಾಡುತ್ತಿದ್ದಾನೆ ಎಂದರು. ಬೆಂಗಳೂರು-ಮೈಸೂರು ಹೈವೇಯಲ್ಲಿ ತಡೆ ಬೇಲಿ ಕಿತ್ತು ಜನ ಬಿಡಾಡಿ ದನಗಳ ರೀತಿ ಓಡಾಡುತ್ತಿದ್ದರೂ ಮಂಡ್ಯ ಪೊಲೀಸರು ಕಣ್ಣು ಮುಚ್ಚಿ ಕುಳಿತಿದ್ದಾರೆ ಎಂದು ಆರೋಪಿಸಿದ ಅವರು, ತಕ್ಷಣವೇ ಘಟನೆಯಲ್ಲಿ ಭಾಗಿಯಾಗಿರುವ ಎಲ್ಲಾ ಆರೋಪಿಗಳ ಮೇಲೆ ಮಾರಣಾಂತಿಕ ಹಲ್ಲೆಯ ಕೇಸ್ ದಾಖಲಿಸಿ ಬಂಧಿಸದಿದ್ದರೆ ಪೊಲೀಸರ ವಿರುದ್ಧ ರಸ್ತೆಗಿಳಿದು ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.
ಇನ್ನು ಮೈಸೂರು ದಸರಾದಲ್ಲಿ ಕಂಬಳ ಕ್ರೀಡೆಯನ್ನು ನಡೆಸುವ ವಿಚಾರದ ಕುರಿತು ಮಾತನಾಡಿದ ಪ್ರತಾಪ್ ಸಿಂಹ, ನಮ್ಮ ಸಾಂಪ್ರದಾಯಿಕ ದಸರಾ ಆಚರಣೆಯ ನಡುವೆ ಬೇರೆ ಪ್ರಾಂತದ ಕ್ರೀಡೆಗಳನ್ನು ತರುವ ಅಗತ್ಯವೇನಿದೆ ಎಂದು ಪ್ರಶ್ನಿಸಿದರು. ಆಯಾಯ ನೆಲದ ಕ್ರೀಡೆಗಳು ಮತ್ತು ಸಂಸ್ಕೃತಿಗಳು ಅದೇ ಸ್ಥಳದಲ್ಲಿ ವೈಭವವಾಗಿ ನಡೆಯಲಿ, ಅದನ್ನು ಬಿಟ್ಟು ದಸರಾದಲ್ಲಿ ಎಲ್ಲಾ ಪರಂಪರೆಗಳನ್ನು ತುರುಕುತ್ತಾ ಹೋದರೆ ಮೂಲ ದಸರಾದ ಆಶಯ ಮತ್ತು ಅರ್ಥಕ್ಕೆ ಧಕ್ಕೆ ಬರುತ್ತದೆ ಎಂದರು. ಸಾಂಕೇತಿಕವಾಗಿ ದಸರಾ ಜಂಬೂ ಸವಾರಿಯಲ್ಲಿ ನಾಡಿನ ಎಲ್ಲಾ ಸಂಸ್ಕೃತಿಯನ್ನು ಸ್ತಬ್ಧಚಿತ್ರಗಳ (ಟ್ಯಾಬ್ಲೊ) ಮೂಲಕ ಮೂಡಿಸಿದರೆ ಅಷ್ಟು ಸಾಕು, ಅದನ್ನೇ ಇಲ್ಲಿ ಒಂದು ಪ್ರತ್ಯೇಕ ಇವೆಂಟ್ ಮಾಡುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟರು. ಈ ಸಾಂಸ್ಕೃತಿಕ ವಿಚಾರದಲ್ಲಿ ಮೈಸೂರು ಸಂಸದ ಯದುವೀರ್ ಒಡೆಯರ್ ಅವರು ಕೂಡ ಧ್ವನಿ ಎತ್ತಿದ್ದು, ಯದುವೀರ್ ಅವರ ನಿಲುವಿಗೆ ನನ್ನ ಸಂಪೂರ್ಣ ಸಹಮತವಿದೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಸ್ಪಷ್ಟಪಡಿಸಿದರು.
