ಮೈಸೂರು, ಡಿಸೆಂಬರ್ 29, 2025 : ನಗರದ ಹೊರವಲಯದ ಬೋಗಾದಿ ಸಮೀಪವಿರುವ ನುಗ್ಗಹಳ್ಳಿಯಲ್ಲಿ ಕಳೆದ ಕೆಲವು ದಿನಗಳಿಂದ ಆತಂಕ ಸೃಷ್ಟಿಸಿದ್ದ ಚಿರತೆಯು ಅಂತಿಮವಾಗಿ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಬಿದ್ದಿದೆ.
ಸ್ಥಳೀಯ ನಿವಾಸಿ ಮಹಾಲಿಂಗೂ ಎಂಬುವವರ ಜಮೀನಿನಲ್ಲಿ ಚಿರತೆ ಕಾಣಿಸಿಕೊಂಡ ಬಗ್ಗೆ ಮಾಹಿತಿ ಲಭ್ಯವಾದ ತಕ್ಷಣ ಎಚ್ಚೆತ್ತ ಅರಣ್ಯ ಇಲಾಖೆಯು ಮುನ್ನೆಚ್ಚರಿಕಾ ಕ್ರಮವಾಗಿ ಅಲ್ಲಿ ಬೋನನ್ನು ಅಳವಡಿಸಿತ್ತು. ನಿನ್ನೆ ತಡರಾತ್ರಿ ಆಹಾರದ ಹುಡುಕಾಟದಲ್ಲಿ ಬಂದ ಸುಮಾರು 3 ರಿಂದ 4 ವರ್ಷ ಪ್ರಾಯದ ಹೆಣ್ಣು ಚಿರತೆಯು ಯಶಸ್ವಿಯಾಗಿ ಬೋನಿನಲ್ಲಿ ಸೆರೆಯಾಗಿದೆ.
ಈ ಕಾರ್ಯಾಚರಣೆಯನ್ನು ಅರಣ್ಯ ಇಲಾಖೆಯ ಆರ್ಎಫ್ಒ ಸಂತೋಷ್ ಉಗಾರ್, ಡಿವೈ ಆರ್ಎಫ್ಒ ಸುಂದರ್, ಬೀಟ್ ಫಾರೆಸ್ಟರ್ ಸ್ವಾಮಿ ಹಾಗೂ ಚಿರತೆ ಕಾರ್ಯಪಡೆಯ (Leopard Task Force) ಲಿಂಗರಾಜು ಮತ್ತು ತಂಡದವರು ಯಶಸ್ವಿಯಾಗಿ ನಡೆಸಿಕೊಟ್ಟಿದ್ದಾರೆ. ಬೋನಿಗೆ ಬಿದ್ದ ಚಿರತೆಯನ್ನು ಇಂದು ಮುಂಜಾನೆ ಅರಣ್ಯ ಇಲಾಖೆಯ ಸಿಬ್ಬಂದಿಗಳು ಸುರಕ್ಷಿತವಾಗಿ ಜನವಸತಿ ಪ್ರದೇಶದಿಂದ ದೂರವಿರುವ ದಟ್ಟ ಅರಣ್ಯಕ್ಕೆ ರವಾನಿಸಿದ್ದಾರೆ. ಚಿರತೆ ಸೆರೆಯಾದ ಸುದ್ದಿ ತಿಳಿಯುತ್ತಿದ್ದಂತೆ ನುಗ್ಗಹಳ್ಳಿ ಮತ್ತು ಸುತ್ತಮುತ್ತಲ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.
