ಮೈಸೂರು, ಡಿಸೆಂಬರ್ 24, 2025 : ರಾಜ್ಯ ರಾಜಕಾರಣದಲ್ಲಿ ನಾಯಕತ್ವ ಬದಲಾವಣೆಯ ಕುರಿತು ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರವಾಗಿ ಭರ್ಜರಿ ಬ್ಯಾಟಿಂಗ್ ನಡೆಸಿದ್ದಾರೆ. ಮೈಸೂರಿನಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಕುರ್ಚಿಯಲ್ಲಿ ಅತ್ಯಂತ ಭದ್ರವಾಗಿದ್ದಾರೆ ಮತ್ತು 2028ರವರೆಗೂ ಅವರೇ ಸಿಎಂ ಆಗಿ ಮುಂದುವರಿಯಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಹೈಕಮಾಂಡ್ ಹೊರತುಪಡಿಸಿ ಬೇರೆ ಯಾರ ಕೈಯಲ್ಲೂ ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಲು ಸಾಧ್ಯವಿಲ್ಲ ಎಂದು ಸವಾಲು ಹಾಕಿದ ಸಚಿವರು, ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರ ನಿರ್ಧಾರವೇ ಅಂತಿಮ ಎಂದು ಸ್ಪಷ್ಟಪಡಿಸಿದರು.
ಅಧಿಕಾರ ಹಂಚಿಕೆಯ ಒಪ್ಪಂದದ ಬಗ್ಗೆ ತಮಗೆ ಯಾವುದೇ ಮಾಹಿತಿ ಇಲ್ಲ ಎಂದು ತಿಳಿಸಿದ ಜಮೀರ್ ಅಹ್ಮದ್, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ದೆಹಲಿಗೆ ತೆರಳಿರುವುದು ತಮ್ಮ ಇಲಾಖೆಯ ಕೆಲಸಗಳಿಗಾಗಿಯೇ ಹೊರತು ಹೈಕಮಾಂಡ್ ಭೇಟಿಗಾಗಿ ಅಲ್ಲ ಎಂದರು. ಇದೇ ವೇಳೆ ತಮ್ಮ ಆಪ್ತ ಸಹಾಯಕ ಸರ್ಫರಾಜ್ ಅವರ ಮನೆ ಮೇಲೆ ನಡೆದ ಲೋಕಾಯುಕ್ತ ದಾಳಿಯ ಬಗ್ಗೆ ಪ್ರತಿಕ್ರಿಯಿಸಿ, ಈ ಕುರಿತು ತಮಗೆ ಮಾಹಿತಿ ಇಲ್ಲ ಎಂದು ಹೇಳುತ್ತಲೇ, ಸರ್ಫರಾಜ್ ಅವರ ತಂದೆಯ ಕಾಲದಿಂದಲೂ ಅವರು ಶ್ರೀಮಂತರು, ದಾಳಿಯ ಹಿನ್ನೆಲೆ ಏನು ಎಂಬುದು ಮುಂದಿನ ದಿನಗಳಲ್ಲಿ ತಿಳಿಯಲಿದೆ ಎಂದು ಪ್ರತಿಕ್ರಿಯಿಸಿದರು.
ಇನ್ನು ದ್ವೇಷ ಭಾಷಣ ತಡೆ ಕಾಯ್ದೆ ಜಾರಿ ಕುರಿತು ಮಾತನಾಡಿದ ಸಚಿವರು, ಈ ಕಾಯ್ದೆ ಯಾವುದೇ ಒಂದು ಸಮುದಾಯಕ್ಕೆ ಸೀಮಿತವಾಗಿಲ್ಲ, ಇದು ಎಲ್ಲಾ ಧರ್ಮದವರಿಗೂ ಅನ್ವಯಿಸುತ್ತದೆ ಎಂದರು. ಅನೇಕರು ಬಾಯಿಗೆ ಬಂದಂತೆ ಮಾತನಾಡುತ್ತಾರೆ, ಅಂತಹವರ ನಾಲಿಗೆ ಮೇಲೆ ನಿಯಂತ್ರಣ ಹೇರಲು ಈ ಕಾಯ್ದೆ ಸಹಕಾರಿ ಎಂದು ಸಮರ್ಥಿಸಿಕೊಂಡರು. ಇದೇ ಸಂದರ್ಭದಲ್ಲಿ ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದ ಅವರು, ನಾಲಿಗೆ ಉದ್ದ ಇರುವುದು ಬಿಜೆಪಿಯವರಿಗೆ, ಈ ಬಿಲ್ನಿಂದ ಬಿಜೆಪಿಯವರು ಸಣ್ಣವಾಗಿದ್ದಾರೆ ಎಂದು ವ್ಯಂಗ್ಯವಾಡಿದರು. ಒಟ್ಟಾರೆ ಸಿದ್ದರಾಮಯ್ಯ ಅವರ ನಾಯಕತ್ವದ ಮೇಲೆ ತಮಗೆ ಪೂರ್ಣ ವಿಶ್ವಾಸವಿದ್ದು, ಸದ್ಯಕ್ಕೆ ಸಿಎಂ ಬದಲಾವಣೆಯ ಯಾವುದೇ ಸನ್ನಿವೇಶಗಳಿಲ್ಲ ಎಂದು ಜಮೀರ್ ಅಹ್ಮದ್ ಖಾನ್ ಮೈಸೂರಿನಲ್ಲಿ ಪುನರುಚ್ಚರಿಸಿದ್ದಾರೆ.
