ಸರಗೂರು, ಮೈಸೂರು ಜಿಲ್ಲೆ: ಕಾಡಂಚಿನ ಗ್ರಾಮಗಳಲ್ಲಿ ರೈತರ ಮೇಲೆ ನಿರಂತರ ದಾಳಿ ನಡೆಸಿ ಆತಂಕ ಹುಟ್ಟಿಸಿದ್ದ ಮತ್ತೊಂದು ಗಂಡು ಹುಲಿಯನ್ನು ಅರಣ್ಯ ಇಲಾಖೆ ನಿನ್ನೆ(ನ, 9) ಯಶಸ್ವಿಯಾಗಿ ಸೆರೆ ಹಿಡಿದಿದೆ.
ಮೈಸೂರು ಜಿಲ್ಲೆಯ ಸರಗೂರು ತಾಲ್ಲೂಕಿನ ಮೊಳೆಯೂರು ವಲಯದಲ್ಲಿ ನಡೆದ ಅರಣ್ಯ ಇಲಾಖೆಯ ಕಾರ್ಯಾಚರಣೆಯಲ್ಲಿ ರೈತರನ್ನು ಬಲಿಪಡೆದು ಆತಂಕ ಸೃಷ್ಟಿಸಿದ್ದ ಗಂಡು ಹುಲಿಯೊಂದು ಸೆರೆಯಾಗಿದೆ.

ಕೂಡಿಗಿ ಗ್ರಾಮದ ರೈತ ದೊಡ್ಡನಿಂಗಯ್ಯ ಅವರ ಸಾವಿಗೆ ಕಾರಣವಾಗಿದ್ದ ಈ ಹುಲಿಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದರು. ಸಾಕಾನೆಗಳ ಸಹಾಯದಿಂದ ಹುಲಿಯ ಇರುವಿಕೆಯನ್ನು ಪತ್ತೆ ಹಚ್ಚಿ, ಅಂತಿಮವಾಗಿ ಅರವಳಿಕೆ ಚುಚ್ಚುಮದ್ದು ನೀಡಿ ಸೆರೆ ಹಿಡಿಯಲಾಯಿತು.
ಗಾಯಗೊಂಡು ಬೇಟೆಯಾಡಲು ಅಶಕ್ತ:
ಸೆರೆ ಸಿಕ್ಕ ಹುಲಿಯ ಕುತ್ತಿಗೆ ಭಾಗದಲ್ಲಿ ಆಳವಾದ ಗಾಯ ಕಂಡುಬಂದಿದೆ. ಈ ಗಾಯವು ಉರುಳಿಗೆ ಸಿಲುಕಿ ಆಗಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ. ಗಾಯಗೊಂಡ ಕಾರಣದಿಂದ ಬೇಟೆಯಾಡುವ ಸಾಮರ್ಥ್ಯ ಕಳೆದುಕೊಂಡಿದ್ದ ಹುಲಿಯು, ಸುಲಭ ಆಹಾರಕ್ಕಾಗಿ ಜನ ಮತ್ತು ಜಾನುವಾರುಗಳ ಮೇಲೆ ದಾಳಿ ನಡೆಸಿರಬಹುದು ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.
ಈ ಹುಲಿ ಸೆರೆಯಿಂದ ಕಳೆದ ಕೆಲವು ದಿನಗಳಿಂದ ಹುಲಿಯ ಭಯದಲ್ಲಿ ದಿನ ದೂಡುತ್ತಿದ್ದ ಕಾಡಂಚಿನ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ. ಹುಲಿ ದಾಳಿಯಿಂದ ಮೃತಪಟ್ಟವರ ಡಿಎನ್ಎ ಮತ್ತು ಸೆರೆ ಸಿಕ್ಕ ಹುಲಿಯ ಡಿಎನ್ಎ ಪರೀಕ್ಷೆ ನಡೆಸಿ, ಇದು ಮನುಷ್ಯರ ಮೇಲೆ ದಾಳಿ ಮಾಡಿದ ಹುಲಿಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಅರಣ್ಯ ಇಲಾಖೆ ಸಚಿವ ಈಶ್ವರ ಖಂಡ್ರೆ ಸೂಚನೆ ನೀಡಿದ್ದಾರೆ.
