ಮೈಸೂರು, ಫೆಬ್ರವರಿ 26, 2026: ನಗರದ ನಾರಾಯಣ ಶಾಸ್ತ್ರಿ ರಸ್ತೆಯಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಶ್ರೀ ಸುಶಮಿಂದ್ರತೀರ್ಥ ಸೇವಾ ಸಮಿತಿ ವತಿಯಿಂದ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ 431ನೇ ವರ್ಧಂತಿ ಮಹೋತ್ಸವವನ್ನು ಅತ್ಯಂತ ಸಡಗರದಿಂದ ಆಚರಿಸಲಾಯಿತು. ಈ ಸುಸಂದರ್ಭದಲ್ಲಿ ಸಾವಿರಾರು ಭಕ್ತಾದಿಗಳಿಗೆ ಅನ್ನಸಂತರ್ಪಣೆಯನ್ನು ಏರ್ಪಡಿಸಲಾಗಿತ್ತು.

ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಗಣ್ಯರು, ರಾಯರ ಬೃಂದಾವನವಿರುವ ಸ್ಥಳಗಳು ಜಾತಿ-ಮತದ ಭೇದವಿಲ್ಲದೆ ಸಕಲ ಜೀವರಾಶಿಯನ್ನು ಉದ್ಧಾರ ಮಾಡುತ್ತಿವೆ ಎಂದು ಸ್ಮರಿಸಿದರು. ರಾಯರ ಪವಾಡಗಳು ಕೇವಲ ಆ ಕಾಲಕ್ಕೆ ಸೀಮಿತವಾಗಿರದೆ, ಇಂದಿಗೂ ಭಕ್ತರ ಸಂಕಷ್ಟಗಳನ್ನು ದೂರ ಮಾಡುತ್ತಿವೆ. ರಾಯರು ದೇಶಾದ್ಯಂತ ಸಂಚರಿಸಿ ಮಾಡಿದ ಪಾಠ ಪ್ರವಚನಗಳು ಹಾಗೂ ಅವರು ರಚಿಸಿದ ಮಹಾನ್ ಗ್ರಂಥಗಳು ಇಂದಿನ ಸಮಾಜಕ್ಕೆ ಜ್ಞಾನದ ಶ್ರೀಮಂತಿಕೆಯನ್ನು ನೀಡಿವೆ ಎಂದು ಅಭಿಪ್ರಾಯಪಟ್ಟರು.
ರಾಯರ ಮಠವು ಕೇವಲ ಲೌಕಿಕವಾಗಿ ಮಾತ್ರವಲ್ಲದೆ, ಭಕ್ತರ ನಂಬಿಕೆಯ ದೃಷ್ಟಿಯಿಂದಲೂ ಅತ್ಯಂತ ಶ್ರೀಮಂತವಾಗಿದೆ. ಮಠವು ಮುಂದಿನ ದಿನಗಳಲ್ಲಿ ಇಂತಹ ಇನ್ನೂ ಹೆಚ್ಚಿನ ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಕ್ರಮಗಳ ಮೂಲಕ ನಾಡಿನ ಸುಭಿಕ್ಷೆಗೆ ಕಾರಣವಾಗಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಶ್ರೀ ಸುಶಮಿಂದ್ರತೀರ್ಥ ಸೇವಾ ಸಮಿತಿಯ ನಾಗರಾಜ್, ವರುಣ ಮಹಾದೇವ್, ಓಂಕಾರ್ ಆನಂದ್, ಕಿರಣ, ರಾಜೇಶ್ ಪಲನಿ ಉಪಸ್ಥಿತರಿದ್ದರು. ಇವರೊಂದಿಗೆ ಕೆ.ಆರ್. ಬ್ಯಾಂಕ್ ಅಧ್ಯಕ್ಷರಾದ ಬಸವರಾಜ ಬಸಪ್ಪ, ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಎಂ.ಡಿ. ಪಾರ್ಥಸಾರಥಿ, ಜಿ.ಎಂ. ಪಂಚಾಕ್ಷರಿ, ಶೇಖರ್, ಎಸ್.ಎನ್. ರಾಜೇಶ್, ಡೈರಿ ವೆಂಕಟೇಶ್, ಇಡ್ಲಿ ಸ್ವಾಮಿ ಸೇರಿದಂತೆ ಅನೇಕ ಪ್ರಮುಖರು ಹಾಗೂ ರಾಯರ ಭಕ್ತರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
