ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ದುಂಡ ಗ್ರಾಮದಲ್ಲಿ 2008ರಲ್ಲಿ ಹಿಂದೆ ನಡೆದಿದ್ದ ದಲಿತ ದೌರ್ಜನ್ಯ ಪ್ರಕರಣದ ಆರೋಪಿಗಳನ್ನು ಇತ್ತೀಚೆಗೆ ಅಪರಾಧಿಗಳೆಂದು ಘೋಷಿಸಿದ್ದ ಹೈಕೋರ್ಟ್, ನ.16ರಂದು ಶಿಕ್ಷೆಯ ಪ್ರಮಾಣ ಪ್ರಕಟಿಸಿದೆ.
ಪ್ರಕರಣದಲ್ಲಿ ಅಪರಾಧಿಗಳಾಗಿ ಸುದೀಪ್(ಎ1), ಜಯಮ್ಮ(ಎ2), ನಟರಾಜ್(ಎ3), ಶ್ರೀನಿವಾಸ್(ಎ4) ಶಂಕರಯ್ಯ(ಎ5), ಶಿವಕುಮಾರ್(ಎ6), ಹರ್ಷಾ(ಎ7), ಶಿವಲಿಂಗಯ್ಯ(ಎ8), ಪ್ರಕಾಶ್(ಎ9), ಗೌರಮ್ಮ(ಎ10), ಕಲ್ಪನಾ(ಎ11) ಎಂಬವರು ಅಪರಾಧಿಗಳು ಎಂದು ನ.1ರಂದು ಹೈಕೋರ್ಟ್ ತೀರ್ಪು ನೀಡಿತ್ತು. ನ.16ರಂದು ಶಿಕ್ಷೆಯ ಪ್ರಮಾಣ ಪ್ರಕಟಿಸಿದೆ. ಆದರೆ, ಪ್ರಕರಣದ 8ನೇ ಆರೋಪಿಯಾಗಿದ್ದ ಶಿವಲಿಂಗಯ್ಯ ಎಂಬುವವರು ಅರ್ಜಿ ವಿಚಾರಣೆ ನಡುವೆ ಮೃತಪಟ್ಟಿರುವುದರಿಂದ ಅವರ ವಿರುದ್ಧದ ಪ್ರಕರಣ ಹಿಂಪಡೆಯಲಾಗಿದೆ.
ಏನಿದು ಪ್ರಕರಣ?
ತುಮಕೂರು ಜಿಲ್ಲೆ ತುರುವೇಕೆರೆ ತಾಲೂಕಿನ ದುಂಡ ಗ್ರಾಮದಲ್ಲಿ 14.08.2008ರಂದು ಬಲವಂತವಾಗಿ ದಲಿತ ಕೇರಿಗೆ ನುಗ್ಗಿ ದಲಿತ ಸಮುದಾಯಕ್ಕೆ ಸೇರಿದ ವ್ಯಕ್ತಿಗಳ ಜಾತಿ ಪ್ರಸ್ತಾಪಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ ಪ್ರಕರಣ ನಡೆದಿತ್ತು. ಜೊತೆಗೆ ಅಲ್ಲಿದ್ದವರ ಮೇಲೆ ತೀವ್ರ ದೈಹಿಕ ಹಲ್ಲೆ ನಡೆಸಲಾಗಿತ್ತು.
ಗೋವಿಂದರಾಜು, ನರಸಿಂಹಮೂರ್ತಿ, ಕೆಂಪ ಓಬಳಯ್ಯ, ದೊಡ್ಡಯ್ಯನ ಕೆಂಪ ಓಬಳಯ್ಯ, ವೆಂಕಟೇಶ್, ಮಂಜುನಾಥ್, ಉಮೇಶ್, ಮಹಾಲಕ್ಷ್ಮಮ್ಮ ಅವರ ಮೇಲೆ ದೊಣ್ಣೆ, ಕಲ್ಲುಗಳನ್ನು ಬಳಸಿ ದಾಳಿ ನಡೆಸಿದ ಪರಿಣಾಮ ಅವರು ಗಂಭೀರವಾಗಿ ಗಾಯಗೊಂಡಿದ್ದರು.
ಅದೇ ದಿನ ಪ್ರಕರಣದ ಬಗ್ಗೆ ದಂಡಿನಶಿವರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಹನ್ನೊಂದು ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 143, 147, 148, 324, 149 ಹಾಗೂ 1989ರ ಎಸ್ಸಿ ಎಸ್ಟಿ (ದೌರ್ಜನ್ಯ ತಡೆ) ಕಾಯಿದೆಯ ಸೆಕ್ಷನ್ 3 (10)ರ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.
ಪ್ರಕರಣದಲ್ಲಿ ದೋಷಿ ಎಂದು ಪರಿಗಣಿಸಲಾಗಿರುವವರಲ್ಲಿ ಒಬ್ಬರಾದ ಸುದೀಪ್ ಎಂಬವರು ಸಂತ್ರಸ್ತರ ಪೈಕಿ ಲಕ್ಷ್ಮಮ್ಮ ಎಂಬವರ ವಿರುದ್ಧ ಸಿಟ್ಟಾಗಿದ್ದರು. ಸಿವಿಲ್ ಪ್ರಕರಣವೊಂದಕ್ಕೆ ಸಂಬಂಧಿಸಿ ಲಕ್ಷ್ಮಮ್ಮ ತಮ್ಮ ವಿರುದ್ಧ ಪೊಲೀಸ್ ದೂರು ನೀಡಲು ಮುಂದಾಗಿದ್ದೇ ಸುದೀಪ್ ಸಿಟ್ಟಿಗೆ ಕಾರಣವಾಗಿತ್ತು. ಇದೇ ಕಾರಣ ಮುಂದಿಟ್ಟುಕೊಂಡು ಗ್ರಾಮದ 2008ರ ಆಗಸ್ಟ್ 14ರಂದು ದಲಿತ ಕಾಲೋನಿಗೆ ನುಗ್ಗಿದ್ದ ಮೇಲ್ವರ್ಗದವರು, ಅವರ ಮೇಲೆ ಜಾತಿ ನಿಂದನೆ ಮಾಡಿ ಹಲ್ಲೆ ಮಾಡಿದ್ದರು.
ಪ್ರಕರಣ ಸಂಬಂಧ ತುಮಕೂರಿನ ನ್ಯಾಯಾಲಯದಲ್ಲಿ ವಿಚಾರಣೆ ನಡೆದು, 2011ರಲ್ಲಿ ಆರೋಪಿಗಳನ್ನು ಖುಲಾಸೆಗೊಳಿಸಲಾಗಿತ್ತು. ಬಳಿಕ ಸಂತ್ರಸ್ತೆ ಲಕ್ಷ್ಮಮ್ಮ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿದಾರರ ಪರ ವಕೀಲರಾದ ಕ್ಲಿಫ್ಟನ್ ಡಿ ರೊಝಾರಿಯೊ, ಮೈತ್ರೇಯಿ ಕೃಷ್ಣನ್ ವಾದಿಸಿದ್ದರು.