ಹೆಚ್ ಡಿ ಕೋಟೆ, ನವೆಂಬರ್ 14, 2025: ಗೂಡ್ಸ್ ಆಟೋ ಮತ್ತು ಮಿನಿ ಬಸ್ ನಡುವೆ ಮುಖಾಮುಖಿ ಡಿಕ್ಕಿಯಾಗಿ, ಓರ್ವ ಸಾವನ್ನಪ್ಪಿದ್ದು 6 ಮಂದಿಗೆ ಗಾಯಗಳಾಗಿರುವ ಘಟನೆ ಮೈಸೂರು ಜಿಲ್ಲೆ ಹೆಚ್ ಡಿ ಕೋಟೆ ತಾಲೂಕಿನ ಟೈಗರ್ ಬ್ಲಾಕ್ ಬಳಿ ಜರುಗಿದೆ.
ಘಟನೆಯಲ್ಲಿ ಗೂಡ್ಸ್ ಆಟೋ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದರೆ, 6 ಕಾರ್ಮಿಕರಿಗೆ ಗಂಭೀರ ಗಾಯಗಳಾಗಿವೆ. ಗೂಡ್ಸ್ ಆಟೋ ಚಾಲಕ ಗುರುಸ್ವಾಮಿ ಮೃತ ದುರ್ದೈವಿ. ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ನಾಗಮ್ಮ, ಕಿರಣ, ಶಿಲ್ಪ ಮತ್ತು ಕೆ ಆರ್ ಎಸ್ ಸಮೀಪದ ಬಸವನಪುರ ಗ್ರಾಮದ ಲಕ್ಷ್ಮಿ, ಅನು ಮತ್ತೊಬ್ಬರು ಸೇರಿದಂತೆ 6 ಮಂದಿಗೆ ಗಾಯಗಳಾಗಿವೆ. ಗುರುಸ್ವಾಮಿ ಮೇಟಿಕುಪ್ಪೆ ಪ್ರಾಥಮಿಕ ಸಹಕಾರ ಸಂಘದ ಅಧ್ಯಕ್ಷರಾಗಿದ್ದರು ಎಂದು ತಿಳಿದುಬಂದಿದೆ.
ಶುಂಠಿ ಬಿಡಿಸುವ ಕೆಲಸ ಮುಗಿಸಿಕೊಂಡು ಕಾರ್ಮಿಕರು ಬರುತ್ತಿದ್ದ ಗೂಡ್ಸ್ ಆಟೋ ಮತ್ತು ಮಿನಿಬಸ್ ನಡುವೆ ಅಪಘಾತ ಸಂಭವಿಸಿದ ವೇಳೆ ಘಟನಾ ಸ್ಥಳದಿಂದ ಪುಟಾಣಿ ಮಗುವನ್ನು ರಕ್ಷಿಸಿದ ಇನ್ಸ್ಪೆಕ್ಟರ್ ಗಂಗಾಧರ್, ಪೊಲೀಸ್ ವಾಹನದಲ್ಲಿ ಮಗುವನ್ನು ಆಸ್ಪತ್ರೆಗೆ ಸ್ಥಳಾಂತರ ಮಾಡಿದ್ದಾರೆ. ಹಾಗೂ ಗಾಯಾಳುಗಳನ್ನು ಕೂಡ ಹೆಚ್ ಡಿ ಕೋಟೆ ಸಾರ್ವಜನಿಕ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿದ್ದು, ಹೆಚ್ ಡಿ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
