ಮೈಸೂರು , ಏಪ್ರಿಲ್ 16, 2025 : ಜಾತಿಗಣತಿ ವರದಿ ಬಿಡುಗಡೆ ವಿಚಾರ ರಾಜ್ಯದಾದ್ಯಂತ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಈ ಹಿನ್ನೆಲೆ ಇಂದು ಮೈಸೂರಿನಲ್ಲಿ ಜಿಲ್ಲಾ ಒಕ್ಕಲಿಗರ ಸಂಘದ ವತಿಯಿಂದ ಸುದ್ದಿಗೋಷ್ಠಿ ನಡೆಸಿ ಜಾತಿಗಣತಿ ವರದಿ ಬಿಡುಗಡೆಗೆ ತೀವ್ರ ವಿರೋಧ ವ್ಯಕ್ತಪಡಿಸಲಾಯಿತು.

ಮೈಸೂರು ಜಿಲ್ಲಾ ಒಕ್ಕಲಿಗ ಸಂಘದ ಜಿಲ್ಲಾಧ್ಯಕ್ಷ ಮರಿಸ್ವಾಮಿ ನೇತೃತ್ವದಲ್ಲಿ ಮೈಸೂರಿನ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸುವ ಮೂಲಕ ಜಾತಿಗಣತಿ ವರದಿ ಬಿಡುಗಡೆಗೆ ವಿರೋಧ ವ್ಯಕ್ತಪಡಿಸಿದರು. 2015ರಲ್ಲಿ ಅಂದಿನ ಸರ್ಕಾರ ಜಾತಿಗಣತಿಯನ್ನು ವೈಜ್ಞಾನಿಕವಾಗಿ ನಡೆಸಿಲ್ಲ.ಕೇವಲ ಯಾವುದೋ ಒಂದು ಎಸಿ ರೂಮಿನಲ್ಲಿ ಕುಳಿತು ತಯಾರಿಸಿರುವ ವರದಿ ಇದಾಗಿದೆ.1987ರ ಚಿನ್ನಪ್ಪರೆಡ್ಡಿ ಆಯೋಗದ ಪ್ರಕಾರ ಅಂದೇ ಒಕ್ಕಲಿಗರು ಸುಮಾರು 51 ಲಕ್ಷ ಇದಾರೆ ಎಂದು ವರದಿ ಹೇಳಿದೆ.ಅದಾದ ಬಳಿಕ 1991ರ ಸಮೀಕ್ಷೆ ಪ್ರಕಾರ ರಾಜ್ಯದಲ್ಲಿ ಸುಮಾರು 55 ಲಕ್ಷ ಇದ್ದಾರೆ ಎಂದು ಸಮೀಕ್ಷೆ ಹೇಳುತ್ತದೆ.ಪ್ರಸ್ತುತ ರಾಜ್ಯದಲ್ಲಿ ಒಕ್ಕಲಿಗರ ಸಂಖ್ಯೆ ಕೇವಲ 61 ಲಕ್ಷ ಎಂದು ಅಂಕಿ ಅಂಶ ಕೊಟ್ಟಿದ್ದಾರೆ.ಹಾಗಾದರೆ ಒಕ್ಕಲಿಗರ ಸಂಖ್ಯೆ 34 ವರ್ಷಗಳಲ್ಲಿ ಕೇವಲ ಐದಾರು ಲಕ್ಷ ಮಾತ್ರ ಹೆಚ್ಚಳವಾಗಿದೆಯಾ.?ಸರಿಯಾಗಿ ಸಮೀಕ್ಷೆ ನಡೆಸಿದರೆ 90 ಲಕ್ಷದಿಂದ 1 ಕೋಟಿಯಷ್ಟು ಒಕ್ಕಲಿಗರ ಜನಸಂಖ್ಯೆ ಇದೆ.ರಾಜ್ಯ ಕಾಂಗ್ರೆಸ್ ಸರ್ಕಾರ ತಪ್ಪು ಅಂಕಿ ಅಂಶಗಳನ್ನು ನೀಡಿ ಒಕ್ಕಲಿಗರನ್ನು ಹತ್ತಿಕ್ಕುವ, ತುಳಿಯುವ ಕೆಲಸ ಮಾಡುತ್ತಿದೆ.ಒಕ್ಕಲಿಗ, ಲಿಂಗಾಯತ ಸಮುದಾಯಗಳನ್ನು ರಾಜಕೀಯವಾಗಿ ತುಳಿಯುವ ಕೆಲಸವನ್ನು ರಾಜ್ಯ ಸರ್ಕಾರ ಮಾಡುತ್ತಿದೆ.ಜಾತಿಗಣತಿಗೆ ನಮ್ಮ ವಿರೋಧ ಇಲ್ಲ, ಆದರೆ ವೈಜ್ಞಾನಿಕವಾಗಿ ಜಾತಿಗಣತಿ ನಡೆಯಲಿ.ಈಗ ಬಿಡುಗಡೆಗೆ ಸಿದ್ದವಾಗಿರುವ ಜಾತಿ ಗಣತಿ ವರದಿಯನ್ನು ತೀವ್ರವಾಗಿ ವಿರೋಧಿಸುತ್ತೇವೆ.ಈ ಬಗ್ಗೆ ರಾಜ್ಯ ಸರ್ಕಾರ ಎಚ್ಚೆತ್ತುಕೊಳ್ಳಬೇಕು.ಇಲ್ಲದಿದ್ದರೆ ಅದರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಮೈಸೂರು ಜಿಲ್ಲಾ ಒಕ್ಕಲಿಗರ ಸಂಘದ ವತಿಯಿಂದ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಲಾಯ್ತು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಸಿ ಮರಿಸ್ವಾಮಿ, ಉಪಾಧ್ಯಕ್ಷ ಆರ್ ರವಿಕುಮಾರ್, ಪ್ರಧಾನ ಕಾರ್ಯದರ್ಶಿ ಚೇತನ್, ನಿರ್ದೇಶಕರಾದ ಎಂ ಕೆ ಮಿರ್ಲೇ ಶ್ರೀನಿವಾಸ ಗೌಡ, ಸುಶೀಲಾ ನಂಜಪ್ಪ, ರವಿ, ಕೆ ಪಿ ನಾಗಣ್ಣ, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಎಂ ಬಿ ಮಂಜುಗೌಡ ಮೊದಲಾದವರು ಭಾಗಿಯಾಗಿದ್ದರು.
