ನೇಪಾಳದಲ್ಲಿ ಶುಕ್ರವಾರ ತಡರಾತ್ರಿ ಪ್ರಬಲ ಭೂಕಂಪವಾಗಿದ್ದು, ಕನಿಷ್ಠ 129 ಜನ ಬಲಿಯಾಗಿದ್ದಾರೆ ಎಂದು ವರದಿಯಾಗಿದೆ. ಅಲ್ಲದೆ, 140ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿದ್ದು, ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 6.4 ತೀವ್ರತೆ ದಾಖಲಾಗಿದೆ. ಇನ್ನು, ಸಾವಿನ ಸಂಖ್ಯೆ ಹೆಚ್ಚಾಗುವ ನಿರೀಕ್ಷೆಯಿದೆ ಎಂದು ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಘಟನೆಯಲ್ಲಿ ಹಲವು ಮನೆಗಳು ಹಾಗೂ ಕಟ್ಟಡಗಳು ಕುಸಿದಿದ್ದು, ಹಲವು ಬಿಲ್ಡಿಂಗ್ಗಳಿಗೆ ಹಾನಿಯಾಗಿದೆ. ತಡರಾತ್ರಿ ಭೂಕಂಪ ಸಂಭವಿಸಿರೋದರಿಂದ ಕತ್ತಲಲ್ಲಿ ಅವಶೇಷಗಳನ್ನು ಹೊರತೆಗೆಯಲಾಗಿದ್ದು, ಕುಸಿದ ಮನೆಗಳು ಮತ್ತು ಕಟ್ಟಡಗಳ ಅವಶೇಷಗಳಲ್ಲಿ ಬದುಕುಳಿದವರನ್ನು ಹುಡುಕುತ್ತಿದ್ದಾರೆ.
ಇನ್ನೊಂದೆಡೆ, ಭೂಕಂಪದ ಕಂಪನಗಳು 500 ಕಿಲೋಮೀಟರ್ಗಳಷ್ಟು ದೂರದಲ್ಲಿರುವ ನವದೆಹಲಿಯನ್ನು ಸಹ ತಲುಪಿದೆ. ರಾಷ್ಟ್ರ ರಾಜಧಾನಿ ದೆಹಲಿ – ಎನ್ಸಿಆರ್ ಸೇರಿ ಉತ್ತರ ಭಾರತದ ಹಲವೆಡೆ ಭೂಕಂಪದ ಅನುಭವವಾಗಿದ್ದು, ನಿದ್ರೆಯಲ್ಲಿದ್ದ ಜನತೆ ಗಾಬರಿಯಿಂದ ಎದ್ದು ಮನೆಯಿಂದ ಹೊರಬಂದಿದ್ದಾರೆ.
ಗೌರವಾನ್ವಿತ ಪ್ರಧಾನ ಮಂತ್ರಿ ಪುಷ್ಪ ಕಮಲ್ ದಹಲ್ “ಪ್ರಚಂಡ” ಅವರು ಶುಕ್ರವಾರ ರಾತ್ರಿ 11:47 ಕ್ಕೆ ಜಾಜರಕೋಟ್ನ ರಾಮಿದಂಡಾದಲ್ಲಿ ಭೂಕಂಪದಿಂದ ಉಂಟಾದ ಮಾನವ ಮತ್ತು ವಸ್ತು ಹಾನಿಯ ಬಗ್ಗೆ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ ಮತ್ತು ಗಾಯಗೊಂಡವರ ತಕ್ಷಣದ ರಕ್ಷಣೆ ಮತ್ತು ಪರಿಹಾರಕ್ಕಾಗಿ ಎಲ್ಲಾ 3 ಭದ್ರತಾ ಏಜೆನ್ಸಿಗಳನ್ನು ಸಜ್ಜುಗೊಳಿಸಿದ್ದಾರೆ ಎಂದು ನೇಪಾಳ ಪಿಎಂಒ ಎಕ್ಸ್ನಲ್ಲಿ (ಈ ಹಿಂದಿನ ಟ್ವಿಟ್ಟರ್) ಪೋಸ್ಟ್ ಮಾಡಿದೆ.
- ಜಾಹೀರಾತು -
2015ರಲ್ಲಿ ನೇಪಾಳದಲ್ಲಿ 7.8 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿ ವ್ಯಾಪಕ ವಿನಾಶಕ್ಕೆ ಕಾರಣವಾಗಿತ್ತು. ಆ ವೇಳೆ ಭೂಕಂಪವು ಸುಮಾರು 9,000 ಜನರನ್ನು ಬಲಿ ತೆಗೆದುಕೊಂಡಿದ್ದು, 22,000 ಕ್ಕೂ ಹೆಚ್ಚು ಜನರು ಗಾಯಗೊಂಡರು. ಅಲ್ಲದೆ, 5 ಲಕ್ಷಕ್ಕೂ ಹೆಚ್ಚು ಮನೆಗಳಳು ನಾಶವಾಗಿದ್ದು ಮತ್ತು ಸುಮಾರು 8,000 ಶಾಲೆಗಳು ಹಾನಿಗೊಳಗಾಗಿತ್ತು.