ಪ್ರಧಾನಿ ನರೇಂದ್ರ ಮೋದಿ ಇಂದು ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಬೆಳಗ್ಗೆ ಬೆಂಗಳೂರಿನ ಹೆಚ್ಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸು ಮೋದಿ, ಹಿಂದಸ್ಥಾನ ಏರೋನಾಟಿಕ್ಸ್ ಲಿಮಿಟೆಡ್(HAL) ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಹೆಚ್ಎಎಲ್ ಉತ್ಪಾದನಾ ಘಟಕದ ಪ್ರಗತಿ ಪರಿಶೀಲನೆ ನಡೆಸಲಿದ್ದಾರೆ. ಇಷ್ಟೇ ಅಲ್ಲ ತೇಜಸ್ ಯುದ್ಧ ವಿಮಾನದ ಉತ್ಪಾದನಾ ಘಟಕದ ಪ್ರಗತಿಯನ್ನೂ ಪರಿಶೀಲನೆ ನಡೆಸಲಿದ್ದಾರೆ. ಹೆಚ್ಎಎಲ್ ಕಾಂಪ್ಲೆಕ್ಸ್ನಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಮೋದಿ ಭಾಗವಹಿಸಲಿದ್ದಾರೆ.
ಮಧ್ಯಾಹ್ನ 12.15ಕ್ಕೆ ಹೆಚ್ಎಎಲ್ ವಿಮಾನ ನಿಲ್ದಾಣದ ಮೂಲಕ ತೆಲಂಗಾಣದ ದಿಂಡುಗಲ್ ವಿಮಾನ ನಿಲ್ದಾಣಕ್ಕೆ ಪ್ರಯಾಣ ಬೆಳೆಸಲಿದ್ದಾರೆ. 1.15ಕ್ಕೆ ದಿಂಡುಗಲ್ ವಿಮಾನ ನಿಲ್ದಾಣದಲ್ಲಿ ಮೋದಿ ಇಳಿಯಲಿದ್ದಾರೆ. ಬಳಿಕ ತೆಲಂಗಾಣ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳಲಿದ್ದಾರೆ.
ಹೆಚ್ಎಎಲ್ ಕಾರ್ಯಕ್ರಮದಲ್ಲಿ ಕೆಲ ಮಹತ್ವದ ಒಪ್ಪಂದ ಘೋಷಣೆಯಾಗಲಿದೆ. ಲಘು ಯುದ್ದ ವಿಮಾನ ಖರೀದಿಸಿ ಹಾಗೂ ಉತ್ಪಾದನಾ ಒಪ್ಪಂದ ಸೇರಿದಂತೆ ಹಲವು ಮಹತ್ವದ ಒಪ್ಪಂದದ ಕುರಿತ ಮೋದಿ ಘೋಷಿಸುವ ಸಾಧ್ಯತೆ ಇದೆ. ಫ್ರಾನ್ಸ್ನ ಸ್ಯಾಫ್ರನ್ ಕಂಪನಿ ಜೊತೆ ಹೆಚ್ಎಎಲ್ ಜಂಟಿಯಾಗಿ ಲಘು ಯುದ್ಧ ವಿಮಾನ ಉತ್ಪಾದನೆಯಲ್ಲಿ ತೊಡಗಿದೆ. ಸ್ಯಾಫ್ರನ್ ಕಂಪನಿಯಿಂದ ಈಗಾಗಲೇ ಹಲವು ಒಪ್ಪಂದ ಮಾಡಲಾಗಿದೆ. ಈ ನಿಟ್ಟಿನಲ್ಲಿ ಕೆಲ ಒಪ್ಪಂದಗಳು ಮೋದಿ ಭೇಟಿ ವೇಳೆ ಘೋಷಣೆಯಾಗುವ ಸಾಧ್ಯತೆ ಇದೆ.
ಅಕ್ಟೋಬರ್ ತಿಂಗಳಲ್ಲಿ ಸಾಫ್ರನ್ ಏರ್ಕ್ರಾಫ್ಟ್ ಎಂಜಿನ್ಸ್ ಕಂಪನಿ ಜೊತೆ ಎಚ್ಎಎಲ್ ಒಪ್ಪಂದ ಮಾಡಿಕೊಂಡಿದೆ. ಎಚ್ಎಎಲ್ ಬೆಂಗಳೂರು ಘಟಕದ ಸಿಇಒ ಮಿಹಿರ್ ಕಾಂತಿ ಮಿಶ್ರಾ ಮತ್ತು ಸಾಫ್ರನ್ ಏರ್ಕ್ರಾಫ್ಟ್ ಎಂಜಿನ್ಸ್ನ ಹಿರಿಯ ಉಪಾಧ್ಯಕ್ಷ (ಖರೀದಿ) ಡಾಮಿನಿಕ್ ಡ್ಯುಪ್ಯು ಅವರು ಬೆಂಗಳೂರಿನ ಎಚ್ಎಎಲ್ ಕಚೇರಿಯಲ್ಲಿ ಒಪ್ಪಂದಕ್ಕೆ ಸಹಿ ಹಾಕಿದ್ದರು. ಫೌಂಡ್ರಿ ಮತ್ತು ಫೋರ್ಜ್ ಘಟಕ’ದಲ್ಲಿ ಏರ್ಬಸ್ ಎ320 ಮತ್ತು ಬೊಯಿಂಗ್ 737 ಮ್ಯಾಕ್ಸ್ ವಿಮಾನಗಳಿಗೆ ಬಳಸುವ ಎಂಜಿನ್ ಬಿಡಿಭಾಗ ಉತ್ಪಾದಿಸಲಾಗುತ್ತದೆ.ಜಂಟಿ ಸಹಭಾಗಿತ್ವದಲ್ಲಿ ಎಚ್ಎಎಲ್ನಲ್ಲಿ ಈಗಾಗಲೇ ಏರೋ ಎಂಜಿನ್ ಪೈಪ್ಗಳನ್ನು ಉತ್ಪಾದಿಸಲಾಗುತ್ತಿದೆ.
ಸೆಪ್ಟೆಂಬರ್ ತಿಂಗಳಲ್ಲಿ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ನಿಂದ (ಎಚ್ಎಎಲ್) ಭಾರತದಲ್ಲಿ ತಯಾರಿಸಲ್ಪಡುವ 12 ಸುಖೋಯ್-30 ಎಂಕೆಐ ವಿಮಾನಗಳು ಸೇರಿದಂತೆ 45 ಸಾವಿರ ಕೋಟಿ ರು. ಮೌಲ್ಯದ ದೇಶೀ ನಿರ್ಮಿತ ರಕ್ಷಣಾ ಸಲಕರಣೆಗಳ ಖರೀದಿಗೆ ಕೇಂದ್ರ ಸರ್ಕಾರ ಶುಕ್ರವಾರ ಅನುಮೋದನೆ ನೀಡಿತ್ತು.
