
ಪ್ರತಿನಿಧಿ ವರದಿ ಚಾಮರಾಜನಗರ
ಲೋಕಸಭಾ ಚುನಾವಣೆ-2024ರ ಅಂಗವಾಗಿ ನಗರದಲ್ಲಿ ಸರ್ಕಾರಿ ಅಧಿಕಾರಿ, ನೌಕರರಿಗೆ ಮತದಾನ ಜಾಗೃತಿ ಮೂಡಿಸಲು ಜಿಲ್ಲೆಯ ಕರ್ತವ್ಯನಿರತ 9400 ಸರ್ಕಾರಿ ನೌಕರರಿಗೆ ‘ಅಂಚೆ ಪತ್ರ ಅಭಿಯಾನ’ವನ್ನು (ಪೋಸ್ಟ್ ಕಾರ್ಡ್) ನಡೆಸಲಾಯಿತು.
ನಗರದ ಜಿಲ್ಲಾಡಳಿತ ಭವನದ ಒಳಾವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಮತದಾರರಲ್ಲಿ ಚುನಾವಣೆ ಮತ್ತು ಮತದಾನ ಪ್ರಕ್ರಿಯೆಗಳಿಗೆ ಸಂಬಂಧಿಸಿದಂತೆ ಜಾಗೃತಿ ಮೂಡಿಸಲು ಅಂಚೆ ಪತ್ರ ಅಭಿಯಾನ ನಡೆಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಚುನಾವಣಾಧಿಕಾರಿ, ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರ ಅಂಕಿತದೊಂದಿಗೆ ಜಿಲ್ಲೆಯ ಎಲ್ಲಾ ಸರ್ಕಾರಿ ನೌಕರರಿಗೆ ಕಡ್ಡಾಯವಾಗಿ ಮತದಾನ ಮಾಡಬೇಕೆಂದು ಹಾಗೂ ನೈತಿಕ ಮತದಾನ ಮಾಡುವಂತೆ ಮನವಿ ಮಾಡಿರುವ ಅಂಚೆ ಪತ್ರವನ್ನು ಅನಾವರಣಗೊಳಿಸಲಾಯಿತು.
ಕರ್ನಾಟಕದಲ್ಲಿ ಏ.26 ಮತ್ತು ಮೇ 7 ರಂದು ಎರಡು ಹಂತದಲ್ಲಿ ಚುನಾವಣೆ ನಡೆಯುತ್ತಿದ್ದು, ಒಂದಿಲ್ಲೊಂದು ರೀತಿಯ ಚುನಾವಣಾ ಜವಾಬ್ದಾರಿ ನಿರ್ವಹಿಸುವ ಸರ್ಕಾರಿ ನೌಕರರಾದ ನಾವು ಕರ್ತವ್ಯದ ನೆಪದಲ್ಲಿ ಮತ ಹಾಕುವುದನ್ನು ಮರೆಯಬಾರದು. ಈ ಬಾರಿ ಜಿಲ್ಲೆಯ ಎಲ್ಲ ಸರ್ಕಾರಿ ನೌಕರರು ಹಾಗೂ ತಮ್ಮ ಕುಟುಂಬದ ಅರ್ಹ ಮತದಾರರು ಕೂಡ ಶೇ.100 ರಷ್ಟು ಮತದಾನ ಮಾಡುತ್ತೀರೆಂದು ನಂಬಿಕೆ ನಮ್ಮದಾಗಿದೆ. ‘ಚುನಾವಣಾ ಪರ್ವ-ದೇಶದ ಗರ್ವ’ ಬನ್ನಿ ಸುಭದ್ರ ಚಾ.ನಗರ ನಿರ್ಮಾಣ ಮಾಡೋಣ” ಎಂಬ ಸಂದೇಶ ಅಂಚೆ ಪತ್ರದಲ್ಲಿದೆ.
ಇದೇ ವೇಳೆ ಮಾತನಾಡಿದ ಜಿಲ್ಲಾ ಸ್ವೀಪ್ ಸಮಿತಿಯ ಆನಂದ್ ಪ್ರಕಾಶ್, ಮೀನಾ, ಎಲ್ಲ ಸರ್ಕಾರಿ ನೌಕರರು ತಪ್ಪದೆ ಮತದಾನ ಮಾಡಬೇಕೆಂಬುದೇ ಅಂಚೆ ಪತ್ರ ಅಭಿಯಾನದ ಉದ್ದೇಶವಾಗಿದೆ ಎಂದರು. ಜಿಲ್ಲಾ ಚುನಾವಣಾಧಿಕಾರಿ ಶಿಲ್ಪಾನಾಗ್, ಜಿಲ್ಲಾ ಸ್ವೀಪ್ ನೋಡಲ್ ಅಧಿಕಾರಿ ಪಿ.ಲಕ್ಷ್ಮೀ, ಜಿಲ್ಲೆಯ ಎಲ್ಲ ತಾಲೂಕು ಪಂಚಾಯತಿಗಳ ಇಒ ಗಳು, ಮನರೇಗಾ ಸಹಾಯಕ ನಿರ್ದೇಶಕರು, ಪಿಡಿಒಗಳು, ಮನರೇಗಾ ಯೋಜನೆಯ ತಾಲೂಕು ಸಂಯೋಜಕರು, ಅಧಿಕಾರಿಗಳು ಇತರರು ಅಭಿಯಾನದಲ್ಲಿ ಪಾಲ್ಗೊಂಡಿದ್ದರು. ಜಿಲ್ಲಾಡಳಿತ ಭವನದ ಒಳಾವರಣದಲ್ಲಿ ಶಾಯಿ ಹಾಕಿದ ಕೈ ಬೆರಳು ಹಾಗೂ ಸ್ವೀಪ್ ಅಕ್ಷರಗಳ ಚಿತ್ರವನ್ನು ಅಂಚೆ ಪತ್ರಗಳ ಮೂಲಕವೇ ಚಿತ್ರಿಸಿದ್ದು ಅಭಿಯಾನದ ವಿಶೇಷವಾಗಿತ್ತು.
3ಸಿಎಚ್ಎನ್.1:
ಚಿತ್ರವಿದೆ
