‘ಸಹೋದರಿ ನೇಹಾ ಹಿರೇಮಠ್ ಅವರ ಹತ್ಯೆ ಅತ್ಯಂತ ಹೀನ ಕೃತ್ಯ. ಕ್ಯಾಂಪಸ್ನಲ್ಲಿ ಹತ್ಯೆ ನಿಜಕ್ಕೂ ಆತಂಕ ಮೂಡಿಸುತ್ತದೆ. ಸರ್ಕಾರ ಶೀಘ್ರದಲ್ಲೇ ತ್ವರಿತಗತಿ ನ್ಯಾಯಾಲಯದಲ್ಲಿ ಈ ಕೇಸ್ ತೀರ್ಪು ಬರಲು ವರ್ಗಾಯಿಸಬೇಕು. ಇದನ್ನು ಎಲ್ಲಾ ಆಯಾಮದಲ್ಲೂ ತನಿಖೆ ನಡೆಸಿ ಅಪರಾಧಿಗೆ ಅತ್ಯುಗ್ರ ಶಿಕ್ಷೆ ನೀಡುವಂತಾಗಬೇಕು. ಜೈ ಆಂಜನೇಯ’ ಎಂದು ನಟ ಧ್ರುವ ಸರ್ಜಾ ಅವರು ‘ಎಕ್ಸ್’ (ಟ್ವಿಟರ್) ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಆ ಮೂಲಕ ಅವರು ನೇಹಾ ಹಿರೇಮಠ್ ಸಾವಿಗೆ ನ್ಯಾಯ ಸಿಗಬೇಕು ಎಂದು ಧ್ವನಿ ಎತ್ತಿದ್ದಾರೆ.
ಘಟನೆಯ ಕುರಿತಂತೆ ಧ್ರುವ ಸರ್ಜಾ ಪೋಸ್ಟ್ ಮಾಡಿರುವುದಕ್ಕೆ ಅಭಿಮಾನಿಗಳು ಪ್ರಶಂಸೆ ಸೂಚಿಸಿದ್ದಾರೆ. ‘ತಮ್ಮ ಸಾಮಾಜಿಕ ಕಾಳಜಿಗೆ ಧನ್ಯವಾದಗಳು. ಅಪರಾಧಿಗೆ ಇನ್ನೂ ಜೀವಂತವಾಗಿ ಇಟ್ಟಿರುವುದೇ ಒಂದು ವಿಪರ್ಯಾಸ’ ಎಂದು ನೆಟ್ಟಿಗರೊಬ್ಬರು ಕಮೆಂಟ್ ಮಾಡಿದ್ದಾರೆ. ‘ಕೊಲೆ ಮಾಡಿದ್ದಕ್ಕೆ ವಿಡಿಯೋ ಇದೆ. ಸಾಕ್ಷಿ ಇನ್ನೇನು ಬೇಕು’ ಎಂದು ‘ಎಕ್ಸ್’ ಬಳಕೆದಾರರೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
