ಅರ್ಧಕ್ಕೆ ನಿಂತ ಶಾಲೆಯ ಶೌಚಾಲಯ ಕಟ್ಟಡ ಕಾಮಗಾರಿ । ತಿರುಗೆ ನೋಡದ ಅಧಿಕಾರಿಗಳು । ಸೂಕ್ತ ಕ್ರಮ ಗ್ರಾಮಸ್ಥರ ಆಗ್ರಹ
ಸುರೇಶ್ ಅಜ್ಜೀಪುರ ಹನೂರು
ನಿರುಪಯುಕ್ತ ಕುಡಿಯುವ ನೀರಿನ ತೊಂಬೆಗಳು, ಎತ್ತ ನೋಡಿದರೂ ಕಸದ ರಾಶಿ, ಹೂಳು ತುಂಬಿದ ಚರಂಡಿಗಳು, ಅರ್ಧಕ್ಕೆ ನಿಂತ ಶಾಲೆಯ ಶೌಚಾಲಯ ಕಟ್ಟಡ ಕಾಮಗಾರಿಗಳು ಇದು ಕೂಡಲೂರು ಗ್ರಾಮದ ವಾಸ್ತವ ಪರಿಸ್ಥಿತಿ. ತಾಲೂಕಿನ ಕೂಡಲೂರು ಗ್ರಾಮವು ಗಡಿ ಗ್ರಾಮವಾಗಿದ್ದು ಹಲವು ಮೂಲ ಸೌಲಭ್ಯ ಗಳಿಂದ ವಂಚಿತವಾಗಿದೆ.
ನಿರುಪಯುಕ್ತ ತೊಂಬೆಗಳು: ಕುಡಿಯುವ ನೀರಿಗಾಗಿ ನಿರ್ಮಿಸಿದ್ದ ಕುಡಿಯುವ ನೀರಿನ ತೊಂಬೆಗಳು ಸದ್ಯ ನೀರಿಲ್ಲದೆ ಬಣಗುಡುತ್ತ ನಿರುಪಯುಕ್ತವಾಗಿ ನಿಂತಿದೆ. ಇದರಿಂದ ಅಕ್ಕ-ಪಕ್ಕದ ಮನೆಯರಿಗೆ ನೀರು ಸಿಗದೇ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ ನೀರು ಸರಬರಾಜು ಆಗದ ಪರಿಣಾಮ ಕುಡಿಯುವ ನೀರಿನ ತೊಂಬೆಯ ಸುತ್ತಲೂ ಕಸಕಡ್ಡಿ ಎಸೆಯುತ್ತಿದ್ದಾರೆ. ಮುಂದಾದರು ಸಂಬಂಧ ಪಟ್ಟ ಅಧಿಕಾರಿಗಳು ಜನಪ್ರತಿನಿದಿನಗಳು ಇತ್ತ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಕಸದ ರಾಶಿ: ಗ್ರಾಮ ಪಂಚಾಯಿತಿ ವತಿಯಿಂದ ಕಸ ಸಂಗ್ರಹಣೆಗಾಗಿ ಕಸದ ತೊಟ್ಟಿಗಳನ್ನು ಅಳವಡಿಸದೆ ಇರುವ ಕಾರಣ ಕಸವನ್ನು ಜನರು ಎಲ್ಲೆಂದರಲ್ಲಿ ಬಿಸಾಡುವ ಪದ್ಧತಿ ನಿರ್ಮಾಣವಾಗಿದೆ. ಸ್ಥಳೀಯರು ಕಸದ ರಾಶಿಯಿಂದಾಗಿ ಅಲ್ಲಿ ಸಾಂಕ್ರಮಿಕ ರೋಗ ಹರಡುವ ಭೀತಿ ಸಹ ಎದುರಾಗಿದೆ. ಹಾಗಾಗಿ ಕಸ ಸಂಗ್ರಹಣೆ ಮಾಡಲು ಕಸದ ತೊಟ್ಟಿ ಗಳನ್ನು ನಿರ್ಮಾಣ ಮಾಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಮುಚ್ಚಿರುವ ಚರಂಡಿಗಳು: ಕೂಡಲೂರು ಹೂಗ್ಯ ಗ್ರಾಮದ ಮುಖ್ಯ ರಸ್ತೆಯಲ್ಲಿರುವಂತಹ ಚರಂಡಿಗಳು ಕಸಗಳಿಂದ ಮುಚ್ಚಿದ್ದು ನೀರು ಸರಾಗವಾಗಿ ಹರಿಯಲಾಗದ ಪರಿಸ್ಥಿತಿ ಜತೆಗೆ ಇತ್ತೀಚಿಗೆ ಎಲ್ಲೆಡೆ ವೈರಲ್ ಆಗುತ್ತಿರುವ ಡೆಂಘೆ ಬಗ್ಗೆ ಗೊತ್ತಿದ್ದೂ ಸಹ ಚರಂಡಿಗಳು ಶುಚಿಗೊಳಿಸುವ ಕೆಲಸಕ್ಕೆ ಕೈ ಹಾಕುತ್ತಿಲ್ಲ. ಮುಚ್ಚಿರುವ ಕಡೆ ತೆಗೆಸಿ ಹೂಳು ತುಂಬಿರುವ ಕಡೆ ಹೂಳು ತೆಗೆಸಿ ನೀರು ನಿಲ್ಲದಂತೆ ಮಾಡಬೇಕು ಎನ್ನುತ್ತಾರೆ ಸ್ಥಳೀಯರು.
ಪೂರ್ಣಗೊಳ್ಳದ ಜಲಜೀವನ್ ಮಿಷನ್: ಕೂಡಲೂರು ಗ್ರಾಮದಲ್ಲಿ ಜಲ ಜೀವನ್ ಮಿಷನ್ ಕಾಮಗಾರಿ ಮುಗಿದಿದ್ದರೂ ಸಹ ಇನ್ನು ನೀರು ಬಾರದೆ ಜನ ಪರಿತಪಿಸುತ್ತಿದ್ದಾರೆ. ನಲ್ಲಿಗಳ ಅಳವಡಿಕೆ ಮುಗಿದಿದ್ದರೂ ಸಹ ನೀರು ಮಾತ್ರ ಇನ್ನು ಬಾರದಾಗಿದೆ.
ಅರ್ಧಕ್ಕೆ ನಿಂತ ಕಾಮಗಾರಿಗಳು: ಕೂಡಲೂರು ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶೌಚಾಲಯ ಹಾಗೂ ಗೇಟ್ ಅಳವಡಿಕೆಯ ಕಾಮಗಾರಿ ನಡೆಯುತ್ತಿದೆ ಆದರೇ ಕಳೆದ ಎರಡು ತಿಂಗಳಿಂದ ಕಾಮಗಾರಿ ಅರ್ಧಕ್ಕೆ ನಿಂತಿದ್ದು ತುಂಬಾ ತೊಂದರೆಯಾಗಿದೆ ಜತೆಗೆ ಗೇಟ್ ಅಳವಡಿಸದೆ ಶಾಲಾ ಒಳಗಡೆ ಗಿಡಮರಗಳನ್ನು ಬೆಳೆಯಲು ಆಗದ ಪರಿಸ್ಥಿತಿ ನಿರ್ಮಾಣವಾಗಿದೆ ಜತೆಗೆ ಶೌಚಾಲಯ ಕಾಮಗಾರಿ ವಿಳಂಬಕ್ಕೆ ಕಾರಣ ತಿಳಿದು ಬಾರದೆ ಇತ್ತೀಚಿಗೆ ಬಿಸಿಲು ಮಳೆಗೆ ಅರ್ಧಕ್ಕೆ ನಿಂತ ಕಟ್ಟಡ ಮೈ ವೊಡ್ಡಿ ನಿಂತಿದ್ದು ತನ್ನ ಸತ್ವವನ್ನು ಕಳೆದುಕೊಳ್ಳುತ್ತಿದೆ ಹಾಗಾಗಿ ಸಂಬಂಧ ಪಟ್ಟ ಅಧಿಕಾರಿಗಳು ಜನಪ್ರತಿನಿದಿನಗಳು ಇತ್ತ ಗಮನಹರಿಸಿ ಸೂಕ್ತ ಕ್ರಮ ಕೈಗೊಂಡು ಆದಷ್ಟು ಬೇಗ ಮಕ್ಕಳ ಉಪಯೋಗಕ್ಕೆ ಬರಬೇಕು ಎಂದು ಪ್ರಜ್ಞಾವಂತ ನಾಗರಿಕರು ಆಗ್ರಹ ಮಾಡಿದ್ದಾರೆ.
ಕೂಡಲೂರು ಗ್ರಾಮದಲ್ಲಿ ಹಿಂದೆ ನಡೆದ ಕಾಮಗಾರಿಯಲ್ಲಿ ಕುಡಿಯುವ ನೀರಿನ ತೊಂಬೆಗಳಿಗೆ ಕನೆಕ್ಷನ್ ಸಹ ನೀಡಿಲ್ಲ ಇದರಿಂದ ಜನರಿಗೆ ತುಂಬಾ ತೊಂದರೆ ಜೊತೆಗೆ ನಿರುಪಯುಕ್ತವಾಗಿ ನಿಂತಿದೆ ಮುಂದಾದರು ಸಂಬಂಧ ಪಟ್ಟ ಅಧಿಕಾರಿಗಳು ಎಚ್ಛೆತ್ತು ಕ್ರಮ ಕೈಗೊಳ್ಳಬೇಕು.
– ಗ್ರಾಮಸ್ಥರು, ಕೂಡಲೂರು.
ಶಾಲೆಗಳಲ್ಲಿ ನಡೆಯುತ್ತಿರುವ ಕಾಮಗಾರಿಗಳು ಕೆಲವು ತಾಂತ್ರಿಕ ದೋಷದಿಂದಾಗಿ ನಿಂತಿತ್ತು ಇದೀಗ ಮತ್ತೆ ಕಾರ್ಯಗತವಾಗಿದ್ದು ಆದಷ್ಟು ಬೇಗ ಕಾಮಗಾರಿಗಳನ್ನು ಮುಗಿಸಿಕೊಡಲು ಕ್ರಮ ತೆಗೆದುಕೊಳ್ಳುತ್ತೇವೆ ಜತೆಗೆ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲು ಮುಂದಾಗುತ್ತೇವೆ.
– ಮುರುಗೇಶ್ವರಿ, ಅಧ್ಯಕ್ಷ ಹೂಗ್ಯ ಗ್ರಾಮ ಪಂಚಾಯಿತಿ
ಕೂಡಲೂರು ಗ್ರಾಮದಲ್ಲಿ ಅರ್ಧಕ್ಕೆ ನಿಂತಿರುವ ಕಾಮಗಾರಿ ಬಗ್ಗೆ ಆದಷ್ಟು ಬೇಗ ಮುಗಿಸಲು ಕ್ರಮ ತೆಗೆದುಕೊಳ್ಳುತ್ತೇವೆ ಜತೆಗೆ ಸ್ವಚ್ಛತೆಗೆ ಎಲ್ಲರ ಸಹಕಾರ ಪಡೆದು ಹೆಚ್ಚಿನ ಆದ್ಯತೆ ನೀಡುತ್ತೇವೆ.
– ಪುಷ್ಪಲತಾ, ಪಿಡಿಒ ಹೂಗ್ಯ ಗ್ರಾಮ ಪಂಚಾಯಿತಿ.
————–
ಚಿತ್ರ : ಕೂಡಲೂರು ಗ್ರಾಮದಲ್ಲಿ ನಿರುಪಯುಕ್ತವಾಗಿ ನಿಂತಿರುವ ಕುಡಿಯುವ ನೀರಿನ ತೊಂಬೆಗಳು.
ಚಿತ್ರ : ಕೂಡಲೂರು ಗ್ರಾಮದಲ್ಲಿ ಕಸದ ರಾಶಿ ಬಿದ್ದಿರುವುದು.
ಚಿತ್ರ : ಕೂಡಲೂರು ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಅರ್ಧಕ್ಕೆ ಶೌಚಾಲಯ ಕಟ್ಟಡ ನಿಂತ ಕಾಮಗಾರಿ.

