ನೂತನ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯ ।
ಅಜ್ಜಮಾಡ ರಮೇಶ್ ಕುಟ್ಟಪ್ಪ ಮಡಿಕೇರಿ
ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಹೆಸರು ಮತ್ತಷ್ಟು ಉತ್ತುಂಗಕ್ಕೆ ತರಲು ಸರ್ವ ರೀತಿಯಲ್ಲಿಯೂ ಶ್ರಮಿಸುತ್ತೇನೆಂದು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿ ನೇಮಕಗೊಂಡಿರುವ ಅಜ್ಜಿನಿಕಂಡ ಮಹೇಶ್ ನಾಚಯ್ಯ ಹೇಳಿದ್ದಾರೆ.
ಮೇಕೇರಿರ ಕಾರ್ಯಪ್ಪ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ೧೯೯೮ ರಲ್ಲಿ ಕೊಡವ ಸಾಹಿತ್ಯ ಅಕಾಡೆಮಿ ಸದಸ್ಯರಾಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದೇನೆ. ಅಕಾಡೆಮಿ ಮಾಡುತ್ತಾ ಬಂದಿರುವ ಕಾರ್ಯ ಚಟುವಟಿಕೆಗಳನ್ನು ಗಮನಿಸುತ್ತಾ ಬಂದಿದ್ದೇನೆ. ಅಕಾಡೆಮಿ ಇನ್ನೂ ಮಾಡಬೇಕಾದ ಕೆಲಸಗಳನ್ನು ನನ್ನ ಅವಧಿಯಲ್ಲಿ ಮಾಡುವುದಾಗಿ ಪ್ರತಿನಿಧಿ ಪತ್ರಿಕೆಯ ಪ್ರತಿನಿಧಿಗೆ ತಿಳಿಸಿದ್ದಾರೆ.
ಸಾಹಿತ್ಯ ಕ್ಷೇತ್ರದಲ್ಲಿ ಮಾಡಿದ ಸಾಧನೆ ಗುರುತಿಸಿ ಅಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡಿರುವುದು ತುಂಬಾ ಖುಷಿ ತಂದುಕೊಟ್ಟಿದೆ. ಅಧ್ಯಕ್ಷ ಸ್ಥಾನಕ್ಕೆ ನನ್ನ ಪ್ರಯತ್ನ ಇರಲಿಲ್ಲ. ನನ್ನ ಹೆಸರು ಯಾರು ಶಿಫಾರಸ್ಸು ಮಾಡಿದರೆಂದು ಗೊತ್ತಿಲ್ಲ. ಮಾಧ್ಯಮಗಳಲ್ಲಿ ಅಧ್ಯಕ್ಷ ಸ್ಥಾನಕ್ಕೆ ನನ್ನ ಹೆಸರು ಇದೇ ಎಂದು ವರದಿಯಾದ ಬಳಿಕ ನನ್ನ ಹೆಸರು ಕೂಡ ಪರಿಗಣಿಸುವವರು ಇದ್ದಾರೆಂಬ ಖುಷಿವುಂಟು ಮಾಡಿತ್ತೆಂದು ಹೇಳಿದ್ದಾರೆ.
ಕೊಡವ ಅಕಾಡೆಮಿ ಸದಸ್ಯ ಸ್ಥಾನಕ್ಕೆ ತುಂಬಾ ಆಕಾಂಕ್ಷಿಗಳಿದ್ದಾರೆಂಬ ಮಾಹಿತಿ ಇದೆ. ಲೋಕಸಭಾ ಚುನಾವಣಾ ನೀತಿ ಸಂಹಿತೆ ಮುಗಿದ ಬಳಿಕ ಸದಸ್ಯರನ್ನು ನೇಮಕ ಮಾಡುವ ಕೆಲಸವನ್ನು ಸರ್ಕಾರ ಮಾಡಲಿದೆ. ನಾನು ಅಧ್ಯಕ್ಷನಾಗಿ ಶೀಘ್ರ ಅಧಿಕಾರ ವಹಿಸಿಕೊಳ್ಳುತ್ತೇನೆ. ನೀತಿ ಸಂಹಿತೆ ಅವಧಿಯಲ್ಲಿ ಅಕಾಡೆಮಿಯ ಕಾರ್ಯ ಚಟುವಟಿಕೆಗೆ ಸಂಬಂಧಿಸಿದ್ದಂತೆ ರೂಪುರೇಷೆ ಸಿದ್ಧ ಪಡಿಸಿಕೊಳ್ಳುತ್ತೇನೆಂದು ಮಹೇಶ್ ನಾಚಯ್ಯ ಹೇಳಿದ್ದಾರೆ.
(ಚಿತ್ರ: ಮಹೇಶ್ ನಾಚಯ್ಯ)
======
ಪೈಪೋಟಿ ಗೆದ್ದ ಮಹೇಶ್
ಅಧ್ಯಕ್ಷ ಸ್ಥಾನಕ್ಕೆ ಏರ್ಪಟ್ಟ ಪ್ರಬಲ ಪೈಪೋಟಿ ನಡುವೆಯೂ ಮಹೇಶ್ ನಾಚಯ್ಯ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಕೊಡವ ಅಕಾಡೆಮಿಗೆ ಅಧ್ಯಕ್ಷ ಸ್ಥಾನಕ್ಕೆ ಮಾತ್ರ ನೇಮಕಗೊಂಡಿರು ವುದು ಮತ್ತೊಂದು ವಿಶೇಷ. ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಗೆ ಬಂದಿರುವುದರಿAದ ಜೂನ್ ಬಳಿಕವೇ ಅಕಾಡೆಮಿಗೆ
ಸದಸ್ಯರ ನೇಮಕಾತಿ ಆಗಲಿದೆ. ಅಲ್ಲಿಯವರೆಗೂ ಮಹೇಶ್ ನಾಚಯ್ಯ ಒಬ್ಬರೇ ಅಕಾಡೆಮಿ ಮುನ್ನಡೆಸಬೇಕಾಗಿದೆ.
ಕೊಡವ ಮಕ್ಕಡ ಕೂಟ ಅಧ್ಯಕ್ಷ ಬೊಳ್ಳಜೀರ ಬಿ. ಅಯ್ಯಪ್ಪ, ಕಾಂಗ್ರೆಸ್ ವಕ್ತಾರ ತೆನ್ನೀರ ಮೈನಾ ಅಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿಗಳಾಗಿದ್ದರು. ಅಧ್ಯಕ್ಷ ಸ್ಥಾನಕ್ಕಾಗಿ ತೀವ್ರ ಪ್ರಯತ್ನವೂ ನಡೆಸಿದ್ದರು. ಏತನ್ಮಧ್ಯೆ, ಕಾವೇರಿ ವಿದ್ಯಾಸಂಸ್ಥೆ ಅಧ್ಯಕ್ಷರಾಗಿರುವ ಪ್ರೊ.ಇಟ್ಟೀರ ಬಿದ್ದಪ್ಪ ಅವರ ಹೆಸರು ಕೂಡ ಅಧ್ಯಕ್ಷ ಸ್ಥಾನದ ಮುಂಚೂಣಿಗೆ ಬಂದಿತ್ತು. ಈ ಹಿಂದೊಮ್ಮೆ ಅಧ್ಯಕ್ಷ ಸ್ಥಾನಕ್ಕೆ ಬಿದ್ದಪ್ಪ ಅವರ ಹೆಸರು ಘೋಷಣೆಯಾಗಿತ್ತು. ಅಂತಿಮ ಕ್ಷಣದಲ್ಲಿ ಬದಲಾವಣೆ ಮಾಡಲಾಯಿತು.
ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಅವರ ಶ್ರೀರಕ್ಷೆಯಲ್ಲಿ ಮಹೇಶ್ ನಾಚಯ್ಯ ಅಕಾಡೆಮಿ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆAದು ವಿಶ್ಲೇಷಿಸಲಾಗುತ್ತಿದೆ. ಎ.ಎಸ್. ಪೊನ್ನಣ್ಣ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವ ಮುನ್ನವೇ ಮಹೇಶ್ ನಾಚಯ್ಯ ಅವರಿಗೆ ದೊಡ್ಡಮಟ್ಟದ ಬೆಂಬಲ ನೀಡುತ್ತಾ ಬಂದಿದ್ದರು. ಪೊನ್ನಣ್ಣ ಅವರ ಸಾಮಾಜಿಕ ಕಾರ್ಯ ಹಾಗೂ ರಾಜಕೀಯ ಚುಟವಟಿಕೆಗೂ ಪೂರ್ಣ ಪ್ರಮಾಣದಲ್ಲಿ ಬೆಂಬಲ ನೀಡುತ್ತಾ ಬಂದಿದ್ದರು. ಇದರ ಪ್ರತಿಫಲವಾಗಿ ಕೊಡವ ಅಕಾಡೆಮಿ ಅಧ್ಯಕ್ಷ ಸ್ಥಾನ ಸಿಕ್ಕಿದೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.
======
ಮಹೇಶ್ ನಾಚಯ್ಯ ಪರಿಚಯ
ಅಜ್ಜಿನಿಕಂಡ ಮಹೇಶ್ ನಾಚಯ್ಯ ಚೆಂಬೆಬೆಳ್ಳೂರು ಗ್ರಾಮದ ಅಜ್ಜಿನಿಕಂಡ ಸಿ. ಚಾಮಿ ಚಂಗಪ್ಪ- ಪೊನ್ನಮ್ಮ ಪೊನ್ನಕ್ಕಿ ದಂಪತಿ ಪುತ್ರನಾಗಿ ೭-೦೧-೧೯೬೭ ರಲ್ಲಿ ಜನಿಸಿದರು. ಪತ್ನಿ ಪ್ರಮೀಳಾ ನಾಚಯ್ಯ ಪೂಮಾಲೆ ಪತ್ರಿಕೆ ಸಹ ಸಂಪಾದಕಿಯಾಗಿದ್ದಾರೆ. ಪುತ್ರಿ ತನ್ವಿ ತಂಗಮ್ಮ, ಪುತ್ರ ಡಾನ್ ನಾಚಯ್ಯ ಇಬ್ಬರು ಬಿಇ ಪದವೀಧರರಾಗಿದ್ದಾರೆ. ಪೊದಕೋಟೆ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ, ದೇವಣಗೇರಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಬೈರನಾಡು ಚೆಂಬೆಳ್ಳೂರು ಪ್ರೌಢಶಾಲೆ, ವಿರಾಜಪೇಟೆ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶಿಕ್ಷಣ ಪಡೆದಿದ್ದಾರೆ.
ಸುಳ್ಯದ ನೆಹರು ಮೆಮೋರಿಯಲ್ ಪದವಿ ಕಾಲೇಜಿನಲ್ಲಿ ಬಿಎ ಪದವಿ ಹಾಗೂ ಮೈಸೂರು ವಿಶ್ವವಿದ್ಯಾಲಯದಲ್ಲಿ ಎಂಎ ಪದವಿ ಪಡೆದಿದ್ದಾರೆ. ೧೯೮೯ ರಿಂದ ೯೫ ರವರೆಗೆ ದೆಹಲಿ ಹಾಗೂ ಉತ್ತರಪ್ರದೇಶದಲ್ಲಿ ಉದ್ಯೋಗದಲ್ಲಿದ್ದರು.
ಪೂಮಾಲೆ ಕೊಡವ ವಾರಪತ್ರಿಕೆ ಸಂಪಾದಕ ಸ್ಥಾನದೊಂದಿಗೆ ೧೯೯೬ ರಿಂದ ಪತ್ರಿಕಾ ರಂಗ ಪ್ರವೇಶಿಸಿದರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಕೊಡಗು ಪ್ರೆಸ್ ಕ್ಲಬ್ ಸದಸ್ಯರಾಗಿದ್ದಾರೆ. ವಿರಾಜಪೇಟೆ ಕೊಡವ ಸಮಾಜ, ಗೋಣಿಕೊಪ್ಪ ಕೊಡವ ಸಮಾಜ, ಬೆಂಗಳೂರು ಕೊಡವ ಸಮಾಜ, ವಿರಾಜಪೇಟೆ ಪಟ್ಟಣ ಸಹಕಾರ ಬ್ಯಾಂಕ್ ನಿಯಮಿತ, ವಿರಾಜಪೇಟೆ ಎಪಿಸಿಎಂಎಸ್, ಕೊಡಗು ಜೇನು ಮೇಣ ಸಹಕಾರ ಸಂಘ ನಿಯಮಿತ, ಕೊಡಗು ಜಿಲ್ಲಾ ಫೆಡರೇಷನ್ ಸದಸ್ಯರಾಗಿದ್ದಾರೆ. ಪೂಮಾಲೆ ಬೊಳ್ಚೆ ಕೂಟ, ಕೊಡವ ತಕ್ಕ್ ಪರಿಷತ್, ಗೋಣಿಕೊಪ್ಪ ಕೊಡವ ಸಮಾಜ ಸ್ಥಾಪಕರಾಗಿದ್ದಾರೆ.
ಕೊಡಗು ಜಿಲ್ಲಾ ಜಾನಪದ ಪರಿಷತ್ತಿನ ವಿರಾಜಪೇಟೆ ತಾಲೂಕು ಅಧ್ಯಕ್ಷರಾಗಿ, ಸಿರಿಗನ್ನಡ ವೇದಿಕೆ ವಿರಾಜಪೇಟೆ ತಾಲೂಕು ಅಧ್ಯಕ್ಷರಾಗಿ, ಕೊಡಗು ಪ್ರೆಸ್ ಕ್ಲಬ್ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ಮಂಗಳೂರು ವಿವಿ ವತಿಯಿಂದ ಪ್ರಕಟಿಸಿರುವ ಕೊಡವ ಭಾಷಾ ಪದವಿ ಹಾಗೂ ಕೊಡವ ಭಾಷಾ ಸ್ನಾತಕೋತ್ತರ ಪಠ್ಯಪುಸ್ತಕ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸಿದರು. ಕೊಡವ- ಕನ್ನಡ- ಇಂಗ್ಲೀಷ್ ಭಾಷಾ ಶಬ್ದಕೋಶ ತಯಾರಿ ಸಮಿತಿ ಸದಸ್ಯರಾಗಿದ್ದರು.
ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಸದಸ್ಯರಾಗಿ ಸ್ಥಾಯಿ ಸಮಿತಿ ಹಾಗೂ ಪ್ರಚಾರ- ಪ್ರಕಟಣಾ ಸಮಿತಿ ಮುಖ್ಯಸ್ಥನಾಗಿ ೫ ವರ್ಷ ಕೊಡಗು ಹಾಗೂ ಹೊರ ಭಾಗಗಳಲ್ಲಿ ಹಲವು ಸಾಂಸ್ಕೃತಿಕ ಕಾರ್ಯಕ್ರಮ, ಪುಸ್ತಕ ಪ್ರಕಟಣೆ ಜವಾಬ್ದಾರಿ ನಿರ್ವಹಿಸಿದ್ದಾರೆ. ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿರುವ ಮಹೇಶ್ ನಾಚಯ್ಯ ವಿವಿಧ ಸಂಘ- ಸಂಸ್ಥೆಗಳಿAದ ಸನ್ಮಾನ ಸ್ವೀಕರಿಸಿದ್ದಾರೆ.
ಕೊಡವ ಭಾಷೆಯಲ್ಲಿ ೪೦ ಲೇಖಕರು ಬರೆದ ಪುಸ್ತಕ ಹೊರತಂದು ಕೊಡವ ಸಾಹಿತ್ಯ- ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅನಾವರಣ ಮಾಡಿದ್ದಾರೆ. ಹೊಸದಿಲ್ಲಿಯಲ್ಲಿ ಕೊಡವ ತಕ್ಕ್ ಪರಿಷತ್ ಆಯೋಜಿಸಿದ್ದ ಕೊಡವ ತಕ್ಕ್ ನಮ್ಮೆಯಲ್ಲಿ ಪಟ್ಟೋಲೆ ಪಳಮೆಯ ಕೊಡವಾನುವಾದ ಪುಸ್ತಕ ಬಿಡುಗಡೆ ಮಾಡಿದರು.
======
